ಆ್ಯಪ್ನಗರ

ರಫೇಲ್‌ ವಿವರ ಬಹಿರಂಗಕ್ಕೆ ಸಿಎಜಿ ನಕಾರ

ಒಪ್ಪಂದ ಕುರಿತ ಲೆಕ್ಕಪರಿಶೋಧನಾ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಈ ಹಂತದಲ್ಲಿ ಅದರ ಯಾವುದೇ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ. ಹಾಗೊಂದು ವೇಳೆ ಮಾಡಿದರೆ ಅದು ಸಂಸತ್ತಿನ ನಿಯಮಾವಳಿಗೆ ಚ್ಯುತಿ ಉಂಟಾಗುತ್ತದೆ ಎಂದು ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರು (ಸಿಎಜಿ) ತಿಳಿಸಿದ್ದಾರೆ.

Vijaya Karnataka 16 Jan 2019, 11:45 am
ಹೊಸದಿಲ್ಲಿ: ರಾಜಕೀಯ ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಿರುವ ರಫೇಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದ ಕುರಿತ ವಿವರಗಳನ್ನು ಬಹಿರಂಗಪಡಿಸಲು ಮಹಾಲೇಖಪಾಲರು ನಿರಾಕರಿಸಿದ್ದಾರೆ.
Vijaya Karnataka Web Rafale Audit-CAG


ಒಪ್ಪಂದ ಕುರಿತ ಲೆಕ್ಕಪರಿಶೋಧನಾ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಈ ಹಂತದಲ್ಲಿ ಅದರ ಯಾವುದೇ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ. ಹಾಗೊಂದು ವೇಳೆ ಮಾಡಿದರೆ ಅದು ಸಂಸತ್ತಿನ ನಿಯಮಾವಳಿಗೆ ಚ್ಯುತಿ ಉಂಟಾಗುತ್ತದೆ ಎಂದು ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರು (ಸಿಎಜಿ) ತಿಳಿಸಿದ್ದಾರೆ.

ರಫೇಲ್‌ ಒಪ್ಪಂದದ ಲೆಕ್ಕ ವಿವರ ಬಯಸಿ ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತ ವಿಹಾರ್‌ ದುರ್ವೆ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಸಿಎಜಿಯಿಂದ ಈ ಉತ್ತರ ಲಭಿಸಿದೆ. ''ಲೆಕ್ಕಪರಿಶೋಧನೆ ಇನ್ನೂ ನಡೆಯುತ್ತಿದೆ. ವರದಿ ಅಂತಿಮಗೊಳಿಸುವುದು ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಅದರ ವಿವರ ಬಹಿರಂಗಪಡಿಸುವುದರಿಂದ ಸಂಸತ್ತಿನ ನಿಯಮಾವಳಿಗಳ ಉಲ್ಲಂಘನೆಯಾಗುತ್ತದೆ. ಆರ್‌ಟಿಐ ಕಾಯಿದೆಯ ಸೆಕ್ಷನ್‌ 8 (1)(ಸಿ) ಅಡಿಯಲ್ಲಿ ಸಂಸತ್ತಿನ ಹಕ್ಕಿಗೆ ಭಂಗವಾಗುವ ಪ್ರಶ್ನೆಗಳಿಗೆ ಉತ್ತರಿಸಲು ಆಸ್ಪದ ಇಲ್ಲ,'' ಎಂದು ಸ್ಪಷ್ಟಪಡಿಸಿದೆ.

ಕಳೆದ ತಿಂಗಳು, ಈ ಒಪ್ಪಂದ ಕುರಿತು ಕೋರ್ಟ್‌ ನಿಗಾ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು. ಎರಡು ದೇಶಗಳ ನಡುವೆ ಆಗಿರುವ ಒಪ್ಪಂದದಲ್ಲಿ ಸಂಶಯಕ್ಕೆ ಕಾರಣವಾಗುವ ಯಾವುದೇ ಪ್ರಧಾನ ಅಂಶಗಳು ಕಾಣಿಸಿಲ್ಲ ಎಂದು ಕೋರ್ಟ್‌ ಹೇಳಿತ್ತು.

58,000 ಕೋಟಿ ರೂ. ಮೊತ್ತದ ಈ ಒಪ್ಪಂದದಲ್ಲಿ ನಡೆದಿರಬಹುದಾದ ಗೋಲ್‌ಮಾಲ್‌ ಕುರಿತು ಸೂಕ್ತ ತನಿಖೆಯಾಗಬೇಕು. ಅದಕ್ಕೆ ಮುನ್ನ ಎಫ್‌ಐಆರ್‌ ದಾಖಲಿಸುವ ಅಗತ್ಯ ಇದೆ ಎಂದು ಅರ್ಜಿದಾರರು ಅಹವಾಲು ಮಂಡಿಸಿದ್ದರು.

'ಒಪ್ಪಂದದ ಪ್ರಮುಖ ವಿವರಗಳನ್ನು ಸರಕಾರ ಸಿಎಜಿ ಜತೆ ಹಂಚಿಕೊಂಡಿದೆ. ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಸಿಎಜಿ) ಪರಿಶೀಲಿಸಿದೆ. ಇದರ ಪರಿಷ್ಕೃತ ಭಾಗವನ್ನು ಸಂಸತ್ತಿನಲ್ಲಿ ಮುಂದಿಡಲಾಗಿದ್ದು, ಅದು ಸಾರ್ವಜನಿಕರ ಮಾಹಿತಿಗೂ ಲಭ್ಯ ಇದೆ' ಎಂದು ಸರಕಾರ ಮುಚ್ಚಿದ ಲಕೋಟೆಯಲ್ಲಿ ತನಗೆ ಸಲ್ಲಿಸಿದ್ದ ವಿವರವನ್ನು ಸುಪ್ರೀಂ ಕೋರ್ಟ್‌ ಅರ್ಜಿ ಖುಲಾಸೆ ವೇಳೆ ಉಲ್ಲೇಖಿಸಿತ್ತು. ಇದು ತಪ್ಪು ಮಾಹಿತಿ ಎಂದು ಕಾಂಗ್ರೆಸ್‌ ತಕಾರರು ತೆಗೆದಿತ್ತು. ಅದಾಗಿ ಸರಕಾರ ಕೂಡ ಕೋರ್ಟ್‌ ಉಲ್ಲೇಖಿಸಿದ ಒಂದು ಪ್ಯಾರದಲ್ಲಿನ ತಪ್ಪು ತಿದ್ದಿಕೊಳ್ಳಲು ಮನವಿ ಮಾಡಿತ್ತು. ಇದಾಗಿ ಸಿಎಜಿ ವರದಿಯ ವಿವರ ಬಹಿರಂಗಕ್ಕೆ ಆಗ್ರಹಿಸಿ ಆರ್‌ಟಿಐ ಅರ್ಜಿ ಸಲ್ಲಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ