ನೀಟ್ ಅಧ್ವಾನ: ಅಧಿಕಾರಿಗಳ ವಿರುದ್ಧ ಪ್ರಕರಣ -9
ನಾಲ್ವರು ಶಿಕ್ಷಕರ ಅಮಾನತು| ವಿಷಾದ ವ್ಯಕ್ತ ಪಡಿಸಿದ ಸಿಬಿಎಸ್ಇ ಕೊಚ್ಚಿ/ಕಣ್ಣೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯ ಸಂಭವನೀಯ ವಂಚನೆ ತಡೆಯುವ ...
ಕೊಚ್ಚಿ/ಕಣ್ಣೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯ ಸಂಭವನೀಯ ವಂಚನೆ ತಡೆಯುವ ದಿಸೆಯಲ್ಲಿ ನಡೆದ ಬಿಗಿ ಕ್ರಮದ ಎಡವಟ್ಟುಗಳಿಗೆ ಸಂಬಂಧಿಸಿದಂತೆ ಎರ್ನಾಕುಲಂ ಶಾಲೆಯೊಂದರ ಪರೀಕ್ಷಾ ಕೇಂದ್ರದ ಅಧಿಕಾರಿಗಳ ವಿರುದ್ಧ ಮಂಗಳವಾರ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಕಳೆದ 7ನೇ ತಾರೀಕು ದೇಶವ್ಯಾಪಿ ನೀಟ್ ಪರೀಕ್ಷೆ ನಡೆದಿದ್ದು ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯ ಒಳಬಿಡುವ ಮೊದಲು ಅನೇಕ ಬಿಗಿ ಕ್ರಮಗಳಿಗೆ ಒಳಡಿಸಲಾಗಿತ್ತು.
ಕಿವಿಯೋಲೆ, ಮೂಗುತಿ ಸೇರಿದಂತೆ ವಿದ್ಯಾರ್ಥಿನಿಯರ ಮೈಮೇಲಿನ ಎಲ್ಲಾ ಆಭರಣಗಳನ್ನು ತೆಗೆಸಿ ಹಾಕಲಾಗಿತ್ತು. ಒಳ ಉಡುಪು ಮತ್ತು ಜೀನ್ಸ್ ಪ್ಯಾಂಟ್ ಮೇಲಿನ ಬಟನ್ಗಳನ್ನು ಸಹ ಬಿಟ್ಟಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕಣ್ಣೂರು ಜಿಲ್ಲೆಯಲ್ಲಿ ನಾಲ್ವರು ಶಿಕ್ಷಕಿಯರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಪರೀಕ್ಷೆ ಕೊಠಡಿಗೆ ಪ್ರವೇಶ ನೀಡುವ ಮೊದಲು ವಿದ್ಯಾರ್ಥಿಗಳು ಧರಿಸಿದ್ದ ಅಂಗಿಯ ಉದ್ದ ತೋಳುಗಳನ್ನು ತುಂಡರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರ್ನಾಕುಲಂ ಜಿಲ್ಲೆಯ ಶಾಲೆಯೊಂದರ ಪರೀಕ್ಷಾ ಅಧಿಕಾರಿಗಳ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯೊಬ್ಬ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಕುರುಪ್ಪಂಪಾಡಿ ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಯು ದೂರಿನಲ್ಲಿ ಯಾವುದೇ ಅಧಿಕಾರಿಯ ಹೆಸರು ನಮೋದಿಸಿಲ್ಲ. ಆದರೆ ಅವರಿಂದ ತನಗೆ ಅವಮಾನವಾಗಿದೆ. ಅಂಗಿಯ ತೋಳು ತುಂಡರಿಸಿದರು. ಟ್ರೌಸರ್ನ ಜಿಪ್ ಬಿಚ್ಚಲು ಹೇಳಿದರು. ಇದರಿಂದ ತೀವ್ರ ಮುಜುಗರ ಅನುಭವಿಸಿದೆ ಎಂದು ವಿದ್ಯಾರ್ಥಿ ದೂರಿನಲ್ಲಿ ಹೇಳಿಕೊಂಡಿದ್ದಾನೆ. ವಿದ್ಯಾರ್ಥಿಯ ಹೇಳಿಕೆ ದಾಖಲಿಸಿಕೊಂಡ ಬಳಿಕ ಈ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ ಕಣ್ಣೂರು ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಆದ ಎಡವಟ್ಟಿಗೆ ಸಂಬಂಧಿಸಿದಂತೆ ನಾಲ್ವರು ಶಿಕ್ಷಕಿಯರನ್ನು ಅಮಾನತುಗೊಳಿಸಲಾಗಿದೆ. ವಿದ್ಯಾರ್ಥಿನಿಯರು ಧರಿಸಿದ್ದ ಒಳ ಉಡುಪು ಬಿಚ್ಚಿಸಿದ ಆಘಾತಕಾರಿ ಸಂಗತಿ ಇಲ್ಲಿ ನಡೆದಿತ್ತು. ಜೀನ್ ಪ್ಯಾಂಟಿನ ಪಾಕೆಟ್ ಮೇಲೆ ಮೆಟಲ್ ಬಟನ್ ಇವೆ ಎನ್ನುವ ಕಾರಣಕ್ಕೆ ಅದನ್ನು ಬಲವಂತವಾಗಿ ಕಿತ್ತು ಹಾಕಿ ವಿದ್ಯಾರ್ಥಿನಿಯನ್ನು ಒಳ ಕಳಿಸಿದ್ದ ಕಹಿ ಘಟನೆಯೂ ನಡೆದಿತ್ತು.
ಈ ಪ್ರಕರಣ ಕುರಿತು ಕೇರಳ ವಿಧಾನಸಭೆ ತೀವ್ರ ಖಂಡನೆ ವ್ಯಕ್ತ ಪಡಿಸಿದೆ.
===============
ಅತ್ಯುತ್ಸಾಹದ ಕೆಟ್ಟ ಪರಿಣಾಮ: ವಿದ್ಯಾರ್ಥಿನಿಯ ಒಳ ಉಡುಪು ಬಿಚ್ಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಆಘಾತ ವ್ಯಕ್ತ ಪಡಿಸಿರುವ ಸಿಬಿಎಸ್ಇ ಮಂಡಳಿ, ವಿದ್ಯಾರ್ಥಿನಿಯ ಕ್ಷಮೆಯಾಚಿಸುವಂತೆ ಸಂಬಂಧಪಟ್ಟ ಶಾಲೆಯ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದೆ.
ಸಿಬಿಎಸ್ಇ ಮುಖ್ಯಸ್ಥ ಆರ್ಕೆ ಚತುರ್ವೇದಿ ಮಂಗಳವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಈ ನಿರ್ದೇಶನ ಹೊರ ಬಿದ್ದಿದೆ.
ಪರೀಕ್ಷೆಯನ್ನು ಆದಷ್ಟು ಪ್ರಾಮಾಣಿಕ ರೀತಿಯಲ್ಲಿ ನಡೆಸಬೇಕು ಎನ್ನುವ ದಿಸೆಯಲ್ಲಿ ಈ ಅತಿರೇಕ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ನಾಲ್ವರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ನೀಟ್ ಪರೀಕ್ಷೆಯ ಆಯೋಜನೆ ಜವಾಬ್ದಾರಿ ಹೊತ್ತಿದ್ದ ಸಿಬಿಎಸ್ಇ ಸ್ಪಷ್ಟ ಪಡಿಸಿದೆ.
ಇಡೀ ಪ್ರಕರಣ ಅತ್ಯುತ್ಸಾಹದ ಕೆಟ್ಟ ಪರಿಣಾಮ ಎಂದು ಸಿಬಿಎಸ್ಇ ವಿಷಾದಿಸಿದೆ.
ಸಮರ್ಥನೆ: ಕಟ್ಟು ನಿಟ್ಟಿನ ವಸ್ತ್ರ ಸಂಹಿತೆ ವಿಧಿಸುವುದು ಪರೀಕ್ಷೆಯ ಪಾವಿತ್ರ್ಯವನ್ನು ಕಾಪಾಡಲು ಅಗತ್ಯ ಎಂದೂ ಮಂಡಳಿ ಸಮರ್ಥಿಸಿಕೊಂಡಿದೆ.
''ಕಣ್ಣೂರಿನಲ್ಲಿ ನಡೆದ ಘಟನೆ ದುರದೃಷ್ಟಕರ, ಇದು ಕೆಲವು ವ್ಯಕ್ತಿಗಳ ಅತ್ಯುತ್ಸಾಹದ ಪರಿಣಾಮ. ಇದರಿಂದ ವಿದ್ಯಾರ್ಥಿನಿಗೆ ತೊಂದರೆಯಾಗಿದ್ದಕ್ಕೆ ನಾವು ವಿಷಾದ ವ್ಯಕ್ತ ಪಡಿಸುತ್ತೇವೆ,'' ಎಂದು ಸಿಬಿಎಸ್ಇ ವಕ್ತಾರೆ ರಮಾ ಶರ್ಮಾ ಹೇಳಿಕೆ ನೀಡಿದ್ದಾರೆ.
''ವಿದ್ಯಾರ್ಥಿಗಳಿಗೆ ವೆಬ್ಸೈಟ್, ಬುಲೆಟಿನ್, ಹಾಲ್ ಟಿಕೆಟ್ಗಳ ಮೇಲೆ ಪರೀಕ್ಷೆಯ ನಿಯಮಗಳನ್ನು ಪ್ರಕಟಿಸಲಾಗಿತ್ತು. ಅಲ್ಲದೆ ಇ-ಮೇಲ್, ಎಸ್ಎಂಎಸ್ಗಳ ಮೂಲಕ ವೈಯಕ್ತಿಕವಾಗಿ ಮಾಹಿತಿ ತಿಳಿಸಲಾಗಿತ್ತು. ಪ್ರತಿಷ್ಠಿತ ಪರೀಕ್ಷೆಯ ಪಾವಿತ್ರ್ಯ ಕಾಪಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿತ್ತು,'' ಎಂದು ರಮಾ ತಿಳಿಸಿದ್ದಾರೆ. ನೀಟ್ ಪರೀಕ್ಷೆಗಳ ನಿಯಮಗಳ ಕುರಿತು ಅರಿವಿಲ್ಲದೆ ಸಾಕಷ್ಟು ವಿದ್ಯಾರ್ಥಿಗಳು ಮುಜುಗರ ಅನುಭವಿಸಿದ್ದರು.
ನೀಟ್ ಕ್ರಮ ಖಂಡಿಸಿದ ಕೇರಳ ವಿಧಾನಸಭೆ: ಪ್ರವೇಶ ಪರೀಕ್ಷೆಯ ವೇಳೆಯಲ್ಲಿ ವಿದ್ಯಾರ್ಥಿಗಳ ಬಟ್ಟೆ ತೆಗೆಸಿ, ಅವಮಾನ ಮಾಡಿದ್ದನ್ನು ಕಟುವಾಗಿ ಟೀಕಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಾವು ಈ ಘಟನೆಯನ್ನು ಕೇಂದ್ರ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಪೊಲೀಸರು ಈ ಕುರಿತು ಈಗಾಗಲೇ ವಿಚಾರಣೆ ನಡೆಸುತ್ತಿದ್ದಾರೆ ಎಂದಿದ್ದಾರೆ.
ವಿದ್ಯಾರ್ಥಿನಿಯ ಒಳ ಉಡುಪು ತೆಗೆಸಿದ ಪ್ರಕರಣದ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ವಿಜಯನ್,'' ಸಂತ್ರಸ್ತ ವಿದ್ಯಾರ್ಥಿನಿ ಹಾಗೂ ಆಕೆಯ ಪಾಲಕರನ್ನು ಭೇಟಿಯಾಗಿ ಆತ್ಮಸ್ಥೈರ್ಯ ತುಂಬುವಂತೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರಿಗೆ ನಿರ್ದೇಶನ ನೀಡಲಾಗಿದೆ,'' ಎಂದಿದ್ದಾರೆ.
ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಾಲಾ ಮಾತನಾಡಿ 'ಪ್ರಕರಣವೂ ಕ್ರೂರ, ಅಮಾನವೀಯ ಮತ್ತು ಅವಮಾನಕರ' ಎಂದಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಾಂಬ್, ಪಿಸ್ತೂಲ್ಗಳನ್ನು ತಂದಿರಲಿಲ್ಲ ಎಂದ ಅವರು, ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಆಪಾದಿಸಿದ್ದಾರೆ. ಈ ರೀತಿಯ ನಿಯಮಗಳ ವಿರುದ್ಧ ಸಭೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.