ಹೊಸದಿಲ್ಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚಾಲ್ತಿ ಖಾತೆ ತೆರೆಯುವಂತೆ ಚುನಾವಣೆ ಆಯೋಗ ಸೂಚಿಸುವ ಸಾಧ್ಯತೆ ಇದೆ.
ಚುನಾವಣೆ ಖರ್ಚುವೆಚ್ಚ ಸರಿದೂಗಿಸಲು ಅನುಕೂಲವಾಗುವಂತೆ ಅಭ್ಯರ್ಥಿಗಳಿಗೆ ವಿತ್ಡ್ರಾ ಮಿತಿ ಸಡಿಲಿಸುವಂತೆ ಆರ್ಬಿಐಗೆ ಆಯೋಗ ಮನವಿ ಮಾಡಿಕೊಂಡಿತ್ತು. ಆದರೆ, ಇದನ್ನು ಆರ್ಬಿಐ ತಿರಸ್ಕರಿಸಿತ್ತು. ಆದರೆ, ಸೋಮವಾರ ಹೊಸ ವಿತ್ಡ್ರಾ ನೀತಿ ಪ್ರಕಟಿಸಿದ ಆರ್ಬಿಐ, ಚಾಲ್ತಿ ಖಾತೆಗಳಿಗೆ ವಿಧಿಸಲಾಗಿದ್ದ ಮಿತಿಯನ್ನು ತೆಗೆದು ಹಾಕಿದೆ. ಈ ಹೊಸ ನಿಯಮದ ಲಾಭ ಪಡೆಯುವಂತೆ ಚುನಾವಣೆ ಆಯೋಗ ಅಭ್ಯರ್ಥಿಗಳಿಗೆ ಸಲಹೆ ನೀಡುವ ಸಾಧ್ಯತೆ ಇದೆ.
ಸಂಘರ್ಷಕ್ಕೆ ಕಾರಣವಾಗಿದ್ದ ನಿಯಮ
ನೋಟು ರದ್ದು ಬಳಿಕ ಖಾತೆಗಳಿಂದ ಹಣ ಪಡೆಯಲು ಆರ್ಬಿಐ ಹೇರಿದ್ದ ಮಿತ್ಡ್ರಾ ಮಿತಿ, ಚುನಾವಣೆ ಆಯೋಗ ಮತ್ತು ಕೇಂದ್ರೀಯ ಬ್ಯಾಂಕ್ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ವಿತ್ಡ್ರಾ ಮಿತಿ ಸಡಿಲಿಸುವಂತೆ ಆಯೋಗ ಸಲಹೆ ನೀಡಿತ್ತು. ಆದರೆ, ಇದನ್ನು ಆರ್ಬಿಐ ಸಾರಾಸಗಟಾಗಿ ತಿರಸ್ಕರಿಸಿತ್ತು. ಇದರಿಂದ ಕೆರಳಿದ್ದ ಆಯೋಗ, ತಾನೂ ಕೂಡ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಒಂದೊಮ್ಮೆ ತನ್ನ ಸಲಹೆ ಪಾಲಿಸದಿದ್ದರೆ ಸಂವಿಧಾನದತ್ತ 324ನೇ ವಿಧಿಯ ಅನ್ವಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಗೂ ಆರ್ಬಿಐ ಸೊಪ್ಪು ಹಾಕಿರಲಿಲ್ಲ. ಈಗ ಆಯೋಗ ಅನ್ಯ ಮಾರ್ಗ ಹುಡುಕುವ ಸಾಧ್ಯತೆ ಇದೆ.