ಆ್ಯಪ್ನಗರ

ಚಿದಂಬರಂಗೆ ಕಸ್ಟಡಿ

ಕೋರ್ಟ್‌ ತನ್ನ ತೀರ್ಪು ಪ್ರಕಟಿಸುತ್ತಿದ್ದಂತೆಯೇ 73 ವರ್ಷದ ಚಿದಂಬರಂ ಅವರನ್ನು ಸಿಬಿಐ ತಂಡ ಮರಳಿ ಪ್ರಧಾನ ಕಚೇರಿಯ ಗೆಸ್ಟ್‌ ಹೌಸ್‌ಗೆ ಕರೆದೊಯ್ದಿತು.

PTI 23 Aug 2019, 5:00 am
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಹಿರಿಯ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಅವರನ್ನು ನಾಲ್ಕು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ. ನಾಲ್ಕು ದಿನಗಳ ಕಾಲ ತೀವ್ರ ವಿಚಾರಣೆ ಅಗತ್ಯವಿದೆ ಎಂಬುದನ್ನು ಒಪ್ಪಿಕೊಂಡ ದಿಲ್ಲಿ ಹೈಕೋರ್ಟ್‌ ಈ ಆದೇಶವನ್ನು ನೀಡಿದೆ.
Vijaya Karnataka Web chidambaram

ನೈಜತೆ ಮತ್ತು ಸಾಂದರ್ಭಿಕ ವಿಚಾರಗಳನ್ನು ಗಮನಿಸಿದರೆ ಅವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸುವುದು ಸೂಕ್ತವೆನಿಸುತ್ತದೆ ಎಂದು ವಿಶೇಷ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹಾರ್‌ ತಮ್ಮ ತೀರ್ಪಿನಲ್ಲಿ ತಿಳಿಸಿದರು. ಇದರೊಂದಿಗೆ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆ ಹೊಂದುವ ಚಿದಂಬರಂ ಅವರ ಪ್ರಯತ್ನಕ್ಕೆ ಸೋಲಾಯಿತು.
ಕೋರ್ಟ್‌ ತನ್ನ ತೀರ್ಪು ಪ್ರಕಟಿಸುತ್ತಿದ್ದಂತೆಯೇ 73 ವರ್ಷದ ಚಿದಂಬರಂ ಅವರನ್ನು ಸಿಬಿಐ ತಂಡ ಮರಳಿ ಪ್ರಧಾನ ಕಚೇರಿಯ ಗೆಸ್ಟ್‌ ಹೌಸ್‌ಗೆ ಕರೆದೊಯ್ದಿತು.
ಭಾರಿ ವಾದ ವಿವಾದ: ಕೋರ್ಟ್‌ ತೀರ್ಪು ನೀಡುವ ಮುನ್ನ ಸುಮಾರು ಒಂದೂವರೆ ಗಂಟೆಗಳ ಕಾಲ ಸಿಬಿಐ ಮತ್ತು ಚಿದಂಬರಂ ಅವರ ವಕೀಲರ ನಡುವೆ ಭಾರಿ ವಾಗ್ವಾದ ನಡೆಯಿತು. ಪ್ರಕರಣದ ಹಿಂದಿನ ಸಂಪೂರ್ಣ ಸಂಚನ್ನು ಬಯಲುಗೊಳಿಸಲು ಮೂಲಕ್ಕೆ ಹೋಗಬೇಕಾಗುತ್ತದೆ. ಹಾಗಾಗಿ, ತೀವ್ರ ವಿಚಾರಣೆ ಅಗತ್ಯ ಎಂದು ಸಿಬಿಐ ವಕೀಲರು ವಾದಿಸಿದರು. ಪ್ರಕರಣದ ಇತರ ಆರೋಪಿಗಳೆಲ್ಲರಿಗೂ ಜಾಮೀನು ನೀಡಿರುವುದರಿಂದ ಚಿದಂಬರಂ ಅವರಿಗೂ ಜಾಮೀನು ಕೊಡಬಹುದು ಎಂದು ಚಿದು ವಕೀಲರು ವಾದಿಸಿದರು.
ಬಿಗಿ ಭದ್ರತೆಯಲ್ಲಿ ಕೋರ್ಟ್‌ಗೆ: ಭಾರಿ ನಾಟಕೀಯ ಬೆಳವಣಿಗೆಗಳ ನಡುವೆ ಬುಧವಾರ ರಾತ್ರಿ ಬಂಧಿತರಾದ ಚಿದಂಬರಂ ಅವರನ್ನು ಗುರುವಾರ ಬಿಗಿ ಭದ್ರತೆಯ ನಡುವೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಚಿದಂಬರಂ ಪರ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ಪ್ರಕರಣ ಸಂಬಂಧ ಬಂಧಿತರಾದ ಭಾಸ್ಕರ್‌ ರಾಮನ್‌ (ಕಾರ್ತಿ ಅವರ ಚಾರ್ಟರ್ಡ್‌ ಅಕೌಂಟೆಂಟ್‌) ಅವರು ಜಾಮೀನಿನಲ್ಲಿದ್ದಾರೆ. ಆರೋಪಿಗಳಾದ ಪೀಟರ್‌ ಮತ್ತು ಇಂದ್ರಾಣಿ ಮುಖರ್ಜಿ ಕೂಡಾ ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ವಿದೇಶಿ ಹೂಡಿಕೆಗೆ ಅನುಮತಿ ನೀಡಿದ ಅಧಿಕಾರಿಗಳನ್ನು ಬಂಧಿಸಲಾಗಿಲ್ಲ. ಹಾಗಿರುವಾಗ ಚಿದಂಬರಂಗೆ ಜಾಮೀನು ನೀಡಬಾರದೇಕೆ ಎಂದು ಪ್ರಶ್ನಿಸಿದರು. ಸಿಬಿಐ ಪರವಾಗಿ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಚಿದಂಬರಂ ಅವರು ಯಾವುದೇ ಪ್ರಶ್ನೆಗೂ ಸಮರ್ಪಕ ಉತ್ತರ ನೀಡದೆ ಇರುವುದರಿಂದ ಕಸ್ಟಡಿಗೆ ತೆಗೆದುಕೊಳ್ಳುವುದು ಅನಿವಾರ್ಯ ಎಂದರು.
ಚಿದಂಬರಂ ಅವರು ತುಂಬ ಬುದ್ಧಿವಂತರಾಗಿರುವದುರಿಂದ ತನಿಖೆಗೆ ಸಹಕರಿಸದೆ ಇರುವ ಸರ್ವ ಸಾಮರ್ಥ್ಯ‌ವನ್ನೂ ಹೊಂದಿದ್ದಾರೆ ಎಂದು ತುಷಾರ್‌ ಮೆಹ್ತಾ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಚಿದಂಬರಂ ಪರ ಇನ್ನೊಬ್ಬ ವಕೀಲ ಅಭಿಷೇಕ್‌ ಸಿಂಘ್ವಿ, ಸಿಬಿಐ ಬಯಸಿದ ಉತ್ತರವನ್ನು ಚಿದಂಬರಂ ಅವರು ಕೊಡಲಾಗದು ಎಂದರು.
ಕೋರ್ಟ್‌ ಸೂಚನೆಗಳು
-ಚಿದಂಬರಂ ಘನತೆಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು.
- ನಿಯಮದಂತೆ ನಿಯಮಿತ ವೈದ್ಯಕೀಯ ತಪಾಸಣೆ ಅಗತ್ಯ
-ಕುಟುಂಬಿಕರು, ವಕೀಲರ ಭೇಟಿಗೆ ದಿನಕ್ಕೆ 30 ನಿಮಿಷ ಟೈಮ್‌
ಸಿಬಿಐ ವಾದವೇನು?
ಚಿದಂಬರಂ ಬುದ್ಧಿವಂತರಾದ್ದರಿಂದ ಸಮರ್ಪಕ ಉತ್ತರ ಕೊಡುತ್ತಿಲ್ಲ. ಹಾಗಾಗಿ ತೀವ್ರ ವಿಚಾರಣೆ ಅಗತ್ಯವಿದೆ.
ಚಿದು ವಕೀಲದ ವಾದ
ಪ್ರಕರಣದ ಎಲ್ಲ ಆರೋಪಿಗಳು ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಚಿದಂಬರಂ ಅವರಿಗೂ ಜಾಮೀನು ಕೊಡಿ.
12ರಲ್ಲಿ 6 ಪ್ರಶ್ನೆಗಳಿಗೆ ಉತ್ತರ
ಬುಧವಾರ ರಾತ್ರಿಯೇ ಚಿದಂಬರಂ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದ್ದು, 12 ಪ್ರಶ್ನೆಗಳನ್ನು ಕೇಳಿದೆ. ಅವುಗಳಲ್ಲಿ ಆರು ಪ್ರಶ್ನೆಗಳು ಹಿಂದೆ ಉತ್ತರ ನೀಡಿದ್ದೇ ಆಗಿವೆ ಎಂದು ವಕೀಲ ಕಪಿಲ್‌ ಸಿಬಲ್‌ ಹೇಳಿದರು.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ