ಆ್ಯಪ್ನಗರ

ಸಂಸತ್‌ನಲ್ಲಿ ಇಂದು ಸಿಎಜಿ ವರದಿ ಮಂಡನೆ?

ಸಂಸತ್ತಿನ ಮುಂಗಡಪತ್ರ ಪತ್ರ ಅಧಿವೇಶನ ಬುಧವಾರ (ಫೆ.13) ಮುಕ್ತಾಯವಾಗಲಿದ್ದು, ಅದರ ಮುನ್ನಾದಿನ ಸಿಎಜಿ ವರದಿ ಮಂಡಿಸಲು ಸರಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

Vijaya Karnataka Web 12 Feb 2019, 6:29 am
ಹೊಸದಿಲ್ಲಿ: ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ರಫೇಲ್‌ ಒಪ್ಪಂದದ ಕುರಿತು ಸಿಎಜಿ ನೀಡಿರುವ ವರದಿಯನ್ನು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
Vijaya Karnataka Web Rafale


ಸಂಸತ್ತಿನ ಮುಂಗಡಪತ್ರ ಪತ್ರ ಅಧಿವೇಶನ ಬುಧವಾರ (ಫೆ.13) ಮುಕ್ತಾಯವಾಗಲಿದ್ದು, ಅದರ ಮುನ್ನಾದಿನ ಸಿಎಜಿ ವರದಿ ಮಂಡಿಸಲು ಸರಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್‌-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ ಇದು 16ನೇ ಲೋಕಸಭೆಯ ಕೊನೆಯ ಅಧಿವೇಶನವಾಗಿದೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ರಫೇಲ್‌ ಒಪ್ಪಂದವನ್ನೇ ಮುಂದಿಟ್ಟುಕೊಂಡು ಕೇಂದ್ರ ಸರಕಾರದ ವಿರುದ್ಧ ನಿತ್ಯವೂ ಆರೋಪ ಮಾಡುತ್ತಿದ್ದಾರೆ. ಫ್ರಾನ್ಸ್‌ ಕಂಪನಿಯಿಂದ 36 ರಫೇಲ್‌ ಯುದ್ಧ ವಿಮಾನ ಖರೀದಿಸುವ ಒಪ್ಪಂದದಲ್ಲಿ ಭಾರಿ ಅವ್ಯವಹಾರವಾಗಿದೆ, ಖುದ್ದು ಪ್ರಧಾನಿಯವರೇ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಅವರ ಆರೋಪ. ಅದಕ್ಕೆ ರಾಜಕೀಯವಾಗಿಯೇ ಉತ್ತರ ನೀಡಲು ಸಿಎಜಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲು ಸರಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರಕಾರದಿಂದ ಇಂತಹದ್ದೊಂದು ನಡೆಯನ್ನು ನಿರೀಕ್ಷಿಸಿದ್ದ ಕಾಂಗ್ರೆಸ್‌ ಈಗ ಸಿಎಜಿ ವರದಿ ಕುರಿತಾಗಿಯೇ ಅನುಮಾನ ವ್ಯಕ್ತಪಡಿಸಿದೆ. ಈಗ ಮಹಾಲೇಖ ಮತ್ತು ಲೆಕ್ಕಪರಿಶೋಧಕ (ಸಿಎಜಿ) ಆಗಿರುವ ರಾಜೀವ್‌ ಮೆಹರ್ಷಿ ಅವರು ರಫೇಲ್‌ ಒಪ್ಪಂದದ ವೇಲೆ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿದ್ದರು, ಮಾತುಕತೆಯಲ್ಲಿ ಹಣಕಾಸು ಸಚಿವಾಲಯವೂ ಭಾಗಿಯಾಗಿದ್ದ ಕಾರಣ ವರದಿಯಿಂದ ಸಿಎಜಿ ದೂರ ಉಳಿಯಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್‌ ಸಿಬಲ್‌ ಭಾನುವಾರ ಆಗ್ರಹಿಸಿದ್ದಾರೆ. ಅದಕ್ಕೆ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರು, ''ಸಾಂವಿಧಾನಿಕ ಸಂಸ್ಥೆಗಳ ಡೋಂಗಿ ರಕ್ಷಕರಿಂದ ಮತ್ತೊಂದು ಸುಳ್ಳು ಆರೋಪ,'' ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೆ ರಾಹುಲ್‌ ಆರೋಪ:
ರಫೇಲ್‌ ಒಪ್ಪಂದದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮತ್ತೆ ಟ್ವಿಟರ್‌ನಲ್ಲಿ ಆರೋಪ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ''ವಾಯುಪಡೆಯ 30,000 ಕೋಟಿ ರೂ. ಕದಿಯಲು ಮೋದಿಯವರು ಅನಿಲ್‌ ಅಂಬಾನಿ ಅವರಿಗೆ ಬಾಗಿಲು ತೆರೆದಿಟ್ಟರು,'' ಎಂದಿದ್ದಾರೆ.

ಪ್ರಧಾನಿ ಸಚಿವಾಲಯ ಸಮಾನಾಂತರ ಮಾತುಕತೆಯಲ್ಲಿ ತೊಡಗಿತ್ತು ಎಂದು ವರದಿ ಪ್ರಕಟಿಸಿದ್ದ ಮಾಧ್ಯಮವು ಸೋಮವಾರ, ''ರಫೇಲ್‌ ಒಪ್ಪಂದಕ್ಕೆ ಅಂಕಿತ ಬೀಳುವ ಕೆಲವೇ ದಿನಗಳ ಮುನ್ನ ಕೇಂದ್ರ ಸರಕಾರವು ಅನಿರೀಕ್ಷಿತ ನಡೆಯಲ್ಲಿ ಅಂತರ್‌ ಸರಕಾರ ಒಪ್ಪಂದಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿ ವಿಧಿಸಲಾಗುವ ದಂಡ ಮತ್ತು ಕಠಿಣ ಕ್ರಮಗಳಿಂದ ವಿನಾಯಿತಿ ನೀಡಿದೆ,'' ಎಂದು ವರದಿ ಪ್ರಕಟಿಸಿದೆ. ಅದನ್ನು ಉಲ್ಲೇಖಿಸಿ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ