ಆ್ಯಪ್ನಗರ

ಇಂದಿನಿಂದ 2 ದಿನ ಬಿಜೆಪಿ ರಾಷ್ಟ್ರೀಯ ಪರಿಷತ್‌ ಸಭೆ

'ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌' ಮಂತ್ರದೊಂದಿಗೆ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ಪಡೆಯಲು 'ಮೇಲ್ವರ್ಗದ ಬಡವರಿಗೆ ಮೀಸಲು ಅಸ್ತ್ರ ' ಸೇರಿ ನಾನಾ ತಂತ್ರಗಾರಿಕೆಗಳನ್ನು ಪ್ರಯೋಗಿಸುತ್ತಿರುವ ಬಿಜೆಪಿಗೆ ಮಹತ್ವದ ಸಭೆಯಾಗಿದೆ.

Vijaya Karnataka 11 Jan 2019, 5:30 am
ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಲು ಭಾರಿ ರಣತಂತ್ರಗಳನ್ನು ರೂಪಿಸುತ್ತಿರುವ ಬಿಜೆಪಿ ದಿಲ್ಲಿಯಲ್ಲಿ ಶುಕ್ರವಾರದಿಂದ ಎರಡು ದಿನಗಳ ರಾಷ್ಟ್ರೀಯ ಪರಿಷತ್‌ ಸಭೆ ಆಯೋಜಿಸಿದೆ.
Vijaya Karnataka Web ಬಿಜೆಪಿ
ಬಿಜೆಪಿ


'ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌' ಮಂತ್ರದೊಂದಿಗೆ ಎಲ್ಲ ವರ್ಗಗಳನ್ನು ವಿಶ್ವಾಸಕ್ಕೆ ಪಡೆಯಲು 'ಮೇಲ್ವರ್ಗದ ಬಡವರಿಗೆ ಮೀಸಲು ಅಸ್ತ್ರ ' ಸೇರಿ ನಾನಾ ತಂತ್ರಗಾರಿಕೆಗಳನ್ನು ಪ್ರಯೋಗಿಸುತ್ತಿರುವ ಬಿಜೆಪಿಗೆ ಮಹತ್ವದ ಸಭೆಯಾಗಿದೆ. ಇದು ಲೋಕಾ ಸಮರಕ್ಕೆ ಪಕ್ಷದ ಪ್ರಚಾರ ಮುನ್ನುಡಿಯಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಸಭೆಯಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರು, ಜಿಲ್ಲಾ ಘಟಕಗಳ ಮುಖ್ಯಸ್ಥರು ಹೀಗೆ ಎಲ್ಲರೂ ಸೇರಿ ಸುಮಾರು 12 ಸಾವಿರ ಬಿಜೆಪಿ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಕ್ಷದ ಅಧ್ಯಕ್ಷ ಅಮಿತ್‌ ಶಾ ಸಭೆಗೆ ಚಾಲನೆ ನೀಡಲಿದ್ದು, ಪ್ರಧಾನಿ ಮೋದಿ ಶನಿವಾರ ಸಮಾರೋಪ ಭಾಷಣ ಮಾಡಲಿದ್ದಾರೆ. ಪ್ರಧಾನಿ ಎರಡೂ ದಿನ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮೀಸಲು ಅಸ್ತ್ರ ಬಳಕೆ: ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ನಡೆದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಎಚ್ಚೆತ್ತುಕೊಂಡ ಬಿಜೆಪಿ ಸೋಲಿನ ಪರಾಮರ್ಶೆ ನಡೆಸಿದೆ. ಲೋಕಸಭೆ ಚುನಾವಣೆಯಲ್ಲಿ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿದೆ.

ಈ ರಾಜ್ಯಗಳಲ್ಲಿ ಪಕ್ಷಕ್ಕೆ ದುಬಾರಿಯಾದ ರೈತರ ಆಕ್ರೋಶ ಮತ್ತು ಮೇಲ್ವರ್ಗದವರ ಅಸಮಾಧಾನ ತಣಿಸಲು, ಮೇಲ್ವರ್ಗದ ಬಡವರಿಗೆ ಮೀಸಲು ಅಸ್ತ್ರ ಪ್ರಯೋಗಿಸಿತು. ಮೇಲ್ವರ್ಗದ ಬಡವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 10ರಷ್ಟು ಮೀಸಲು ಕಲ್ಪಿಸಲು ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಸರಕಾರ, ಸಂಸತ್ತಿನ ಒಪ್ಪಿಗೆ ಪಡೆದು ಪ್ರತಿಪಕ್ಷಗಳಿಗೆ ಎದಿರೇಟು ನೀಡಿದೆ. ಈ ವಿಷಯವೇ ಸಭೆಯಲ್ಲಿ ಚರ್ಚೆಯಾಗಲಿದ್ದು, ಇದನ್ನೇ ಬಳಸಿಕೊಂಡು ಅಬ್ಬರದ ಪ್ರಚಾರ ನಡೆಸುವಂತೆ ಮೋದಿ ಅವರು ಪಕ್ಷದ ಸಂಸದರು, ಶಾಸಕರಿಗೆ ಕರೆ ನೀಡುವ ಸಾಧ್ಯತೆಗಳಿವೆ.

ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ, ಉಜ್ವಲಾ, ಮುದ್ರಾ ಯೋಜನೆ ಸೇರಿ ನಾನಾ ಕಾರ‍್ಯಕ್ರಮಗಳು ಹಾಗೂ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ, ದಲಿತರ ಮತ್ತು ಆದಿವಾಸಿಗಳ ಹಕ್ಕುಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಬಾಯಿ ಮುಚ್ಚಿಸುವುದು ಹೇಗೆ ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ.

12,000 ಪ್ರತಿನಿಧಿಗಳು ಬಿಜೆಪಿಯ ರಾಷ್ಟ್ರೀಯ ಪರಿಷತ್‌ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ