ಆ್ಯಪ್ನಗರ

ಅಪ್ಪ-ಅಮ್ಮನ ಜಗಳದಿಂದ ಜರ್ಜರಿತನಾಗಿದ್ದೇನೆ, ಸಾಯಲು ಅನುಮತಿ ಕೊಡಿ: ರಾಷ್ಟ್ರಪತಿಯಲ್ಲಿ ಬಾಲಕನ ಮನವಿ

ರಾಷ್ಟ್ರಪತಿಗೆ ಪತ್ರ ಬರೆದಿರುವ ಬಾಲಕ ಇಚ್ಛಾ ಮರಣಕ್ಕೆ ಅನುಮತಿ ನೀಡಿ ಎಂದು ಮನವಿ ಮಾಡಿದ್ದಾನೆ. ಬಾಲಕನ ಮಾರ್ಮಿಕ ಮೊರೆಗೆ ಪ್ರಧಾನ ಮಂತ್ರಿ ಕಾರ್ಯಾಲಯ ಕಂಬನಿ ಮಿಡಿದಿದ್ದು, ಆತನ ಸಮಸ್ಯೆಯ ತನಿಖೆಗೆ ಆದೇಶಿಸಲಾಗಿದೆ.

Times Now 17 Jul 2019, 12:45 pm
ಭಾಗಲ್ಪುರ/ ಹೊಸದಿಲ್ಲಿ: ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅನ್ನುತ್ತಾರೆ. ಇಂತಹದ್ದೇ ಒಂದು ಪ್ರಕರಣದಲ್ಲಿ ನೊಂದಿರುವ ಬಾಲಕನೊಬ್ಬ ಸಾಯಲು ಅನುಮತಿ ಕೊಡಿ ಎಂದು ರಾಷ್ಟ್ರಪತಿಯ ಮೊರೆ ಹೋಗಿದ್ದಾನೆ.
Vijaya Karnataka Web Boy 23


ಬಿಹಾರದ ಈ ಬಾಲಕನಿಗೆ ಅಪ್ಪ ಅಮ್ಮನ ಜಗಳ ಎಷ್ಟು ಜರ್ಜರಿತಗೊಳಿಸಿದೆ ಎಂದರೆ ಸಾವೆಂದರೇನು ಎಂಬುದನ್ನು ಅರಿಯದ ವಯಸ್ಸಿನಲ್ಲವನು ಜೀವನ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದಾನೆ. ಇದಕ್ಕಾಗಿ ಅನುಮತಿ ಕೋರಿ ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದಾನೆ. ಮಾನವೀಯ ಸಂವೇದನೆಯನ್ನೇ ಅಲ್ಲಾಡಿಸುವಂತಹ ಈ ಮನವಿಯನ್ನು ಸಲ್ಲಿಸಿದ್ದು 15 ವರ್ಷದ ಬಾಲಕ. ಆತನ ತಂದೆ-ತಾಯಿ ಜತೆಗಿಲ್ಲ. ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಭಾಗಲ್ಪುರ ಮೂಲದ ಬಾಲಕ ಸದ್ಯ ತಂದೆಯೊಂದಿಗೆ ಜಾರ್ಖಂಡ್‌ನ ದೇವಘರ್‌ನಲ್ಲಿ ವಾಸವಾಗಿದ್ದಾನೆ. ತಂದೆ ಗ್ರಾಮೀಣಾಭಿವೃದ್ಧಿ ಅಭಿವೃದ್ಧಿ ಇಲಾಖೆಯಲ್ಲಿ ಜಿಲ್ಲಾ ವ್ಯವಸ್ಥಾಪಕರಾಗಿದ್ದರೆ, ತಾಯಿ ಪಟ್ನಾದ ಬ್ಯಾಂಕೊಂದರಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದಾರೆ. ಚಿಕ್ಕಂದಿನಿಂದ ತಂದೆ- ತಾಯಿಯ ಜಗಳದಲ್ಲಿ ಬಡವಾಗುತ್ತಿದ್ದ ಕೂಸು ಇದೇ ಕಾರಣಕ್ಕೆ ಅಜ್ಜನ ಜತೆಗೆ ಭಾಗಲ್ಪುರದ ಕಹಲ್‌ಗಾಂವ್‌ಗೆ ಹೋಗುಳಿಯುವಂತಾಯಿತು. ಮತ್ತೀಗ ಆತನ ಅಜ್ಜ ನಿವೃತ್ತರಾಗಿದ್ದು ಮಗನೊಂದಿಗೆ ದೇವಘರದಲ್ಲಿ ನೆಲೆಸಿದ್ದಾರೆ.

ನನ್ನ ಸೊಸೆಯದ್ದೇ ತಪ್ಪು ಎಂದು ಅಜ್ಜ ಹೇಳುತ್ತಿದ್ದಾರೆ. ಹೀಗೆ ಒಬ್ಬರನೊಬ್ಬರು ದೂಷಿಸುವುದರಲ್ಲೇ ಎಲ್ಲರೂ ಮಗ್ನರಾಗಿದ್ದರೆ ಬಾಲಕ ಹತಾಶೆಗೆ ತಳ್ಳಲ್ಪಟ್ಟಿದ್ದಾನೆ.

''ನನ್ನ ಅಪ್ಪ ಅಮ್ಮನ ಜಗಳದಿಂದ ಬದುಕು ದುಸ್ತರವಾಗಿದೆ. ದಿನ, ಪ್ರತಿದಿನ ಜಗಳದಲ್ಲೇ ಕಳೆಯುವ ಅವರ ವರ್ತನೆಯಿಂದ ನನ್ನ ವಿದ್ಯಾಭ್ಯಾಸಕ್ಕೆ ಕೂಡ ತೊಂದರೆಯಾಗುತ್ತಿದೆ. ಇದೆಲ್ಲದರಿಂದ ಬೇಸತ್ತು ನಾನು ಸಾಯಲು ಬಯಸುತ್ತಿದ್ದೇನೆ'',- ಎಂದು ಬಾಲಕ ಪತ್ರದಲ್ಲಿ ಬರೆದಿದ್ದು ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿಗೂ ಒಂದೊಂದು ಪ್ರತಿಯನ್ನು ಕಳುಹಿಸಿದ್ದಾನೆ.

ಪತ್ರ ತಲುಪಿದ್ದಂತೆ ಪ್ರಧಾನಿ ಕಾರ್ಯಾಲಯದವರು ತ್ವರಿತ ತನಿಖೆಗೆ ಆದೇಶಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ