ಆ್ಯಪ್ನಗರ

ಕಂಬಿ ಎಣಿಸಿದ ಗಣ್ಯರ ಗುಂಪಿಗೆ ಚಿದಂಬರಂ

ಈ ಹಿಂದೆಯೂ ಹಲವು ರಾಜಕೀಯ ನಾಯಕರು ವಿವಿಧ ಹಗರಣಗಳಲ್ಲಿ ಸಿಲುಕಿ ಸೆರೆವಾಸ ಅನುಭವಿಸಿದ್ದಾರೆ.

PTI 23 Aug 2019, 5:00 am
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಕೇಂದ್ರ ಮಾಜಿ ಗೃಹ ಹಾಗೂ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಅವರು ಭ್ರಷ್ಟಾಚಾರದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಮೊದಲ ರಾಜಕಾರಣಿಯೇನಲ್ಲ. ಈ ಹಿಂದೆಯೂ ಹಲವು ರಾಜಕೀಯ ನಾಯಕರು ವಿವಿಧ ಹಗರಣಗಳಲ್ಲಿ ಸಿಲುಕಿ ಸೆರೆವಾಸ ಅನುಭವಿಸಿದ್ದಾರೆ.
Vijaya Karnataka Web chidu

ಲಾಲು ಪ್ರಸಾದ್‌ ಯಾದವ್‌: ಬಹುಕೋಟಿ ಮೇವು ಹಗರಣದಲ್ಲಿ ಆಪರಾಧಿಯಾಗಿ ಸದ್ಯ ರಾಂಚಿಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ 71 ವರ್ಷದ ಆರ್‌ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಸಿಎಂ. ಅವರು 14 ವರ್ಷ ಶಿಕ್ಷೆಗೆ ಗುರಿಯಾಗಿದ್ದು, 24 ತಿಂಗಳು ಜೈಲು ವಾಸ ಪೂರೈಸಿದ್ದಾರೆ. ಸುಮಾರು 900 ಕೋಟಿ ರೂ. ಮೊತ್ತದ ಮೇವು ಹಗರಣದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಲಾಲು ಅಪರಾಧಿಯಾಗಿದ್ದಾರೆ.
ಜೆ. ಜಯಲಲಿತಾ: ಸುಮಾರು 66 ಕೋಟಿ ರೂ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ 2014ರ ಸೆಪ್ಟೆಂಬರ್‌ನಲ್ಲಿ ದೋಷಿ ಎಂದು ಕೋರ್ಟ್‌ ತೀರ್ಪು ನೀಡಿತು. ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 100 ಕೋಟಿ ರೂ. ದಂಡ ಕೂಡ ವಿಧಿಸಿತು. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ 21 ದಿನ ಜೈಲುವಾಸ ಅನುಭವಿಸಿದ ಬಳಿಕ ಜಾಮೀನು ಪಡೆದು ಎಐಎಡಿಎಂಕೆ ಮುಖ್ಯಸ್ಥೆ ಚೆನ್ನೈಗೆ ಮರಳಿದ್ದರು. ಆ ನಂತರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದ್ದರು. 2016ರ ಡಿಸೆಂಬರ್‌ನಲ್ಲಿ ಅನಾರೋಗ್ಯದಿಂದ ಮೃತಪಟ್ಟರು.
ಬಂಗಾರು ಲಕ್ಷ್ಮಣ್‌: ಶಸ್ತ್ರಾಸ್ತ್ರ ಖರೀದಿ ಪ್ರಕರಣವೊಂದರಲ್ಲಿ ಲಂಚ ಪಡೆದ ಆರೋಪದ ಮೇರೆಗೆ 2012ರಲ್ಲಿ ದಿಲ್ಲಿ ಕೋರ್ಟ್‌ ಬಿಜೆಪಿ ಮಾಜಿ ಅಧ್ಯಕ್ಷ ಬಂಗಾರು ಲಕ್ಷ್ಮಣ್‌ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ನಕಲಿ ಶಸ್ತ್ರಾಸ್ತ್ರ ಡೀಲರ್‌ಗಳನ್ನು ರಕ್ಷಣಾ ಸಚಿವಾಲಯಕ್ಕೆ ಶಿಫಾರಸು ಮಾಡಲು ಲಂಚ ಸ್ವೀಕರಿಸಿದ ಆರೋಪ ಲಕ್ಷ್ಮಣ್‌ ವಿರುದ್ಧ ಕೇಳಿ ಬಂದಿತ್ತು.2014ರಲ್ಲಿ ಅವರು ನಿಧನರಾದರು.
ಎ. ರಾಜಾ: ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಯುಪಿಎ ಆಡಳಿತಾವಧಿಯಲ್ಲಿನ 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಕೇಂದ್ರದ ಮಾಜಿ ದೂರಸಂಪರ್ಕ ಸಚಿವ ಹಾಗೂ ಡಿಎಂಕೆ ನಾಯಕ ಎ. ರಾಜಾ 2011ರ ಫೆ.2ರಂದು ಬಂಧಿತರಾದರು. 15 ತಿಂಗಳ ಕಾಲ ಅವರು ರಾಜಾ ದಿಲ್ಲಿಯ ತಿಹಾರ್‌ ಜೈಲಿನಲ್ಲಿದ್ದರು. 2017ರಲ್ಲಿ ವಿಶೇಷ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿತು. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಅವರು ಪುನರಾಯ್ಕೆಯಾಗಿದ್ದಾರೆ.
ಕನಿಮೊಳಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಪುತ್ರಿಯಾಗಿರುವ ಕನಿಮೊಳಿ ಸಹ 2ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ 2011ರ ಮೇ 21ರಿಂದ ನವೆಂಬರ್‌ 28ರವರೆಗೆ ಜೈಲು ವಾಸ ಅನುಭವಿಸಿದರು. 2017ರಲ್ಲಿ ನ್ಯಾಯಾಲಯ ಅವರನ್ನೂ ಖುಲಾಸೆಗೊಳಿಸಿತು. ಕನಿಮೊಳಿ ಸಹ ಹಾಲಿ ಲೋಕಸಭೆಯ ಸದಸ್ಯೆಯಾಗಿದ್ದಾರೆ.
ಸುರೇಶ್‌ ಕಲ್ಮಾಡಿ: 2010ರ ಕಾಮನ್‌ವೆಲ್ತ್‌ ಗೇಮ್ಸ್‌ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಭಾರತೀಯ ಒಲಿಂಪಿಕ್‌ ಸಂಸ್ಥೆಯ ಮಾಜಿ ಅಧ್ಯಕ್ಷ ಸುರೇಶ್‌ ಕಲ್ಮಾಡಿ ಅವರನ್ನು 2011ರ ಏಪ್ರಿಲ್‌ನಲ್ಲಿ ಸಿಬಿಐ ಬಂಧಿಸಿತು. ಭ್ರಷ್ಟಾಚಾರ, ವಂಚನೆ, ಸಂಚು ಹೆಣೆದ ಆರೋಪ ಅವರ ವಿರುದ್ಧ ಕೇಳಿಬಂದಿತ್ತು. ಕೇಂದ್ರದ ಮಾಜಿ ಸಚಿವರೂ ಆಗಿರುವ ಕಲ್ಮಾಡಿ, 9 ತಿಂಗಳು ಜೈಲು ವಾಸ ಅನುಭವಿಸಿದ್ದಾರೆ. ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಷನ್‌ 2016ರಲ್ಲಿ ಕಲ್ಮಾಡಿ ಅವರಿಗೆ 'ಆಜೀವ ಪೋಷಕ' ಗೌರವ ನೀಡಿದರೂ, ''ನಿರ್ದೋಷಿಯೆಂದು ಸಾಬೀತಾಗುವ ತನಕ ಯಾವುದೇ ಹುದ್ದೆ ಒಪ್ಪಿಕೊಳ್ಳಲ್ಲ,' ಎಂದು ಕಲ್ಮಾಡಿ ತಿರಸ್ಕರಿಸಿದ್ದಾರೆ.
ಅಮರ್‌ ಸಿಂಗ್‌: ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಆಪ್ತರಾಗಿದ್ದ ಸಮಾಜವಾದಿ ಪಕ್ಷದ ನಾಯಕ, ರಾಜ್ಯಸಭಾ ಸದಸ್ಯರಾಗಿದ್ದ ಅಮರ್‌ಸಿಂಗ್‌ ಅವರನ್ನು 2008ರ ಯುಪಿಎ-1 ಅವಧಿಯಲ್ಲಿ ನಡೆದ 'ವೋಟಿಗಾಗಿ ನೋಟು' ಹಗರಣದಲ್ಲಿ 2011ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಗಿತ್ತು. 13 ದಿನಗಳ ಕಾಲ ಅಮರ್‌ಸಿಂಗ್‌ ಜೈಲಿನಲ್ಲಿದ್ದರು. 2013ರಲ್ಲಿ ಅಮರ್‌ ಸಿಂಗ್‌ ಅವರನ್ನು ನ್ಯಾಯಾಲಯವು ನಿರ್ದೋಷಿ ಎಂದು ಸಾರಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ