ಆ್ಯಪ್ನಗರ

ದೇಶಸೇವೆಯ ಬಿಎಸ್‌ಎನ್‌ಎಲ್‌ ‘ದೇಶದ್ರೋಹಿ’ ಆದದ್ದು ಹೇಗೆ?! ಇದರ ವೈಫಲ್ಯದಲ್ಲಿ ಕೇಂದ್ರದ ಪಾಲೆಷ್ಟು?

'ಬಿಎಸ್‌ಎನ್‌ಎಲ್‌ನಿಂದ ಇಷ್ಟರಲ್ಲೇ ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ತೆಗೆಯಲಾಗುತ್ತದೆ; ಸಂಸ್ಥೆಯ ಖಾಸಗೀಕರಣಕ್ಕೆ ಕಾಲ ಬಂದಿದೆ' ಎಂದು ಸಂಸದ ಅನಂತ್‌ ಕುಮಾರ್‌ ಹೆಗಡೆ ಹೇಳಿಕೆ ನೀಡಿದ್ದಾರೆ. ನಿಜಕ್ಕೂ ಬಿಎಸ್‌ಎನ್‌ಎಲ್‌ನ ಈ ದುರಂತಕ್ಕೆ ಕಾರಣ ಯಾರು? ಈ ವೈಫಲ್ಯದಲ್ಲಿ ಕೇಂದ್ರ ಸರಕಾರದ ಪಾಲೆಷ್ಟು? ಇಲ್ಲಿದೆ ಹಿನ್ನೋಟ.

Vijaya Karnataka Web 12 Aug 2020, 12:25 pm
ನಷ್ಟದಲ್ಲಿರುವ ಸರಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳಾದ ಭಾರತ್‌ ಸಂಚಾರ ನಿಗಮ ಲಿಮಿಟೆಡ್(ಬಿಎಸ್‌ಎನ್‌ಎಲ್‌) ಹಾಗೂ ಮಹಾನಗರ್‌ ಟೆಲಿಫೋನ್‌ ನಿಗಮ ಲಿ.(ಎಂಟಿಎನ್‌ಎಲ್‌)ಗಳನ್ನು ಹೇಗಾದರೂ ಸರಕಾರದಲ್ಲಿಯೇ ಉಳಿಸಿಕೊಳ್ಳಬೇಕು ಎಂಬುದು ಒಂದು ವರ್ಗದ ಚಿಂತನೆ. ಆದರೆ, ಇದಕ್ಕೆ ಶಸ್ತ್ರಚಿಕಿತ್ಸೆಯೇ ಗತಿ ಎಂದು ಹೇಳುವವರೂ ಬಹಳ ಮಂದಿ. ಬಿಎಸ್ಸೆನ್ನೆಲ್‌ ಈ ಹಂತಕ್ಕೆ ತಲುಪಲು ಆಂತರಿಕ ಕಾರಣವೂ ಇದೆ; ಹಾಗೆಯೇ ಕೇಂದ್ರ ಸರಕಾರವೂ ಇದಕ್ಕೆ ಪ್ರಮುಖ ಹೊಣೆ.
Vijaya Karnataka Web bsnl employees are anti nationals and traitors who do not work
ದೇಶಸೇವೆಯ ಬಿಎಸ್‌ಎನ್‌ಎಲ್‌ ‘ದೇಶದ್ರೋಹಿ’ ಆದದ್ದು ಹೇಗೆ?! ಇದರ ವೈಫಲ್ಯದಲ್ಲಿ ಕೇಂದ್ರದ ಪಾಲೆಷ್ಟು?


ನಷ್ಟದ ಸುಳಿಯಲ್ಲಿ ಸಂಸ್ಥೆ: ಕಳೆದ ವರ್ಷದವರೆಗೆ ಬಿಎಸ್‌ಎನ್‌ಎಲ್‌ನಲ್ಲಿ 1.76 ಲಕ್ಷ ಸಿಬ್ಬಂದಿಗಳಿದ್ದರು. ಪ್ರತಿ ತಿಂಗಳು ವೇತನಕ್ಕಾಗಿ 900 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುತ್ತಿತ್ತು. ಆದಾಯ- ವೇತನ ಅನುಪಾತ 100:60ರಷ್ಟಿತ್ತು. ಈಗ ಸಂಸ್ಥೆ ಒಟ್ಟಾರೆ 39,000 ಕೋಟಿ ರೂ.ಗಳಷ್ಟು ನಷ್ಟದ ಸುಳಿಯಲ್ಲಿದೆ. ಕಳೆದ ವರ್ಷ ಸಿಬ್ಬಂದಿಗೆ ವಿಆರ್‌ಎಸ್‌ ಸೌಲಭ್ಯವನ್ನು ನೀಡಲಾಗಿದ್ದು, ಸುಮಾರು ಅರ್ಧಕ್ಕೂ ಹೆಚ್ಚು ಮಂದಿ ಈ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ದೊಡ್ಡ ಪ್ರಮಾಣದ ಉದ್ಯೋಗಿಗಳು ಕೆಲಸ ಬಿಟ್ಟಿದ್ದಾರೆ. ಸಂಸ್ಥೆಯಲ್ಲಿ ಸಿಬ್ಬಂದಿಯ ಕೊರತೆ ಇದೆ. ಮೊದಲೇ ಇಳಿದಿದ್ದ ಸಂಸ್ಥೆಯ ವೃತ್ತಿಪರತೆ, ಇದರಿಂದಾಗಿ ಇನ್ನೂ ಕುಸಿದಿದೆ. ನೀತಿ ಆಯೋಗ, ಸಂಸ್ಥೆಯನ್ನು 'ನಷ್ಟದಲ್ಲಿರುವ ಸಂಸ್ಥೆ' ಎಂದು ಪಟ್ಟಿ ಮಾಡಿದ್ದು, ಹೂಡಿಕೆ ಹಿಂದೆಗೆತಕ್ಕೆ ಸಲಹೆ ನೀಡಿದೆ.

ಖಾಸಗಿ ಪೈಪೋಟಿ: ಇದು ಇದ್ದಕ್ಕಿದ್ದಂತೆ ಕಾಣಿಸಿಕೊಂಡ ರೋಗವೇನೂ ಅಲ್ಲ. ಈ ಕಾಯಿಲೆಯ ಚಿಹ್ನೆಗಳು ಹಲವಾರು ವರ್ಷಗಳಿಂದಲೇ ಕಾಣಿಸುತ್ತಿದ್ದವು. 2000ನೇ ಇಸವಿಯಲ್ಲಿ ಸ್ಥಾಪನೆಯಾದ ಬಿಎಸ್‌ಎನ್‌ಎಲ್‌, ಆಗ ದೇಶದ ಟೆಲಿಕಾಂ ವಲಯದಲ್ಲಿ ಅದೊಂದೇ ಇದ್ದುದರಿಂದ ಏಕಸ್ವಾಮ್ಯ ಹೊಂದಿತ್ತು. ಹಳ್ಳಿ ಹಳ್ಳಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತ್ತು. ಆದರೆ ನಂತರ ಖಾಸಗಿ ದೂರಸಂಪರ್ಕ ಸಂಸ್ಥೆಗಳು ಒಂದೊಂದಾಗಿ ರಂಗ ಪ್ರವೇಶಿಸಿದವು. ಸುಮಾರು ಒಂದು ದಶಕದಿಂದ, ಖಾಸಗಿ ಕಂಪನಿಗಳು ತಮ್ಮ ಡೇರೆಗಳನ್ನು ಗಟ್ಟಿಯಾಗಿ ಹೂಡಿವೆ. ಕಡಿಮೆ ಶುಲ್ಕ, ಉಚಿತ ಸಿಮ್‌, ಶೀಘ್ರ ಸೇವೆ, ನಂಬರ್‌ ಸುಲಭ ಪೋರ್ಟಬಿಲಿಟಿ, ದರಗಳಲ್ಲಿ ಸ್ಪರ್ಧಾತ್ಮಕತೆ ಇತ್ಯಾದಿಗಳ ಮೂಲಕ ಗ್ರಾಹಕರ ಮನಸ್ಸನ್ನು ಗೆದ್ದಿವೆ. ಬಿಎಸ್ಸೆನ್ನೆಲ್‌ ಎಂದಿಗೂ ಇವರೊಂದಿಗೆ ಸ್ಪರ್ಧೆಗೆ ಇಳಿಯಲೇ ಇಲ್ಲ.

​ಸರಕಾರದಿಂದ ನಿರ್ಲಕ್ಷ್ಯ ನೀತಿ

2009ನೇ ಇಸವಿಯವರೆಗೂ ಬಿಎಸ್ಸೆನ್ನೆಲ್‌ ನಿರಂತರವಾಗಿ ವಾರ್ಷಿಕ ಸರಾಸರಿ 10,000 ಕೋಟಿ ರೂ.ಗಳಷ್ಟು ಲಾಭ ದಾಖಲಿಸುತ್ತಲೇ ಇತ್ತು. ನಂತರ ಉಂಟಾದ ನಷ್ಟಗಳು ಸರಕಾರದ ಪಾಲಿಸಿಗಳಿಂದಾಗಿಯೇ ಸಂಭವಿಸಿದವು. 2010ರಲ್ಲಿ3ಜಿ ತರಂಗಾಂತರ ಹಂಚಿಕೆ ಮಾಡಿದಾಗ ಬಿಎಸ್ಸೆನ್ನೆಲ್‌, 10,187 ಕೋಟಿ ರೂ. ನೀಡಿ ಅದನ್ನು ಪಡೆಯಿತು. 2015ರಲ್ಲಿನಡೆದ ಇನ್ನೊಂದು 3ಜಿ ತರಂಗಾಂತರ ಹಂಚಿಕೆಯಲ್ಲಿಬಿಎಸ್ಸೆನ್ನೆಲ್‌ ಅನ್ನು ಪರಿಗಣಿಸಲೇ ಇಲ್ಲ. ನಂತರ 2016ರಲ್ಲಿನಡೆದ 4ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲೂಬಿಎಸ್ಸೆನ್ನೆಲ್‌ ಕಾಣಿಸಿಕೊಳ್ಳಲೇ ಇಲ್ಲ. ಜಿಯೊ, ಏರ್‌ಟೆಲ್‌, ಐಡಿಯಾ ಮುಂತಾದವುಗಳಿಗೆ ಹಂಚಿಕೆಯಿಂದ ಸರಕಾರ 65,789 ಕೋಟಿ ರೂ. ಗಳಿಸಿತು. ಇನ್ನೂ ದೊಡ್ಡ ಪ್ರಮಾಣದ 4ಜಿ ಅವಕಾಶ ಬಾಕಿಯಿದೆ; ಆದರೆ ಬಿಎಸ್ಸೆನ್ನೆಲ್‌ಗೆ ನೀಡಿಲ್ಲ. ಈ ನಡುವೆ ದೇಶ 5ಜಿಗೂ ಸಜ್ಜಾಗುತ್ತಿದೆ. ಅದನ್ನೂ ಬಿಎಸ್ಸೆನ್ನೆಲ್‌ಗೆ ನೀಡುವ ಬಗ್ಗೆ ಚಕಾರವಿಲ್ಲ. ಎಲ್ಲಖಾಸಗಿ ಟೆಲಿಕಾಂ ಕಂಪನಿಗಳು ತೀವ್ರ ವೇಗದ ತರಂಗಾಂತರ ಪಡೆದು ಮಾರುಕಟ್ಟೆಯಲ್ಲಿಉತ್ತಮ ಸ್ಪರ್ಧೆ ನೀಡುತ್ತಿದ್ದರೆ, ಬಿಎಸ್ಸೆನ್ನೆಲ್‌ ಸ್ವತಃ ಕುಂಟುವಂತೆ ಕೇಂದ್ರ ಸರಕಾರವೇ ಮಾಡಿದೆ. ಖಾಸಗಿ ಸಂಸ್ಥೆಗಳಿಗೆ ಸಹಾಯ ಮಾಡುವುದಕ್ಕಾಗಿಯೇ ಸರಕಾರ 4ಜಿಯನ್ನು ಬಿಎಸ್ಸೆನ್ನೆಲ್‌ಗೆ ತಡೆಹಿಡಿದಿದೆ ಎಂಬ ಆರೋಪ ಬಿಎಸ್ಸೆನ್ನೆಲ್‌ನ ಹಿರಿಯ ಉದ್ಯೋಗಿಗಳದ್ದು. ಬಿಎಸ್ಸೆನ್ನೆಲ್‌ನ ಹಲವು ಆಸ್ತಿಗಳನ್ನು, ಅದರ ನಷ್ಟ ಸರಿದೂಗಿಸುವ ಕಾರಣ ನೀಡಿ ಮಾರಾಟ ಮಾಡಲಾಗಿದೆ. ಕಾಯಂ ಉದ್ಯೋಗಿಗಳ ಬದಲು, ಕನಿಷ್ಠ ವೇತನ ಹಾಗೂ ಸೌಲಭ್ಯಗಳನ್ನು ತಪ್ಪಿಸುವುದಕ್ಕಾಗಿ ತಾತ್ಕಾಲಿಕ ಹಾಗೂ ಗುತ್ತಿಗೆ ನೌಕರರನ್ನು ನೇಮಿಸಲಾಗುತ್ತಿದೆ.

ಜಿಯೊ ಪ್ರವೇಶದಿಂದ ಇನ್ನಷ್ಟು ಹಾನಿ

2015ರಲ್ಲಿ ಮಾರುಕಟ್ಟೆಗೆ ರಿಲಯನ್ಸ್‌ ಜಿಯೊ ಪ್ರವೇಶ ಮಾಡಿತು. ಟೆಲಿಕಾಂನಲ್ಲಿ ಯಾವ ಹಿನ್ನೆಲೆಯೂ ಇಲ್ಲದ ಈ ಸಂಸ್ಥೆಗೆ ಸರಕಾರ 3ಜಿ ಹಾಗೂ 4ಜಿಯನ್ನು ಧಾರಾಳವಾಗಿ ನೀಡಿತು. ಅತ್ಯಂತ ಅಗ್ಗದ ದರಗಳ ಸ್ಪರ್ಧೆಯನ್ನು ಜಿಯೊ ಒಡ್ಡಿತು. ಮಾರುಕಟ್ಟೆಯಲ್ಲಿಆರೋಗ್ಯಕರ ಪೈಪೋಟಿ ಕಾಪಾಡಲು ಟೆಲಿಕಾಂ ನಿಯಂತ್ರಣ ಸಂಸ್ಥೆ (ಟ್ರಾಯ್‌) ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಈಗ ಬಹುತೇಕ ಎಲ್ಲಟೆಲಿಕಾಂ ಸಂಸ್ಥೆಗಳೂ ನಷ್ಟದಲ್ಲಿವೆ; ಬಿಎಸ್ಸೆನ್ನೆಲ್‌ ಮಾತ್ರವೇ ಅಲ್ಲ.

​ವೃತ್ತಿಪರತೆಯ ಕೊರತೆ

ಖಾಸಗಿ ಟೆಲಿಕಾಂ ಸಂಸ್ಥೆಗಳೊಡನೆ ಸ್ಪರ್ಧೆ ಹೂಡಿ ಗುಣಾತ್ಮಕ ಸೇವೆ ನೀಡಬೇಕಾಗಿದ್ದ ಬಿಎಸ್‌ಎನ್‌ಎಲ್‌ ಸಂಸ್ಥೆ ತನ್ನ ಅಧಿಕಾರಶಾಹಿ, ವಿಳಂಬ ನೀತಿ ಮುಂತಾದ ಸರಕಾರಿ ವಲಯದ ಎಲ್ಲ ರೋಗಲಕ್ಷಣಗಳನ್ನು ಪ್ರದರ್ಶಿಸುತ್ತ ಹಾಗೆಯೇ ಉಳಿಯಿತು. ಕಾಲಕಾಲಕ್ಕೆ ಸಿಬ್ಬಂದಿಗೆ ಕೌಶಲಾಭಿವೃದ್ಧಿ, ಟೆಲಿಕಾಂನಂಥ ಸ್ಪರ್ಧಾತ್ಮಕ ವಲಯದಲ್ಲಿ ಸೇವೆ ಸಲ್ಲಿಸಲು ಅಗತ್ಯವಾದ ವಿನಯಶೀಲತೆ, ಗ್ರಾಹಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವ ಚುರುಕುತನ ಎಲ್ಲದರಲ್ಲೂ ಹಿಂದುಳಿಯಿತು. ಹೆಚ್ಚಿನ ಸಿಬ್ಬಂದಿಗಳಲ್ಲಿಉಡಾಫೆ, ಕೆಲಸ ಮಾಡದೆ ಹೋದರೂ ಸರಕಾರಿ ಸಂಬಳ ಬರುತ್ತದೆ ಎಂಬ ಧೋರಣೆ ನೆಲೆಸಿದೆ. ಗ್ರಾಹಕರ ಸಮಸ್ಯೆಗಳಿಗೆ ಉತ್ತರಿಸದ ಜಡತ್ವವೂ ಇದೆ. ಆದರೆ ಸಿಬ್ಬಂದಿಯನ್ನು ಸರಿ ದಾರಿಗೆ ತರಲಾರದ ಹೊಣೆಯನ್ನೂ ಕೇಂದ್ರ ಸರಕಾರವೇ ಹೊರಬೇಕಾಗುತ್ತದೆ.

ಗ್ರಾಮೀಣ ವಲಯದಲ್ಲಿ ಬಲಿಷ್ಠ​

ಒಂದು ಕಾಲದಲ್ಲಿ ದೇಶದ ಟೆಲಿಕಾಂ ವಲಯದಲ್ಲಿ ಕ್ರಾಂತಿ ಮಾಡಿದ ಬಿಎಸ್‌ಎನ್‌ಎಲ್‌, ಗ್ರಾಮೀಣ ಭಾರತದಲ್ಲಿ ಇಂದಿಗೂ ಬಲಿಷ್ಠವಾದ ಜಾಲವನ್ನು ಹೊಂದಿದೆ. ಗುಡ್ಡಗಾಡು, ಮರುಭೂಮಿ ಎಲ್ಲೆಲ್ಲೂ ಇದೆ. ಗ್ರಾಮೀಣ ಪ್ರದೇಶದಲ್ಲಿಯೂ ಅದಕ್ಕೆ ಸಿಬ್ಬಂದಿಗಳಿದ್ದಾರೆ. ಇದೊಂದು ಸೇವೆ ಎಂದು ತಿಳಿದಿರುವವರು ಸಾಕಷ್ಟಿದ್ದಾರೆ. ಸರಕಾರ ನೈತಿಕ ಬೆಂಬಲ ನೀಡಿದರೆ ಈಗಲೂ ಖಾಸಗಿ ಸಂಸ್ಥೆಗಳಿಗಿಂತ ಪರಿಣಾಮಕಾರಿ ಸೇವೆ ನೀಡಬಹುದು. ನಷ್ಟದ ಕಾರಣ ನೀಡಿ ಇದನ್ನು ಖಾಸಗೀಕರಣಗೊಳಿಸಿದರೆ, ಟೆಲಿಕಾಂ ವಲಯದಲ್ಲಿಖಾಸಗಿ ಏಕಸ್ವಾಮ್ಯ ಉಂಟಾಗಬಹುದು ಎಂಬುದು ಆತಂಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ