ಆ್ಯಪ್ನಗರ

ಉಪಚುನಾವಣೆ: ಬಿಜೆಪಿಗೆ ಎರಡು; ಕಾಂಗ್ರೆಸ್‌, ಎಲ್‌ಡಿಎಫ್‌ಗೆ ತಲಾ ಒಂದು ಕಡೆ ಗೆಲುವು

ನಾಲ್ಕು ರಾಜ್ಯಗಳ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನ ಗೆದ್ದುಕೊಂಡರೆ, ಕಾಂಗ್ರೆಸ್‌ ಮತ್ತು ಎಲ್‌ಡಿಎಫ್‌ ತಲಾ ಒಂದು ಸ್ಥಾನಗಳಲ್ಲಿ ಜಯ ಸಾಧಿಸಿವೆ.

PTI 27 Sep 2019, 9:06 pm
ಹೊಸದಿಲ್ಲಿ: ನಾಲ್ಕು ರಾಜ್ಯಗಳ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನ ಗೆದ್ದುಕೊಂಡರೆ, ಕಾಂಗ್ರೆಸ್‌ ಮತ್ತು ಎಲ್‌ಡಿಎಫ್‌ ತಲಾ ಒಂದು ಸ್ಥಾನ ಗೆದ್ದುಕೊಂಡಿವೆ.
Vijaya Karnataka Web BJP supporters


ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ಬಿಜೆಪಿಯ ಯುವರಾಜ್‌ ಸಿಂಗ್‌ ಅವರು ಸಮಾಜವಾದಿ ಪಾರ್ಟಿಯ ಮನೋಜ್‌ ಪ್ರಜಾಪತಿ ವಿರುದ್ಧ 17,846 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಶಾಸಕರಾಗಿದ್ದ ಅಶೋಕ್‌ಕುಮಾರ್‌ ಸಿಂಗ್‌ ಚಾಂಡೇಲ್‌ ಅವರಿಗೆ ಕೊಲೆ ಪ್ರಕರಣದಲ್ಲಿ ಶಿಕ್ಷೆಯಾಗಿ ಶಾಸಕತ್ವ ರದ್ದಾಗಿದ್ದರಿಂದ ಉಪ ಚುನಾವಣೆ ನಡೆದಿತ್ತು.

ತ್ರಿಪುರಾದ ಭದ್ರಾಘಾಟ್‌ ಕ್ಷೇತ್ರದಲ್ಲಿ ಬಿಜೆಪಿಯ ಮಿಮಿ ಮಜುಮ್‌ದಾರ್‌ ಅವರು ಸಿಪಿಐ (ಎಂ) ನ ಬುಲ್ಟಿ ಬಿಸ್ವಾಸ್‌ ಅವರನ್ನು 7,276 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಿಜೆಪಿ ಶಾಸಕ ದಿಲೀಪ್‌ ಸರ್ಕಾರ್‌ ನಿಧನದಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು.

ಕೇರಳದ ಪಾಲಾದಲ್ಲಿಆಡಳಿತಾರೂಢ ಎಲ್‌ಡಿಎಫ್‌ ಜಯ ಗಳಿಸಿದೆ. ಸತತ 54 ವರ್ಷ ಈ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಹಾಗೂ ಕೇರಳ ಕಾಂಗ್ರೆಸ್‌ (ಎಂ) ವರಿಷ್ಠರಾಗಿದ್ದ ಕೆ.ಎಂ. ಮಣಿ ನಿಧನದಿಂದ ಶಾಸಕ ಸ್ಥಾನ ತೆರವಾಗಿತ್ತು. ತೀವ್ರ ಪೈಪೋಟಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿಎಲ್‌ಡಿಎಫ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಎನ್‌ಸಿಪಿಯ ಮಣಿ ಸಿ.ಕ ಪ್ಪನ್‌ ಅವರು ಕೇರಳ ಕಾಂಗ್ರೆಸ್‌ (ಎಂ)ನ ಪುಲಿಕ್ಕುನ್ನೆಲ್‌ ಅವರನ್ನು 2,943 ಮತಗಳಿಂದ ಸೋಲಿಸಿದ್ದಾರೆ. ಈ ಗೆಲುವಿನೊಂದಿಗೆ 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿಎಲ್‌ಡಿಎಫ್‌ ಬಲ 91ಕ್ಕೆ ಏರಿದೆ. ಲೋಕಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಎಲ್‌ಡಿಎಫ್‌ಗೆ ಫಲಿತಾಂಶ ಕೊಂಚ ಸಮಾಧಾನ ತಂದಿದೆ.

ಛತ್ತೀಸ್‌ಗಢದ ನಕ್ಸಲ್‌ಪೀಡಿತ ದಾಂತೇವಾಡ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ದೇವತಿ ಕರ್ಮಾ ಅವರು ಬಿಜೆಪಿಯ ಒಜಸ್ವಿ ಮಾಂಡವಿ ಅವರನ್ನು 11,192 ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರದ ಶಾಸಕರಾಗಿದ್ದ ಭೀಮಾ ಮಾಂಡವಿ ಹತ್ಯೆಯಿಂದಾಗಿ ಚುನಾವಣೆ ನಡೆದಿತ್ತು. ಅನುಕಂಪದ ಅಲೆಯಿಂದ ಗೆಲುವಿನ ದಡ ಸೇರಬಹುದು ಎಂಬ ನಿರೀಕ್ಷೆಯಲ್ಲಿ ಭೀಮಾ ಅವರ ಪತ್ನಿಯನ್ನೇ ಬಿಜೆಪಿ ಕಣಕ್ಕೆ ಇಳಿಸಿತ್ತು. ಆದರೆ ಮತದಾರರು ಆಡಳಿತ ಪಕ್ಷಕ್ಕೆ ಮಣೆ ಹಾಕಿದ್ದಾರೆ.

ಸೆ.23ರಂದು ಮತದಾನ ನಡೆದಿದ್ದ ನಾಲ್ಕೂ ಕ್ಷೇತ್ರಗಳಲ್ಲಿ ಶುಕ್ರವಾರ ಮತ ಎಣಿಕೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ