ಆ್ಯಪ್ನಗರ

ಕಾಶ್ಮೀರ ಕಣಿವೆಯಲ್ಲಿ ಕಮಲ ಕಲರವ: ಉಗ್ರ ಪೀಡಿತ ಜಿಲ್ಲೆಗಳಲ್ಲೂ ಗೆಲುವು

ಜಮ್ಮು ಪುರಸಭೆಯ 75 ವಾರ್ಡ್‌ಗಳ ಪೈಕಿ ಬಿಜೆಪಿ 43 ಸ್ಥಾನಗಳನ್ನು ಜಯಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್‌ 14 ಸ್ಥಾನಗಳಿಗೆ ಸಮಾಧಾನ ಪಟ್ಟಿದ್ದರೆ, ಪಕ್ಷೇತರರು 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. 2005ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 25 ಸದಸ್ಯರನ್ನು ಗೆಲ್ಲಿಸಿಕೊಂಡಿದ್ದ ಬಿಜೆಪಿ ಈ ಬಾರಿ ಆ ಸಂಖ್ಯೆಯನ್ನು 43ಕ್ಕೆ ಹೆಚ್ಚಿಸಿಕೊಂಡು ಎದುರಾಳಿಗಳನ್ನು ಬೆಚ್ಚಿ ಬೀಳಿಸಿದೆ.

Vijaya Karnataka 21 Oct 2018, 10:31 am
ಶ್ರೀನಗರ: ಉಗ್ರರ ಹಾವಳಿ ಪೀಡಿತ ಜಮ್ಮು-ಕಾಶ್ಮೀರದ 52 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತಷ್ಟು ಬಲ ವೃದ್ಧಿಸಿಕೊಳ್ಳಲು ಪಕ್ಷಕ್ಕೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Vijaya Karnataka Web AMIT SHAH MODI


ನಾಲ್ಕು ಹಂತಗಳಲ್ಲಿ ನಡೆದ ಮತದಾನದ ಎಣಿಕೆ ಕಾರ್ಯ ಶನಿವಾರ ತಡರಾತ್ರಿವರೆಗೂ ನಡೆಯಿತು. 1,145 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆ. ಕಣಿವೆ ರಾಜ್ಯಕ್ಕೆ ಸಂಬಂಧಿಸಿ ಸಂವಿಧಾನದ 35/ಎ ವಿಧಿ ಮಾನ್ಯತೆ ಕುರಿತು ಕೇಂದ್ರ ಸರಕಾರದ ನಿಲುವು ಖಂಡಿಸಿ ಪಿಡಿಪಿ, ನ್ಯಾಷನಲ್‌ ಕಾನಧಿರೆನ್ಸ್‌ , ಸಿಪಿಐ(ಎಂ) ಮತ್ತು ಬಿಎಸ್ಪಿ ಚುನಾವಣೆಯನ್ನು ಬಹಿಷ್ಕರಿಸಿದ್ದವು. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.

ಜಮ್ಮುವಿನಲ್ಲಿ ಗೆಲುವು:
ಜಮ್ಮು ಪುರಸಭೆಯ 75 ವಾರ್ಡ್‌ಗಳ ಪೈಕಿ ಬಿಜೆಪಿ 43 ಸ್ಥಾನಗಳನ್ನು ಜಯಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್‌ 14 ಸ್ಥಾನಗಳಿಗೆ ಸಮಾಧಾನ ಪಟ್ಟಿದ್ದರೆ, ಪಕ್ಷೇತರರು 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. 2005ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 25 ಸದಸ್ಯರನ್ನು ಗೆಲ್ಲಿಸಿಕೊಂಡಿದ್ದ ಬಿಜೆಪಿ ಈ ಬಾರಿ ಆ ಸಂಖ್ಯೆಯನ್ನು 43ಕ್ಕೆ ಹೆಚ್ಚಿಸಿಕೊಂಡು ಎದುರಾಳಿಗಳನ್ನು ಬೆಚ್ಚಿ ಬೀಳಿಸಿದೆ. ಕಾಂಗ್ರೆಸ್‌ ಬಲ 26ರಿಂದ 14ಕ್ಕೆ ಕುಸಿದಿದೆ.

ಜಮ್ಮುವಿನ ಇತರೆ ಪ್ರದೇಶಗಳ 446 ವಾರ್ಡ್‌ಗಳನ್ನೊಳಗೊಂಡ 36 ಪುರಸಭೆ ಪೈಕಿ 15 ಅನ್ನು ಗೆದ್ದಿರುವ ಬಿಜೆಪಿ ಮುಂಚೂಣಿಯಲ್ಲಿದೆ. ಪಕ್ಷೇತರರು 12 ಕಡೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಕಾಂಗ್ರೆಸ್‌ ಐದಕ್ಕೆ ಸಮಾಧಾನಪಟ್ಟುಕೊಂಡಿದೆ. ‘‘ಎನ್‌ಸಿ ಮತ್ತು ಪಿಡಿಪಿ ಗೈರಿನಿಂದಾಗಿ ಪಕ್ಷೇತರ ಅಭ್ಯರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ,’’ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕಾಶ್ಮೀರದಲ್ಲೂ ಸಾಧನೆ:

ದಕ್ಷಿಣದ ಕಾಶ್ಮೀರದಲ್ಲಿ ಸದಾ ಉಗ್ರರ ಉಪಟಳಕ್ಕೆ ಒಳಗಾಗುವ ಅನಂತನಾಗ್‌, ಕುಲ್ಗಾಮ್‌, ಪುಲ್ವಾಮಾ, ಶೋಪಿಯಾನ್‌ ಜಿಲ್ಲೆಗಳಲ್ಲಿ ಬಿಜೆಪಿ 20 ಸ್ಥಳೀಯ ಸಂಸ್ಥೆಗಳನ್ನು ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಶ್ರೀನಗರ, ಬಾರಾಮುಲ್ಲಾ, ಕುಪ್ವಾರ, ಬಡ್ಗಾಮ್‌, ಬಂಡಿಪೋರ ಮತ್ತು ಗಂದೇರ್‌ಬಾಲ್‌ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಮತ್ತು ಪಕ್ಷೇತರರು ಮೇಲುಗೈ ಸಾಧಿಸಿದ್ದಾರೆ. ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಕಡೆ ಸಮಾನ ಮನಸ್ಕರೊಂದಿಗೆ ಸೇರಿ ಅಧಿಕಾರ ಹಿಡಿಯುವುದಾಗಿ ಕಾಂಗ್ರೆಸ್‌ ಹೇಳಿಕೊಂಡಿದೆ.
ಇದು ಕಣಿವೆ ರಾಜ್ಯದ ಜನರ ಗೆಲುವು. ಈಗ ಲಭಿಸಿರುವ ಅಧಿಕಾರವನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತೇವೆ.
- ರವೀಂದ್ರ ರೈನಾ, ರಾಜ್ಯ ಬಿಜೆಪಿ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ