ಆ್ಯಪ್ನಗರ

ಚಿರತೆ ಜತೆ ಹೋರಾಡಿ 7 ವರ್ಷದ ಬಾಲಕನನ್ನು ರಕ್ಷಿಸಿದ 14 ವರ್ಷದ ಬಾಲಕ

ಥಾಣೆ ಜಿಲ್ಲೆಯ ಮುರ್ಬಾದ್ ತಾಲೂಕಿನ ತೊಕ್ವಾಡೆ ಬಳಿಯ ಕರ್ಪತ್‌ವಾಡಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

TIMESOFINDIA.COM 17 Jun 2019, 2:05 pm
ಕಲ್ಯಾಣ: ಚಿರತೆಯಂತಹ ಕ್ರೂರ ಪ್ರಾಣಿಯ ಜತೆ ದೊಡ್ಡವರೇ ಹೋರಾಡಿ ಬದುಕಲಾಗದು. ಅಂತಹದರಲ್ಲಿ 14 ವರ್ಷದ ಹುಡುಗನೊಬ್ಬ ತನ್ನ ಸೋದರ ಸಂಬಂಧಿಯಾಗಿರುವ 7 ವರ್ಷದ ಬಾಲಕನನ್ನು ರಕ್ಷಿಸಲು ಚಿರತೆ ಜತೆ ಹೋರಾಡಿದ ಧೀರೋದಾತ್ತ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
Vijaya Karnataka Web Children


ಥಾಣೆ ಜಿಲ್ಲೆಯ ಮುರ್ಬಾದ್ ತಾಲೂಕಿನ ತೊಕ್ವಾಡೆ ಬಳಿಯ ಕರ್ಪತ್‌ವಾಡಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಶುಕ್ರವಾರ ಮಧ್ಯಾಹ್ನ ನರೇಶ್ ಕಲುರಾಮ್ ಭಾವ್ಲಾ (14) ಮತ್ತು ಹರ್ಷದ್ ವಿಠ್ಠಲ್ ಭಾಲಾ (7) ತಮ್ಮ ಅಜ್ಜಿ ಜತೆ ಮುರ್ಬಾದ್ ಅರಣ್ಯ ಪ್ರದೇಶದ ಸನಿಹದಲ್ಲಿರುವ ಹೊಲದಲ್ಲಿ ಆಟವಾಡಿಕೊಂಡಿದ್ದರು. ಅಜ್ಜಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರೆ ಮಕ್ಕಳಿಬ್ಬರು ಬ್ಲ್ಯಾಕ್‌ಬೆರಿ ಹಣ್ಣುಗಳನ್ನು ಹುಡುಕಿಕೊಂಡು ಹೋಗಿದ್ದರು. ಆ ಸಂದರ್ಭದಲ್ಲಿ ಪೊದೆಯಲ್ಲಿದ್ದ ಚಿರತೆಯೊಂದು ಚಿಕ್ಕ ಹುಡುಗನ ಮೇಲೆ ದಾಳಿ ಮಾಡಿದೆ. ತಕ್ಷಣ ನರೇಶ್ ಚಿರತೆ ಮೇಲೆ ಕಲ್ಲು ಬೀಸಾಡಿ, ಅಲ್ಲೇ ಇದ್ದ ದೊಣ್ಣೆಯನ್ನು ಎತ್ತಿಕೊಂಡು ಚಿರತೆ ಮೇಲೆ ದಾಳಿ ಮಾಡಿದ್ದಾನೆ. ಜತೆಗೆ ಸಹಾಯಕ್ಕಾಗಿ ಕೂಗಿ ಕೊಂಡಿದ್ದಾನೆ.

ಮಕ್ಕಳ ಕೂಗು ಕೇಳಿ ಅಜ್ಜಿ ಸಹ ಕತ್ತಿಯನ್ನು ಎತ್ತಿಕೊಂಡು ಓಡಿ ಬಂದಿದ್ದಾರೆ. ಬೆದರಿದ ಚಿರತೆ ಸ್ಥಳದಿಂದ ಪರಾರಿಯಾಗಿದ್ದು ಗಾಯಗೊಂಡಿದ್ದ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಗಮನಾರ್ಹ ಸಂಗತಿ ಎಂದರೆ ಮರುದಿನ ಅದೇ ಚಿರತೆ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಚಿರತೆ 10ರಿಂದ 12 ವರ್ಷ ವಯಸ್ಸಿನದಾಗಿದ್ದು ಅದಕ್ಕೆ ಆಂತರಿಕವಾಗಿ ಮತ್ತು ಬಾಹ್ಯವಾಗಿ ಯಾವುದೇ ಗಾಯವಾಗಿಲ್ಲ. ವೃದ್ಧಾಪ್ಯದಿಂದಾಗಿ ಅದು ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.

ನರೇಶನ ಸಾಹಸಕ್ಕೆ ಸ್ಥಳೀಯರು ಮತ್ತು ಪೊಲೀಸ್ ಇಲಾಖೆಯಿಂದ ಶ್ಲಾಘನೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ