ಆ್ಯಪ್ನಗರ

ಮತಿಭ್ರಾಂತನಾದರೆ ಬಂದೂಕು ಕೊಟ್ಟಿದ್ದೇಕೆ: ಯೋಧನ ಪತ್ನಿ

ಮಾನಸಿಕವಾಗಿ ಅಸ್ವಸ್ಥನಾಗಿದ್ದರೆ, ಆತನ ಕೈಗೆ ಬಂದೂಕು ನೀಡಿದ್ದೇಕೆ, ಗಡಿ ಕಾಯುವಂಥ ದೊಡ್ಡ ಜವಾಬ್ದಾರಿ ನೀಡಿದ್ದೇಕೆ?' ಎಂದು ಯೋಧನ ಪತ್ನಿ ಶರ್ಮಿಳಾ ಪ್ರಶ್ನಿಸಿದ್ದಾರೆ.

ವಿಕ ಸುದ್ದಿಲೋಕ 12 Jan 2017, 11:31 am
ಚಂಡೀಗಢ: ಅರೆಸೇನಾ ಪಡೆ ಸಿಬ್ಬಂದಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದಾಗಿ ದೂರಿ ವಿಡೀಯೋ ಬಹಿರಂಗಪಡಿಸಿ ಸುದ್ದಿಯಾಗಿರುವ ಬಿಎಸ್‌ಎಫ್‌ ಯೋಧನ ಪರ ಪತ್ನಿ ಹೇಳಿಕೆ ನೀಡಿದ್ದಾರೆ.
Vijaya Karnataka Web bsf jawan why give my husband a gun if hes unstable asks bsf jawans wife
ಮತಿಭ್ರಾಂತನಾದರೆ ಬಂದೂಕು ಕೊಟ್ಟಿದ್ದೇಕೆ: ಯೋಧನ ಪತ್ನಿ


'ನನ್ನ ಪತಿ ಮಾನಸಿಕವಾಗಿ ಅಸ್ವಸ್ಥ ಅಥವಾ ಅಶಿಸ್ತಿನ ವ್ಯಕ್ತಿಯಾಗಿದ್ದರೆ, ಆತನ ಕೈಗೆ ಬಂದೂಕು ನೀಡಿದ್ದೇಕೆ, ದೇಶದ ಪ್ರಮುಖ ಗಡಿ ಭಾಗ ಕಾಯುವಂಥ ದೊಡ್ಡ ಜವಾಬ್ದಾರಿ ನೀಡಿದ್ದೇಕೆ?' ಎಂದು ತೇಜ್‌ ಬಹಾದೂರ್‌ ಯಾದವ್‌ ಪತ್ನಿ ಶರ್ಮಿಳಾ ಯಾದವ್‌ ಪ್ರಶ್ನಿಸಿದ್ದಾರೆ.

'ಅನ್ಯಾಯವನ್ನು ಸಹಿಸಿಕೊಳ್ಳದಿರುವುದು ಅವರ ಗುಣ ಆದರೆ, ಸೇವಾ ಅವಧಿಯುದ್ದಕ್ಕೂ ಇದನ್ನೇ ಸಹಿಸಿಕೊಂಡು ಬಂದಿದ್ದಾರೆ,' ಎಂದು ಶರ್ಮಿಳಾ ಹೇಳಿದ್ದಾರೆ.

ಕಳಪೆ ಆಹಾರ ಕುರಿತ ಯೋಧನ ವೀಡಿಯೋ ಮೂರು ದಿನಗಳಲ್ಲಿ ಸುಮಾರು 90 ಲಕ್ಷ ಮಂದಿ ವೀಡಿಯೋ ವೀಕ್ಷಿಸಿದ್ದು, 4.4 ಲಕ್ಷ ಮಂದಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದ್ದಾರೆ.

'ಬಿಎಸ್‌ಎಫ್‌ಗೆ ಸೇರ್ಪಡೆಗೊಳ್ಳುವ ಮೊದಲು ತರಬೇತಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಚಿನ್ನದ ಪದಕ ಗಳಿಸಿದ್ದರು. 20 ವರ್ಷಗಳ ಅವಧಿಯಲ್ಲಿ ಬಿಎಸ್‌ಎಫ್‌ನಿಂದ 14 ಪ್ರಶಸ್ತಿಗಳು ಬಂದಿವೆ,' ಎಂದು ಹರಿಯಾಣಾದ ರೆವಾರಿಯಿಂದ ದೂರವಾಣಿ ಮೂಲಕ ಮಾತನಾಡಿದ ಶರ್ಮಿಳಾ ಹೇಳಿದ್ದಾರೆ.

'ಸತ್ಯ ಹೇಳಿದ್ದಕ್ಕಾಗಿಯೇ ಬಿಎಸ್‌ಎಫ್‌ ನನ್ನ ಪತಿಯನ್ನು ಶಿಕ್ಷಿಸಿತ್ತು. ಬಿಎಸ್‌ಎಫ್‌ ಶಿಸ್ತಿನ ಪಡೆ, ಸಶಸ್ತ್ರ ಪಡೆಗಳಲ್ಲಿ ಅತಿ ಸಣ್ಣ ತಪ್ಪನ್ನೂ ಸಹಿಸಿಕೊಳ್ಳುವುದಿಲ್ಲ. ಅವರ ವರ್ತನೆ ಸರಿಯಿರಿಲಿಲ್ಲವಾದರೆ, ಅವರನ್ನು ಇಷ್ಟು ದಿನ ಉಳಿಸಿಕೊಂಡಿದ್ದು ಏಕೆ,'ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಗೃಹ ಸಚಿವಾಲಯ ತನಿಖೆಗೆ ಆದೇಶಿಸಿದ್ದು, ಯೋಧ ಕರ್ತವ್ಯನಿರತನಾಗಿದ್ದಾಗ ತನ್ನ ಜತೆಗೆ ಮೊಬೈಲ್‌ ಇಟ್ಟುಕೊಂಡಿದ್ದುದು ಏಕೆ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ.

2010ರಲ್ಲಿ ಅಶಿಸ್ತಿನ ಕಾರಣಕ್ಕಾಗಿ ಈ ಯೋಧನನ್ನು ಕೋರ್ಟ್‌ ಮಾರ್ಷಲ್‌ಗೆ ಗುರಿಪಡಿಸಲಾಗಿತ್ತು. ಆದರೆ, ಕುಟುಂಬಕ್ಕೆ ತೊಂದರೆಯಾಗದಿರಲಿ ಎಂದು ವಜಾಗೊಳಿಸಿರಲಿಲ್ಲ. 4 ವರ್ಷಗಳಿಂದ ಯೋಧನ ವರ್ತನೆಯಲ್ಲಿ ಸಮಸ್ಯೆಗಳಿದ್ದವು. ಮೇಲಾಧಿಕಾರಿಗಳ ಮೇಲೆ ಕೈ ಮಾಡುವುದು, ಕುಡಿದು ಕರ್ತವ್ಯಕ್ಕೆ ಹಾಜರಾಗುವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಈತ ದುರ್ವರ್ತನೆ ತೋರಿದ್ದಾನೆ. ಈ ಎಲ್ಲಾ ಕಾರಣಗಳಿಗಾಗಿ ಈತನಿಗೆ ಬಡ್ತಿ ಸಿಕ್ಕಿರಲಿಲ್ಲ. ಹೀಗಾಗಿ ಭ್ರಮನಿರಸನ ಆಗಿರಬಹುದು ಎಂದು ಹೇಳಲಾಗಿದೆ.

ಪತಿ ಇನ್ನೂ 5 ವರ್ಷಗಳ ಕಾಲ ಬಿಎಸ್‌ಎಫ್‌ನಲ್ಲಿ ಸೇವೆ ಮುಂದುವರಿಸಲಿ ಎಂಬುದು 17 ವರ್ಷದ ಪುತ್ರ ರೋಹಿತ್‌ ಜತೆ ವಾಸವಿರುವ ಶರ್ಮಿಳಾ ಬಯಕೆ. ಸ್ವಯಂ ನಿವೃತ್ತಿ ಕೋರಿ ಯೋಧ ಸಲ್ಲಿಸಿದ್ದ ಅರ್ಜಿಯನ್ನು ಬಿಎಸ್‌ಎಫ್‌ ಅಂಗೀಕರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ