ಆ್ಯಪ್ನಗರ

ಜುಲೈ 3ರವರೆಗೆ ಚಿದಂಬರಂ ನಿರಾಳ

ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದ ಭೀತಿಯಲ್ಲಿದ್ದ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಸದ್ಯಕ್ಕೆ ಸಣ್ಣದೊಂದು 'ಜೀವದಾನ' ದೊರೆತಿದೆ. ಸಿಬಿಐ ತನಿಖೆ ನಡೆಸುತ್ತಿರುವ ಈ ಕೇಸ್‌ನಲ್ಲಿ ಜುಲೈ 3ರ ತನಕ ಕಾಂಗ್ರೆಸ್‌ ಮುಖಂಡನನ್ನು ಬಂಧಿಸದಂತೆ ದಿಲ್ಲಿ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

Vijaya Karnataka 1 Jun 2018, 9:28 am
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದ ಭೀತಿಯಲ್ಲಿದ್ದ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಸದ್ಯಕ್ಕೆ ಸಣ್ಣದೊಂದು 'ಜೀವದಾನ' ದೊರೆತಿದೆ. ಸಿಬಿಐ ತನಿಖೆ ನಡೆಸುತ್ತಿರುವ ಈ ಕೇಸ್‌ನಲ್ಲಿ ಜುಲೈ 3ರ ತನಕ ಕಾಂಗ್ರೆಸ್‌ ಮುಖಂಡನನ್ನು ಬಂಧಿಸದಂತೆ ದಿಲ್ಲಿ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
Vijaya Karnataka Web chidambaram


ಆದರೆ,ಸಿಬಿಐ ಕರೆದಾಗಲೆಲ್ಲ ವಿಚಾರಣೆಗೆ ಹಾಜರಾಗುವಂತೆಯೂ, ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆಯೂ ಹೈಕೋರ್ಟ್‌ ನ್ಯಾಯಮೂರ್ತಿ ಎ.ಕೆ. ಪಾಠಕ್‌ ಅವರು ಚಿದಂಬರಂ ಅವರಿಗೆ ಸೂಚಿಸಿದ್ದಾರೆ.

ಉಚ್ಚ ನ್ಯಾಯಾಲಯವು ಸಿಬಿಐಗೂ ನೋಟಿಸ್‌ ನೀಡಿದ್ದು, ಹಿರಿಯ ಕಾಂಗ್ರೆಸ್‌ ಮುಖಂಡನ ನಿರೀಕ್ಷಣಾ ಜಾಮೀನು ಅರ್ಜಿ ಕುರಿತು ಪ್ರತಿಕ್ರಿಯೆ ಕೇಳಿದೆ. ಅಲ್ಲದೆ, ಮುಂದಿನ ವಿಚಾರಣೆಯನ್ನು ಜುಲೈ 3ಕ್ಕೆ ನಿಗದಿಗೊಳಿಸಿ, 'ಅಲ್ಲಿಯ ತನಕ ಚಿದಂಬರಂ ಅವರನ್ನು ಬಂಧಿಸದಂತೆ' ಸಿಬಿಐಗೆ ನಿರ್ದೇಶನ ನೀಡಿತು.

ಚಿದು ಪರ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ಸಲ್ಮಾನ್‌ ಖುರ್ಷಿದ್‌ ಅವರು, ಚಿದಂಬರಂ ವಿಚಾರಣೆಗೆ ತನಿಖಾ ಸಂಸ್ಥೆಯೊಂದಿಗೆ ಸಹಕರಿಸಲಿದ್ದಾರೆ ಎಂದು ಭರವಸೆ ನೀಡಿದರು. ಆಗ, ಸಿಬಿಐ ಪರ ವಿಚಾರಣೆಗೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ತುಷಾರ್‌ ಮೆಹ್ತಾ ಅವರು ಚಿದಂಬರಂ ಅರ್ಜಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಮಾಜಿ ಸಚಿವರು ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್‌ಗೆ ಬರುವುದಕ್ಕೂ ಮೊದಲು ವಿಚಾರಣಾ ನ್ಯಾಯಾಲಯದ ಮೊರೆಹೋಗಬಹುದಾಗಿತ್ತು ಎಂದರು.

ಸಿಬಿಐ ನೀಡಿದ ಸೂಚನೆಗೆ ಅನುಸಾರವಾಗಿ ರಾಜಕಾರಣಿಯನ್ನು ವಿಚಾರಣೆಗೆ ಕರೆಯಲಾಗಿತ್ತು. ಈ ದೇಶದಲ್ಲಿ ಕಾನೂನು ಪ್ರತಿಯೊಬ್ಬರಿಗೂ ಒಂದೇ ತೆರನಾಗಿರುತ್ತದೆ ಎಂದು ಮೆಹ್ತಾ ಹೇಳಿದರು. ಆದಾಗ್ಯೂ, ಮುಂದಿನ ವಿಚಾರಣಾ ದಿನಾಂಕದ ತನಕ ಅವರನ್ನು (ಚಿದಂಬರಂ) ಸಿಬಿಐ ಬಂಧಿಸುವುದಿಲ್ಲ ಎಂಬ ಬಗ್ಗೆ ಎಎಸ್‌ಜಿ ಖಾತರಿ ನೀಡಬೇಕು ಎಂದು ನ್ಯಾಯಾಲಯ ಹೇಳಿತು.

ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಬೆನ್ನಲ್ಲಿಯೇ, ಗುರುವಾರ ನಿಗದಿಯಾಗಿದ್ದ ವಿಚಾರಣೆಗೆ ಚಿದಂಬರಂ ಹಾಜರಾಗುವ ಅಗತ್ಯವಿಲ್ಲ ಎಂದು ಸಿಬಿಐ ಹೇಳಿತು. ಈ ದಿಢೀರ್‌ ನಿರ್ಧಾರಕ್ಕೆ ತನಿಖಾ ಸಂಸ್ಥೆ ಕಾರಣ ನೀಡಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ