ಆ್ಯಪ್ನಗರ

ಮಹಿಳೆಯ 40ಗ್ರಾಂ ಚಿನ್ನದ ಸರ ನುಂಗಿದ ಎತ್ತು! ಮತ್ತೀಗ ಹುಲ್ಲು ತಿನ್ನಿಸುವುದು, ಸೆಗಣಿ ಹಾಕೋದನ್ನ ಕಾಯೋದೆ ಅವಳ ಕೆಲಸ

ಎತ್ತೊಂದು ಅಚಾನಕ್ ಆಗಿ ಚಿನ್ನದ ಸರವನ್ನು ತಿಂದು ಬಿಟ್ಟಿತು. ಹೊಟ್ಟೆಗೆ ಸಿಗದೆ ಪರದಾಡುತ್ತಿದ್ದ ಆ ಎತ್ತಿಗೆ ಈಗ ಭಾಗ್ಯದ ಬಾಗಿಲೇ ತೆರೆದಿದೆ. ಆ ಚಿನ್ನದ ಸರ ನುಂಗಿದ್ದೇ ಅದರ ಅದೃಷ್ಟ ಬದಲಾಗಿದ್ದು ಹೇಗೆ? ಸ್ವಾರಸ್ಯಕರ ಕಥೆ ಇದು..

Indiatimes 30 Oct 2019, 2:13 pm
ಸಿರ್ಸಾ: ಹಸಿವೇ ಹಾಗೇ, ಮನುಷ್ಯನಾಗಲಿ, ಪ್ರಾಣಿಗಳಾಗಲಿ ಅದನ್ನು ಹೆಚ್ಚು ಹೊತ್ತು ಸಹಿಸಲಾರ. ಹಸಿವಾದಾಗ ತಿನ್ನಲು ಏನಾದರು ಸಿಕ್ಕರೆ ಸಾಕು ಅನ್ನಿಸುತ್ತಿರುತ್ತದೆ. ಸಿಕ್ಕಾಗ ಬಕ ಬಕ ಎಂದು ತಿಂದು ಬಿಡುತ್ತೇವೆ. ಅನಾಥ, ಬೀಡಾಡಿ ದನಗಳು, ಬೀದಿ ನಾಯಿಗಳಂತೂ ಹಸಿವೆಯಿಂದ ಕಂಗಾಲಾಗಿ ಸಿಕ್ಕ ಸಿಕ್ಕದ್ದನ್ನು ತಿನ್ನುತ್ತವೆ. ಆಹಾರ ಸಿಗದೆ ಗೋವಾದ ಹಸುಗಳು ಮಾಂಸಾಹಾರಿಗಳಾಗಿ ಬದಲಾದ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡಿತ್ತು.
Vijaya Karnataka Web ಎತ್ತಿಗೆ ಮೇವು ತಿನ್ನಿಸುತ್ತಿರುವುದು


ಅಂತಹದ್ದೇ ಹಸಿದ ಬೀಡಾಡಿ ದನವೊಂದು ಮಹಿಳೆಯ 40 ಗ್ರಾಂ ಚಿನ್ನದ ಸರವನ್ನೇ ನುಂಗಿ ಬಿಟ್ಟಿತು. ಮುಂದೇನಾಯ್ತು?

ಹರಿಯಾಣದ ಸಿರ್ಸಾದ ಕಲನವಾಲಿ ಪ್ರದೇಶದಲ್ಲಿ ಅಕ್ಟೋಬರ್ 19 ರಂದು ಈ ಘಟನೆ ನಡೆದಿದೆ. ಜನಕರಾಜ್ ಎಂಬ ಗೃಹಸ್ಥ, ಅವರ ಪತ್ನಿ ಮತ್ತು ಸೊಸೆ ತರಕಾರಿ ವೇಸ್ಟೇಜ್‌ನ್ನು ಎಸೆಯುವಾಗ ಅದರಲ್ಲಿ 40 ಗ್ರಾಂ ಚಿನ್ನದ ಸರವೂ ಹೋಗಿತ್ತು.

ಇದು ಸತ್ಯ: ಮೇವು ಬೇಡ, ಚಿಕನ್ , ಮೀನು ಫ್ರೈ ಬೇಕೆನ್ನುತ್ತಿವೆಯಂತೆ ಗೋವಾದ ಗೋವುಗಳು

ಕೊರಳಲ್ಲಿದ್ದ ಚಿನ್ನದ ಸರ ಏಕಾಏಕಿ ಎಲ್ಲಿ ಹೋಯಿತೆಂದು ಹುಡುಕಾಡಿದ ಮನೆಯವರು ಎಲ್ಲೂ ಸಿಗದಾದಾಗ, ಮನೆಯ ಹೊರಗೆ ಅಳವಡಿಸಿದ್ದ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದ್ದಾರೆ. ಆಗ ಎತ್ತೊಂದು ತರಕಾರಿ ಕಸದ ಜತೆ ಚಿನ್ನದ ಸರ ನುಂಗಿದ್ದು ಬೆಳಕಿಗೆ ಬಂದಿದೆ.

ತಕ್ಷಣ ಆ ಎತ್ತನ್ನು ಹುಡುಕಿಕೊಂಡು ಹೋದ ಅವರು, ಹಿಡಿಯಲು ಪಶು ವೈದ್ಯರ ಸಹಾಯ ಕೇಳಿದರು. ಶತ ಪ್ರಯತ್ನ ಪಟ್ಟು ಎತ್ತನ್ನು ಎಳೆದು ತಂದು ಮನೆ ಹೊರಗಿನ ಖಾಲಿ ಜಾಗದಲ್ಲಿ ಕಟ್ಟಲಾಯಿತು. ಮತ್ತೀಗ ಸರವನ್ನು ಹಿಂಪಡೆಯುವುದು ಹೇಗೆ! ಸೆಗಣಿಯ ಜೊತೆಗೆ ಬಂದೇ ಬರುತ್ತದೆ ಎಂಬುದು ಅವರ ಲೆಕ್ಕಾಚಾರ. ಅದಕ್ಕಾಗಿ ಮೇವನ್ನು ತಂದು ಎತ್ತಿಗೆ ತಿನ್ನಿಸಿದ್ದೇ ತಿನ್ನಿಸಿದ್ದು. ಆಹಾರವೇ ಸಿಗದೆ ಪರದಾಡುತ್ತಿದ್ದ ಎತ್ತಿಗೆ ಭೂರಿ ಭೋಜನವೇ ಸಿಗಹತ್ತಿತ್ತು. ಯಾಕಾಗಿ ತನಗೆ ಈ ರಾಜೋಪಚಾರ ಎಂದು ತಲೆ ಕೆಡಿಸಿಕೊಳ್ಳದ ಎತ್ತು ಅವರು ಕೊಟ್ಟಿದ್ದನ್ನು ತಿಂದು ಹಾಯಾಗಿದೆ.

ಮನೆಯ ಸದಸ್ಯರೋ ಅದು ಸೆಗಣಿ ಹಾಕುವುದನ್ನೇ ಕಾಯುತ್ತ, ಹಾಕಿದಾಗಲೆಲ್ಲ ಅದನ್ನು ಕೆದರಿ ನೋಡುತ್ತ ಕುಳಿತಿದ್ದಾರೆ.

ಅವರು ಕೊಟ್ಟ ಆಹಾರ ತಿಂದುಡು ಎತ್ತೇನೋ ಖುಷಿಯಾಗಿದೆ. ಆದರೆ ಚಿನ್ನದ ಸರವಿನ್ನು ಹೊರಗೆ ಬಂದಿಲ್ಲ.

ಇನ್ನು ಸ್ವಲ್ಪ ದಿನ ಕಾದು ಬಳಿಕ ಎತ್ತನ್ನು ಗೋಶಾಲೆಗೆ ಕಳುಹಿಸುತ್ತೇವೆ ಎನ್ನುತ್ತಾರೆ, ಜನಕರಾಜ್.

ಕೆಲ ದಿನಗಳ ಹಿಂದೆ ಕುರಿಯೊಂದು ತನ್ನ ಮಾಲೀಕನ ಪ್ಯಾಂಟ್ ಕಿಸೆಯಲ್ಲಿದ್ದ 62,000 ರೂ ನೋಟನ್ನು ನುಂಗಿ ಹಾಕಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ