ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು '10 ಪರ್ಸೆಂಟ್ ಕಮಿಷನ್ ಸರಕಾರ' ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರದ ನಂಗಾನಾಚ್ ನಡೆಯುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಪ್ರಧಾನಿ ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಇಂಧನ ಸಚಿವ ಡಿ.ಕೆ. ಶಿವಕುಮಾರ್ 'ಇದು ನಿಜಕ್ಕೂ ರಾಜ್ಯಕ್ಕೆ ಮಾಡಿದ ಅಪಮಾನ,' ಎಂದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಮನೆಗೆ ಹೋಗಲು ಕ್ಷಣಗಣನೆ ಶುರುವಾಗಿದೆ ಎಂಬ ಪ್ರಧಾನಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, 2019ರಲ್ಲಿ ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ಜ್ಞಾಪಕದಲ್ಲಿರಲಿ,'' ಎಂದರು.
''10 ಪರ್ಸೆಂಟ್ ಕಮೀಷನ್ ಸರಕಾರವೆಂದು ಪ್ರಧಾನಿ ಹೇಳಿದ್ದು ಯಾವ ಇಲಾಖೆ, ಯಾವ ಯೋಜನೆಗಳಲ್ಲಿ ಎಂಬುದನ್ನು ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಅವರ ಮಾತಿಗೆ ಅರ್ಥ ಬರುವುದಿಲ್ಲ. ಜನರ ಅಪೇಕ್ಷೆಯಂತೆ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನೇ ರದ್ದುಪಡಿಸಿರುವಾಗ ಆ ಯೋಜನೆಯಲ್ಲಿ ಕಮಿಷನ್ ಎಲ್ಲಿಂದ ಬರುತ್ತದೆ? ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ,'' ಎಂದರು.
ಮಹದಾಯಿ ಪ್ರಸ್ತಾಪ ಇಲ್ಲ
ಪ್ರಧಾನಿ ಅವರ ಒಂದು ಗಂಟೆ ಭಾಷಣದಲ್ಲಿ ಮಹದಾಯಿ ನದಿ ನೀರು ಹಂಚಿಕೆ ವಿಷಯವಾಗಲಿ ಇಲ್ಲವೇ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿನ ರೈತರ ಸಾಲ ಮನ್ನಾ ಬಗ್ಗೆಯಾಗಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಮಹದಾಯಿ ಹೋರಾಟ ತೀವ್ರವಾಗಿದ್ದರೂ, ಗೋವಾದಿಂದ ಕುಡಿಯುವ ನೀರು ಕೊಡಿಸಲು ಇವರಿಗೆ ಸಾಧ್ಯವಾಗಿಲ್ಲ.
ಉ.ಪ್ರದೇಶ ಯಾಕೆ ಬಿಟ್ಟಿರಿ?
ಕರ್ನಾಟಕ ಅಪರಾಧಗಳ ರಾಜ್ಯವಂತೆ. ಉತ್ತರ ಪ್ರದೇಶದಲ್ಲಿ ಅತ್ಯಧಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ಬಿಜೆಪಿ ಸರಕಾರವಿರುವ ರಾಜ್ಯಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಪರಾಧಗಳು ದಾಖಲಾಗಿದ್ದರೂ ಆ ಬಗ್ಗೆ ಪ್ರಧಾನಿ ಮಾತನಾಡುವುದಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ.
ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಮೋದಿ ಅವರ ಆಗಮನ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರು ತಮ್ಮ ಪಕ್ಷದ ಪರ ಪ್ರಚಾರ ಮಾಡಿ ಹೋಗುತ್ತಾರೆ ಅಷ್ಟೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ