ಆ್ಯಪ್ನಗರ

Hate Crime In Canada: ಕೆನಡಾದಲ್ಲಿರುವವರು ಹುಷಾರಾಗಿರಿ: ಭಾರತ ವಿರೋಧಿ ಚಟುವಟಿಕೆ ಬಗ್ಗೆ ಕೇಂದ್ರದ ಎಚ್ಚರಿಕೆ

Indians in Canada: ಭಾರತೀಯರು ಗಣನೀಯ ಸಂಖ್ಯೆಯಲ್ಲಿರುವ ಕೆನಡಾದಲ್ಲಿ ಹಿಂದೂ ದ್ವೇಷ ಮತ್ತು ಭಾರತ ವಿರೋಧ ಚಟುವಟಿಕೆ ಕೃತ್ಯಗಳಲ್ಲಿ ಏರಿಕೆಯಾಗುತ್ತಿದ್ದು ಆತಂಕ ಮೂಡಿಸಿದೆ. ಹೀಗಾಗಿ ಅಲ್ಲಿರುವ ಭಾರತೀಯರು, ವಿದ್ಯಾರ್ಥಿಗಳು ಎಚ್ಚರಿಕೆ ವಹಿಸುವಂತೆ ಸರ್ಕಾರ ಸೂಚಿಸಿದೆ.

Edited byಅಮಿತ್ ಎಂ.ಎಸ್ | Vijaya Karnataka Web 23 Sep 2022, 4:00 pm

ಹೈಲೈಟ್ಸ್‌:

  • ಕೆನಡಾದಲ್ಲಿರುವವರು, ಪ್ರಯಾಣಿಸುವವರಿಗೆ ಸರ್ಕಾರದಿಂದ ಎಚ್ಚರಿಕೆ
  • ದ್ವೇಷ ಅಪರಾಧ, ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಜಾಗ್ರತೆ
  • ಕೆನಡಾದಲ್ಲಿ ಹೆಚ್ಚುತ್ತಿರುವ ಹಿಂದೂ ದ್ವೇಷ ಅಪರಾಧಿ ಕೃತ್ಯಗಳು
  • ಸಂಸತ್‌ನಲ್ಲಿ ಈ ಬಗ್ಗೆ ಗಮನಸೆಳೆದ ಕನ್ನಡಿಗ ಚಂದ್ರ ಆರ್ಯ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Canada airport
ಹೊಸದಿಲ್ಲಿ: ಕೆನಡಾದಲ್ಲಿರುವ ಭಾರತದ ಪ್ರಜೆಗಳು ಮತ್ತು ಅಲ್ಲಿಗೆ ಹೊರಡುತ್ತಿರುವ ವಿದ್ಯಾರ್ಥಿಗಳಿಗೆ ಜಾಗ್ರತೆ ವಹಿಸುವಂತೆ ಭಾರತ ಸರ್ಕಾರ ಎಚ್ಚರಿಕೆ ನೀಡಿದೆ. ಕೆನಡಾದಲ್ಲಿ ದ್ವೇಷ ಅಪರಾಧಗಳು, ಪಂಥೀಯ ಹಿಂಸಾಚಾರ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ಗಣನೀಯ ಹೆಚ್ಚಳ ಉಂಟಾಗುತ್ತಿರುವುದರಿಂದ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ದ್ವೇಷ ಅಪರಾಧ, ಪಂಥೀಯ ಹಿಂಸಾಚಾರ ಮತ್ತು ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಕೆನಡಾ ಜತೆ ಪ್ರಸ್ತಾಪಿಸಿದ್ದು, ಅಪರಾಧಗಳ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. "ಕೆನಡಾದಲ್ಲಿ ಈವರೆಗೂ ಈ ಅಪರಾಧಗಳ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಿಲ್ಲ" ಎಂದು ಸಚಿವಾಲಯ ಹೇಳಿಕೆ ನೀಡಿದೆ.
ಕೆನಡಾದ ಹಿಂದೂ ದೇಗುಲದ ಗೋಡೆಗಳ ಮೇಲೆ ಭಾರತ ವಿರೋಧಿ ಬರಹ

"ಈ ಮೇಲೆ ವಿವರಿಸಿರುವಂತಹ ಘಟನಾವಳಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆನಡಾದಲ್ಲಿನ ಭಾರತದ ಪ್ರಜೆಗಳು ಮತ್ತು ವಿದ್ಯಾರ್ಥಿಗಳು ಹಾಗೂ ಪ್ರಯಾಣ/ ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳುತ್ತಿರುವವರು ಎಚ್ಚರಿಕೆಯಿಂದ ಇರಬೇಕು ಮತ್ತು ಜಾಗರೂಕತೆ ವಹಿಸಬೇಕು" ಎಂದು ಸಚಿವಾಲಯದ ಹೇಳಿಕೆ ಸೂಚಿಸಿದೆ.


"ಉಗ್ರಗಾಮಿ ಮತ್ತು ಮೂಲಭೂತವಾದಿ ಶಕ್ತಿಗಳು ನಡೆಸುತ್ತಿರುವ ಕ್ಷುಲ್ಲಕ ಕೃತ್ಯ ಇದಾಗಿದೆ. ಜನಸ್ನೇಹಿ ದೇಶದಲ್ಲಿ ಇದಕ್ಕೆ ಅವಕಾಶ ನೀಡಿರುವುದು ತೀವ್ರ ಆಕ್ಷೇಪಾರ್ಹ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಗುರುವಾರ ಹೇಳಿದ್ದರು.

ಕೆನಡಾದಲ್ಲಿರುವ ಭಾರತದ ಪ್ರಜೆಗಳು ಮತ್ತು ವಿದ್ಯಾರ್ಥಿಗಳು ಒಟ್ಟಾವದಲ್ಲಿನ ಭಾರತದ ರಾಯಭಾರ ಕಚೇರಿ ಅಥವಾ ಟೊರಾಂಟೋ ಮತ್ತು ವ್ಯಾಂಕೋವರ್‌ಗಳಲ್ಲಿನ ಕಾನ್ಸುಲೇಟ್‌ಗಳಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಸರ್ಕಾರ ಮನವಿ ಮಾಡಿದೆ. ಯಾವುದೇ ಅಗತ್ಯ ಅಥವಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕೆನಡಾದಲ್ಲಿನ ಭಾರತದ ಪ್ರಜೆಗಳ ಜತೆ ಸಂಪರ್ಕದಲ್ಲಿರಲು ಹೈಕಮಿಷನ್ ಮತ್ತು ಕಾನ್ಸುಲೇಟ್‌ಗೆ ಇದರಿಂದ ಸಹಾಯವಾಗಲಿದೆ ಎಂದು ಹೇಳಿಕೆ ತಿಳಿಸಿದೆ.
ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲೆ ಸತತ ದಾಳಿ: 10 ದಿನದಲ್ಲಿ ಆರು ಕಡೆ ಕಳವು

ಕೆನಡಾದಲ್ಲಿ ಸುಮಾರು 16 ಲಕ್ಷ ಭಾರತ ಮೂಲದ ಹಾಗೂ ಅನಿವಾಸಿ ಭಾರತೀಯರಿದ್ದಾರೆ. ಕೆನಡಾದ ಜನಸಂಖ್ಯೆಯಲ್ಲಿ ಅವರ ಪ್ರಮಾಣ ಶೇ 3ರಷ್ಟಿದೆ. ಸಿಖ್ಖರಿಗೆ ಪ್ರತ್ಯೇಕ ದೇಶ ನೀಡಬೇಕು ಎಂದು ಹೋರಾಡುತ್ತಿರುವ 'ಖಲಿಸ್ತಾನ' ಪರ ಶಕ್ತಿಗಳ ಚಟುವಟಿಕೆ ಭಾರಿ ರಾಜತಾಂತ್ರಿಕ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಅದರ ಮಧ್ಯೆ ಈ ಸೂಚನೆ ಹೊರಡಿಸಲಾಗಿದೆ.

ಸಂಸದ ಚಂದ್ರ ಆರ್ಯ ಪ್ರಸ್ತಾಪ
ಕೆನಡಾದಲ್ಲಿ ಸಂಸದರಾಗಿರುವ ಕರ್ನಾಟಕ ಮೂಲದ ಚಂದ್ರ ಆರ್ಯ ಅವರು ಹಿಂದೂಗಳು ಮತ್ತು ಹಿಂದೂ ಸ್ಥಳಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಸಂಸತ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.


"ಶ್ರೀ ಸ್ವಾಮಿನಾರಾಯಣ ಮಂದಿರ ಮತ್ತು ವಿಷ್ಣು ಮಂದಿರಗಳು ಸೇರಿದಂತೆ ಹಿಮದೂ ದೇಗುಲಗಳ ಮೇಲಿನ ಇತ್ತೀಚಿನ ದಾಳಿಯನ್ನು ಎಲ್ಲ ದ್ವೇಷ ಅಪರಾಧಗಳಂತೆ ಖಂಡಿಸಬೇಕಿದೆ. ದಕ್ಷಿಣ ಏಷ್ಯಾ, ಆಫ್ರಿಕಾ, ಕೆರೇಬಿಯನ್‌ಗಳಿಂದ ಹಿಂದೂ ಕೆನಡಿಯನ್ನರು ಇಲ್ಲಿದ್ದಾರೆ. ಅವರಲ್ಲಿ ಹೆಚ್ಚಿನವರು ಭಾರತೀಯರು. ಅದು ಬಹಳ ಶಾಂತಿಪ್ರಿಯ ಮತ್ತು ಕಠಿಣ ಪರಿಶ್ರಮಿ ಸಮುದಾಯವಾಗಿದೆ ಮತ್ತು ತಮ್ಮ ಕುಟುಂಬಗಳು ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಿದ್ದಾರೆ. ಕೆನಡಾದಲ್ಲಿ ಸಂಘಟಿತವಾಗಿರುವ ಭಾರತ ವಿರೋಧಿ, ಹಿಂದೂ ವಿರೋಧಿ ಗುಂಪುಗಳು ಹಿಂದೂ ವಿರೋಧ ಭಾವನೆಗಳನ್ನು ಹೆಚ್ಚಿಸುತ್ತಿವೆ. ಕೆನಡಾದಲ್ಲಿ ಹೆಚ್ಚುತ್ತಿರುವ ಹಿಂದೂ ಫೋಬಿಯಾ ಕುರಿತು ಹಿಂದೂ- ಕೆನಡಿಯನ್ನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಸಂಸತ್‌ನಲ್ಲಿ ಚಂದ್ರ ಆರ್ಯ ಹೇಳಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ