ಹೊಸದಿಲ್ಲಿ: ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರು, ''ಈ ಪ್ರಕರಣದಲ್ಲಿ ಯಾವೊಬ್ಬ ಅಧಿಕಾರಿಯೂ ತಪ್ಪು ಮಾಡಿಲ್ಲ, ಹೀಗಾಗಿ ಯಾರನ್ನೂ ಬಂಧಿಸುವುದು ಬೇಡ,'' ಎಂದು ಹೇಳುವ ಮೂಲಕ ಕೇಂದ್ರ ಸರಕಾತ ತಮ್ಮ ವಿರುದ್ಧ ದ್ವೇಷ ರಾಜಕೀಯ ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಕಳೆದ ವಾರ ತಿಹಾರ್ ಜೈಲು ಸೇರಿರುವ ಚಿದಂಬರಂ ಅಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ಹೋದ ಕುಟುಂಬ ಸದಸ್ಯರಿಗೆ, ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಸಂದೇಶವನ್ನು ಬರೆದು ಪೋಸ್ಟ್ ಮಾಡುವಂತೆ ಸೂಚಿಸಿದ್ದಾರೆ. ''ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಮತ್ತು ಶಿಫಾರಸು ಮಾಡಿದ ಹತ್ತಾರು ಅಧಿಕಾರಿಗಳಿರುವಾಗ ಅವರಾರನ್ನೂ ಬಂಧಿಸದೆ ನಿಮ್ಮನ್ನು ಮಾತ್ರ ಏಕೆ ಬಂಧಿಸಿದ್ದಾರೆ ಎಂದು ಜನರು ನನ್ನನ್ನು ಕೇಳಿದರು. ಕೊನೆ ಬಾರಿಗೆ ನೀವು ಸಹಿ ಹಾಕಿದ್ದಿರಿ ಎಂಬ ಕಾರಣಕ್ಕೆ ನಿಮ್ಮನ್ನು ಬಂಧಿಸಲಾಗಿದೆಯೇ? ಎಂದು ಕೇಳಿದರು. ಆದರೆ ನನ್ನ ಬಳಿ ಇದಕ್ಕೆ ಉತ್ತರವಿಲ್ಲ,'' ಎಂದು ಚಿದಂಬರಂ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಅಧಿಕಾರಿಗಳ ಬಂಧನ ಬೇಡ: ಚಿದು ವ್ಯಂಗ್ಯ
ಕುಟುಂಬ ಸದಸ್ಯರಿಗೆ, ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಸಂದೇಶವನ್ನು ಬರೆದು ಪೋಸ್ಟ್ ಮಾಡುವಂತೆ ಸೂಚಿಸಿದ್ದಾರೆ.
PTI 10 Sep 2019, 5:00 am