ಆ್ಯಪ್ನಗರ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ರಾಹುಲ್‌, ಸೋನಿಯಾಗೆ ನೋಟಿಸ್‌

ನ್ಯಾಷನಲ್‌ ಹೆರಾಲ್ಡ್‌ ಮತ್ತು ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ (ಎಜೆಎಲ್‌) ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವರಿಗೆ ಕೇಂದ್ರ ಸರಕಾರ ಶೋಕಾಸ್‌ ನೋಟಿಸ್‌ ನೀಡಿದೆ.

Vijaya Karnataka 26 Aug 2018, 9:49 am
ಹೊಸದಿಲ್ಲಿ: ನ್ಯಾಷನಲ್‌ ಹೆರಾಲ್ಡ್‌ ಮತ್ತು ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ (ಎಜೆಎಲ್‌) ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಹಲವರಿಗೆ ಕೇಂದ್ರ ಸರಕಾರ ಶೋಕಾಸ್‌ ನೋಟಿಸ್‌ ನೀಡಿದೆ.
Vijaya Karnataka Web subramanian swamy sonia


ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ 2018ರ ಜೂನ್‌ನಲ್ಲಿ ಈ ನೋಟಿಸ್‌ ಜಾರಿ ಮಾಡಿದೆ. ಬಿಜೆಪಿ ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್‌ ಸ್ವಾಮಿ ಅವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ಸಚಿವಾಲಯ ಈ ಕುರಿತು ಮಾಹಿತಿ ಬಹಿರಂಗಪಡಿಸಿದೆ.

ಸಚಿವಾಲಯದ ಮೂಲಗಳ ಪ್ರಕಾರ, ನೆಹರೂ ಕುಟುಂಬ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ನೀಡಲಾಗಿದ್ದ ಜಾಗವನ್ನು ದುರ್ಬಳಕೆ ಮಾಡಿಕೊಂಡಿದೆ. ಪ್ರಕರಣದ ತನಿಖೆಗೆ ಸಚಿವಾಲಯ 3 ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮುದ್ರಣಾಲಯಕ್ಕೆ ನೀಡಲಾಗಿದ್ದ ಜಾಗವನ್ನು ನಿಗದಿತ ಉದ್ದೇಶಕ್ಕೆ ಬಳಸದೆ, ಬಾಡಿಗೆಗೆ ನೀಡಿರುವುದು ಸಮಿತಿಯ ತನಿಖೆ ವೇಳೆ ಬಯಲಿಗೆ ಬಂದಿತ್ತು. 'ಎಜೆಎಲ್‌' ಷೇರುದಾರರಾದ ಸೋನಿಯಾ ಮತ್ತು ರಾಹುಲ್‌ಗೆ ಇಲಾಖೆ ನೋಟಿಸ್‌ ಜಾರಿ ಮಾಡಿದೆ.

''ಭೂಮಿ ದುರ್ಬಳಕೆ ಹಿನ್ನೆಲೆಯಲ್ಲಿ ಸಂಸ್ಥೆಯ ವಿರುದ್ಧ ಕ್ರಮ ಏಕೆ ಜರುಗಿಸಬಾರದು? ಈ ಬಗ್ಗೆ 30 ದಿನಗಳ ಗಡುವಿನೊಳಗೆ ಕಾರಣ ತಿಳಿಸಿ,'' ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ. ಅಲ್ಲದೆ, ಮಂಜೂರು ಮಾಡಿದ ಭೂಮಿಯನ್ನು ವಾಪಸ್‌ ಪಡೆಯುವುದು ಸಹ ಇಲಾಖೆ ಪ್ರಸ್ತಾಪಿಸಿರುವ ಕ್ರಮಗಳಲ್ಲಿ ಸೇರಿದೆ.

1963ರಲ್ಲಿ 'ಎಜೆಎಲ್‌'ಗೆ 5 ಅಂತಸ್ತಿನ ಕಟ್ಟಡ ನಿರ್ಮಾಣಕ್ಕಾಗಿ 1,25,000 ಲಕ್ಷ ರೂ. ರಿಯಾಯಿತಿ ದರದಲ್ಲಿ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ, 1966ರಲ್ಲಿ ಗಾಂಧಿ ಕುಟುಂಬ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪದೇಪದೆ ಪತ್ರ ಬರೆದು, 'ಹೆರಾಲ್ಡ್‌ ಹೌಸ್‌'ನ ಕೆಲ ಭಾಗವನ್ನು ಬಾಡಿಗೆ ನೀಡಲು ಅನುಮತಿಸುವಂತೆ ಕೋರಿತ್ತು. ಬೇಸ್‌ಮೆಂಟ್‌ ಅಥವಾ ಯಾವುದಾದರೂ ಒಂದು ಅಂತಸ್ತನ್ನು ಉಳಿಸಿಕೊಂಡು, ಉಳಿದ ಅಂತಸ್ತುಗಳನ್ನು ಬಾಡಿಗೆಗೆ ಕೊಡಲು ಆಗಿನ ಸರಕಾರ ಅನುಮತಿಸಿತ್ತು. 2018ರ ಜೂನ್‌ನಲ್ಲಿ ತನಿಖಾ ಸಮಿತಿ 'ಎಜೆಎಲ್‌' ಜಾಗಕ್ಕೆ ಭೇಟಿ ನೀಡಿದಾಗ ಕಟ್ಟಡದಲ್ಲಿ ಮುದ್ರಣಾಲಯವೇ ಇಲ್ಲದಿರುವುದು ಬೆಳಕಿಗೆ ಬಂದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ