ಕಾವೇರಿ ಸ್ಕೀಮ್ ವ್ಯಾಖ್ಯಾನ: ಭಿನ್ನಾಭಿಪ್ರಾಯ
ಚೆನ್ನೈ: ಕಾವೇರಿ ನೀರು ಹಂಚಿಕೆ ಕುರಿತ ಸುಪ್ರೀಂಕೋರ್ಟ್ತೀರ್ಪಿನಲ್ಲಿ ಕಾವೇರಿ ನೀರು ನಿಯಂತ್ರಣ ಮಂಡಳಿ ರಚಿಸಬೇಕು ಎಂದು ಸೂಚಿಸಲಾಗಿಲ್ಲ ಎಂಬ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಹೇಳಿಕೆಗೆ ತಮಿಳುನಾಡು ತಗಾದೆ ಎತ್ತಿದೆ.
ತೀರ್ಪನ್ನು ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿರುವ ತಮಿಳುನಾಡು ಸುಪ್ರೀಂಕೋರ್ಟ್ ಬಳಸಿರುವ 'ಸ್ಕೀಮ್' ಎಂಬ ಪದವು ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸಬೇಕು ಎಂದು ಸೂಚಿಸುತ್ತದೆ ಎಂದು ವಾದಿಸಿದೆ.
ಫೆಬ್ರವರಿ 16ರಂದು ನೀಡಿದ ಅಂತಿಮ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿ ಎನ್ನುವ ಪದ ಬಳಸಿಲ್ಲ. ಬದಲಿಗೆ 'ಸ್ಕೀಂ' ಎಂದು ಬಳಸಿದೆ. ಸ್ಕೀಂ ಎಂಬ ಪದ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಹಾಗೂ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಜಾರಿಗೊಳಿಸಲು ಸಂಸ್ಥೆಯೊಂದನ್ನು ರಚಿಸಬೇಕೆಂದು ಸೂಚಿಸುತ್ತದೆ ಎಂದು ತಮಿಳುನಾಡು ವ್ಯಾಖ್ಯಾನಿಸಿದೆ. ಹೀಗಾಗಿ, ಕಾವೇರಿ ನಿರ್ವಹಣಾ ಮಂಡಳಿ (ಸಿಎಂಬಿ) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) ಎರಡನ್ನೂ ರಚಿಸದೆ ಕೇಂದ್ರ ಸರಕಾರಕ್ಕೆ ಅನ್ಯ ಮಾರ್ಗವೇ ಇಲ್ಲ ಎಂದೂ ಹೇಳಿದೆ.
....................
ಕೇಂದ್ರ ಹೇಳಿದ್ದೇನು?: ಸುಪ್ರೀಂಕೋರ್ಟ್ ತೀರ್ಪಿನಲ್ಲಿ ನೀರು ನಿರ್ವಹಣೆ ಸಮಿತಿ ಸೇರಿದಂತೆ ಯಾವುದೇ ಮಂಡಳಿಗಳ ರಚನೆ ಸೂಚಿಸಲಾಗಿಲ್ಲ.
ತ.ನಾಡು ವಾದವೇನು?: ತೀರ್ಪಿನಲ್ಲಿ ಬಳಸಿರುವ ಸ್ಕೀಮ್ ಪದವು ಕಾವೇರಿ ನಿರ್ವಹಣಾ ಮಂಡಳಿ ಮತ್ತು ನೀರು ನಿಯಂತ್ರಣ ಸಮಿತಿ ರಚಿಸಲು ಸೂಚಿಸುತ್ತದೆ.
.....................
ಕಾವೇರಿ ತೀರ್ಪಿನ ಅನುಷ್ಠಾನಕ್ಕೆ ಸಂಬಂಸಿ ಇಂತಹ ಮಂಡಳಿಗಳ ಬಗ್ಗೆ ಸುಪ್ರೀಂ ಕೋರ್ಟ್ ಪ್ರಸ್ತಾಪ ಮಾಡಿಯೇ ಇಲ್ಲ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಯು.ಪಿ. ಸಿಂಗ್ ಹೇಳಿದ ಮರುದಿನವೇ ತಮಿಳನಾಡು ಸರಕಾರ ಈ ವಿವರಣೆ ಒಳಗೊಂಡ ಪ್ರಕಟಣೆ ಬಿಡುಗಡೆ ಮಾಡಿದೆ. ಸುಪ್ರೀಂಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ಸಂಬಂಧಿಸಿ ಶುಕ್ರವಾರ ದಿಲ್ಲಿಯಲ್ಲಿ ನಡೆದ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ರಾಜ್ಯಗಳ ಹಿರಿಯ ಅಕಾರಿಗಳ ಸಭೆಯಲ್ಲಿಯೂ ರಾಜ್ಯವು ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದೂ ಪ್ರಕಟಣೆ ತಿಳಿಸಿದೆ.
ಪರಿಣಾಮ ನೆಟ್ಟಗಿರಲ್ಲ: ಪುದುಚೆರಿ ಎಚ್ಚರಿಕೆ
ಪುದುಚೆರಿ: ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅನುಷ್ಠಾನಗೊಳಿಸುವಲ್ಲಿ ವಿಳಂಬ ಮಾಡಿದ್ದೇ ಆದಲ್ಲಿ ಕೇಂದ್ರ ಸರಕಾರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪುದುಚೆರಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಆರು ತಿಂಗಳೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು, ಕೇಂದ್ರ ಸರಕಾರ ಸಿಎಂಬಿ ಮತ್ತು ಸಿಡಬ್ಲ್ಯುಆರ್ಸಿ ರಚನೆ ಮಾಡದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಅಂತಿಮ ತೀರ್ಪಿನ ಕುರಿತಂತೆ ಕರ್ನಾಟಕ ಸರಕಾರ ಅತ್ಯಂತ ನಾಜೂಕಿನ ಹಾಗೂ ನುಣುಚಿಕೊಳ್ಳುವ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದ್ದಾರೆ.
..............
'ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಕೇಂದ್ರದ ಜಲ ಸಂಪನ್ಮೂಲ ಸಚಿವರು ಶುಕ್ರವಾರ ಕರೆದಿದ್ದ ಕಾವೇರಿ ಕೊಳ್ಳದ ರಾಜ್ಯಗಳ ಕೇವಲ ಕಣ್ಣೊರೆಸುವ ತಂತ್ರ. ಸುಪ್ರೀಂ ಕೋರ್ಟ್ ತೀರ್ಪು ಅನುಷ್ಠಾನದ ಕುರಿತು ಚರ್ಚಿಸಲು ರಾಜ್ಯ ಸರಕಾರ ತುರ್ತಾಗಿ ವಿಧಾನಸಭೆಯ ವಿಶೇಷ ಅವೇಶನ ಕರೆಯಬೇಕು.'
- ಎಂ ಕೆ ಸ್ಟಾಲಿನ್, ತ.ನಾಡು ಪ್ರತಿಪಕ್ಷ ನಾಯಕ