ಆ್ಯಪ್ನಗರ

ಚಂದ್ರಯಾನ:2 ನಭಕ್ಕೆ ನೆಗೆದ ಇಸ್ರೋದ ಬಾಹುಬಲಿ ಜಿಎಸ್‌ಎಲ್‌ವಿ ಎಂಕೆ3

ಕ್ರಯೋಜೆನಿಕ್ ಎಂಜಿನ್‌ನಲ್ಲಿ ಹೀಲಿಯಂ ಇಂಧನ ಸೋರಿಕೆಯ ತಾಂತ್ರಿಕ ಕಾರಣದಿಂದ ಜುಲೈ 15ರಂದು ಮುಂದೂಡಲಾಗಿದ್ದ ಮಹತ್ವಾಕಾಂಕ್ಷೆಯ ಚಮದ್ರಯಾನ-2 ಉಡ್ಡಯನ ಈ ಮಧ್ಯಾಹ್ನ 2:43ಕ್ಕೆ ಶ್ರೀಹರಿಕೋಟಾದಲ್ಲಿ ನಡೆಯಲಿದೆ. ದೋಷವನ್ನು ಸಂಪೂರ್ಣ ಸರಿಪಡಿಸಲಾಗಿದ್ದು, ಈ ಉಡ್ಡಯನ ಯಶಸ್ವಿಯಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಭರವಸೆ ವ್ಯಕ್ತಪಡಿಸಿದ್ದಾರೆ.

Vijaya Karnataka Web 22 Jul 2019, 2:46 pm
ಚೆನ್ನೈ: ಶ್ರೀಹರಿಕೋಟ: ಚಂದ್ರನಲ್ಲಿಗೆ ಸಾಗಲು ವೇದಿಕೆ ಸಿದ್ದಗೊಳಿಸಿರುವ ಇಸ್ರೋ 2.43ಕ್ಕೆ ಚಂದ್ರಯಾನ-2 ಉಪಗ್ರಹ ಹೊತ್ತ ಜಿಎಸ್‌ಎಲ್‌ವಿ ಎಂಕೆ3 2.43ಕ್ಕೆ ನಭಕ್ಕೆ ನೆಗೆದಿದೆ.
Vijaya Karnataka Web Chandrayaan-2


ಭಾನುವಾರ 6:43ರಿಂದ 20 ಗಂಟೆಗಳ ಕ್ಷಣಗಣನೆ ಪ್ರಾರಂಭಿಸಿದ್ದಾಗಿ ಇಸ್ರೋ ಸಂಸ್ಥೆ ತಿಳಿಸಿದೆ.


ಜುಲೈ 15ರಂದು ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಚಂದ್ರಯಾನ-2 ಉಡ್ಡಯನ ಇಂದು ಮಧ್ಯಾಹ್ನ 2:43ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನಕ್ಕೆ ಸಿದ್ಧತೆ ನಡೆದಿತ್ತು.

ಮಧ್ಯಾಹ್ನ 1:30ರಿಂದ ಆರಂಭವಾಗಲಿರುವ ಈ ಮಹತ್ಕಾರ್ಯ ಎಲ್ಲರಲ್ಲೂ ಕೌತುಕ, ಆತಂಕಗಳನ್ನು ಸೃಷ್ಟಿಸಿದೆ. ಕ್ರಯೋಜೆನಿಕ್ ಎಂಜಿನ್‌ನಲ್ಲಿ ಹೀಲಿಯಂ ಇಂಧನ ಸೋರಿಕೆ ಕಾರಣದಿಂದ ಜುಲೈ 15ರ ಉಡ್ಡಯನವನ್ನು ಮುಂದೂಡಲಾಗಿತ್ತು. ಇದೀಗ ತಾಂತ್ರಿಕ ದೋಷ ಸರಿಪಡಿಸಲಾಗಿದ್ದು ಸೋರಿಕೆ ಸ್ಥಗಿತಗೊಂಡಿದೆ. ಹೀಗಾಗಿ ಚಂದ್ರಯಾನ-2 ಉಡ್ಡಯನಕ್ಕೆ ಇಸ್ರೋ ಸಜ್ಜಾಗಿದೆ.

ಶನಿವಾರದಂದು ಇಸ್ರೋ ಎರಡು ಬಾರಿ ಚಂದ್ರಯಾನ 2 ಉಡ್ಡಯನದ ಪೂರ್ವಭಾವಿ ರಿಹರ್ಸಲ್ ನಡೆಸಿತ್ತು. ಅವೆರಡೂ ಯಶಸ್ವಿಯಾದ ಬಳಿಕವೇ ಇಂದು ಮಧ್ಯಾಹ್ನ 2:43ರ ಸಮಯವನ್ನು ಉಡ್ಡಯನಕ್ಕೆ ನಿಗದಿಪಡಿಸಲಾಗಿದೆ.

ಇಸ್ರೋ ಅಧ್ಯಕ್ಷ ಕೆ. ಶಿವನ್ ಭಾನುವಾರವೇ ಶ್ರೀಹರಿಕೋಟಾಗೆ ತಲುಪಿದ್ದು, ಈ ಬಾರಿ ಯಶಸ್ವೀ ಉಡ್ಡಯನ ನಡೆಯಲಿದೆ ಎಂದು ತಿಳಿಸಿದರು. ಚಂದ್ರಯಾನ-2 ಚಂದ್ರನ ಬಗ್ಗೆ ಹಲವಾರು ಹೊಸ ಸಂಗತಿಗಳ ಮೇಲೆ ಬೆಳಕು ಚೆಲ್ಲಲಿದೆ ಎಂದು ಇಸ್ರೋ ಹೇಳಿದೆ.

'ದೋಷಗಳನ್ನು ಸರಿಪಡಿಸಲಾಗಿದೆ. ದೋಷ ಪತ್ತೆಯಾದ ಬಳಿಕ ನಮ್ಮ ವಿಜ್ಞಾನಿಗಳು ಸತತ ಶ್ರಮವಹಿಸಿ ಅದನ್ನು ಸರಿಪಡಿಸಿದ್ದಾರೆ. ಈ ಬಾರಿ ಉಡ್ಡಯನ ಯಶಸ್ವಿಯಾಗುತ್ತದೆ' ಎಂದು ಶಿವನ್ ತಿಳಿಸಿದರು.

ಹಾಗಿದ್ದರೂ ಉಡ್ಡಯನ ಕಾರ್ಯ ಪೂರ್ಣಗೊಳ್ಳುವ ವರೆಗೂ ಇಸ್ರೋ ಎಂಜಿನಿಯರ್‌ಗಳು, ವಿಜ್ಞಾನಿಗಳು ಕಾತರದ, ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದಾರೆ. ಪ್ರತಿಕ್ಷಣವೂ ತಪಾಸಣೆ, ಮರು ತಪಾಸಣೆಗಳನ್ನು ನಡೆಸುತ್ತ ಚಂದ್ರಯಾನ ಉಡ್ಡಯನದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ.

'ಚಂದ್ರ ಯಾನವಿರಲಿ, ಮಂಗಳ ಯಾನವೇ ಇರಲಿ; ಜಿಎಸ್‌ಎಲ್‌ವಿ ಅಥವಾ ಪಿಎಸ್‌ಎಲ್‌ವಿ ಉಡ್ಡಯನ- ಯಾವುದೇ ಇದ್ದರೂ ಪ್ರಕ್ರಿಯೆ ಹೀಗೇ ಇರುತ್ತದೆ. ಈ ಬಾರಿ ನಮ್ಮಲ್ಲಿ ಉದ್ವೇಗ ಸ್ವಲ್ಪ ಹೆಚ್ಚೇ ಇದೆ' ಎಂದು ಮೂಲವೊಂದು ತಿಳಿಸಿದೆ.

ಇಂದಿನ ಉಡ್ಡಯನಕ್ಕೆ 20 ಗಂಟೆಗಳ ಕ್ಷಣಗಣನೆ ಭಾನುವಾರ ಸಂಜೆ 6:43ರಿಂದ ಆರಂಭವಾಗಿದೆ. ಭಾನುವಾರ ರಾತ್ರಿಯೇ ಆರಂಭವಾದ ಇಂಧನ ತುಂಬುವ ಕಾರ್ಯ ಸೋಮವಾರ ಬೆಳಗ್ಗೆಯೂ ಮುಂದುವರಿದಿದೆ. ಎಲ್ಲ ಜಿಎಸ್‌ಎಲ್‌ವಿ-ಎಂಕೆಐ2 ಉಡ್ಡಯನಗಳಲ್ಲೂ ಕ್ಷಣಗಣನೆ ಆರಂಭವಾದ ಬಳಿಕ ರಾಕೆಟ್‌ಗಳಿಗೆ ಇಸ್ರೋ ಮೊದಲು ಘನ ಇಂಧನಗಳನ್ನು ಭರ್ತಿ ಮಾಡುತ್ತದೆ. ನಂತರ ಪ್ರಮುಖ ಘಟ್ಟದ (ಕೋರ್ ಸ್ಟೇಜ್- ಎಲ್‌110) ಇಂಧನ (ದ್ರವ ಇಂಧನ) ಭರ್ತಿ ಮಾಡಲಾಗುತ್ತದೆ. ಬಳಿಕ ಕ್ರಯೋಜೆನಿಕ್ ಹಂತದ ಇಂಧನ- ದ್ರವ ಹೈಡ್ರೋಜನ್ ಮತ್ತು ದ್ರವೀಕೃತ ಆಕ್ಸಿಜನ್ ಮತ್ತು ಹೀಲಿಯಂ ತುಂಬಿಸಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ