ಆ್ಯಪ್ನಗರ

ತಿಹಾರ್‌ ಜೈಲಿನಲ್ಲಿ ಅಧ್ಯಾತ್ಮದ ಮೋರೆ ಹೋದ ಚಿದು

ಶುಕ್ರವಾರ ಶುಕ್ರವಾರ ಬೆಳಗ್ಗೆ ಜೈಲು ಆವರಣದಲ್ಲಿ ಒಂದಷ್ಟು ಹೊತ್ತು ವಾಕ್‌ ಮಾಡಿ, ಚಹಾ ಕುಡಿದರು. ನಂತರದಲ್ಲಿ ಲಘು ಉಪಹಾರ ಸೇವಿಸಿದರು. ಮಾನಸಿಕ ನೆಮ್ಮದಿಗೆ ಒಂದಷ್ಟು ಧರ್ಮಗ್ರಂಥಗಳನ್ನು ಓದಿದರು.

PTI 7 Sep 2019, 5:00 am
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ತಿಹಾರ್‌ ಜೈಲು ಸೇರಿರುವ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಅವರು ಮೊದಲ ದಿನ ನಿದ್ದೆಯಿಲ್ಲದೇ ರಾತ್ರಿ ಕಳೆದಿದ್ದು, ಎರಡನೇ ದಿನ ಮಾನಸಿಕ ನೆಮ್ಮದಿಗಾಗಿ ಅಧ್ಯಾತ್ಮದ ಮೊರೆ ಹೋಗಿದ್ದಾರೆ.
Vijaya Karnataka Web Chidambaram


ಗುರುವಾರ ಸಂಜೆ ತಿಹಾರ್‌ ಜೈಲು ಸೇರಿದ ಚಿದಂಬರಂ ಅವರು ಲಘು ಉಪಹಾರ ಸೇವಿಸಿದರು. ಶುಕ್ರವಾರ ಶುಕ್ರವಾರ ಬೆಳಗ್ಗೆ ಜೈಲು ಆವರಣದಲ್ಲಿ ಒಂದಷ್ಟು ಹೊತ್ತು ವಾಕ್‌ ಮಾಡಿ ಚಹಾ ಕುಡಿದರು. ನಂತರದಲ್ಲಿ ಲಘು ಉಪಹಾರ ಸೇವಿಸಿದರು. ಮಾನಸಿಕ ನೆಮ್ಮದಿಗೆ ಒಂದಷ್ಟು ಧರ್ಮಗ್ರಂಥಗಳನ್ನು ಓದಿದರು. ಅಲ್ಲದೇ ಶ್ಲೋಕಗಳನ್ನೂ ಪಠಿಸಿದರು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೆ ಇದೇ ಪ್ರಕರಣದಲ್ಲಿ ಮಗ ಕಾರ್ತಿ ಚಿದಂಬರಂ 12 ದಿನಗಳ ಕಾಲ ಜೈಲಿನಲ್ಲಿದ್ದ ಕೊಠಡಿ ಸಂಖ್ಯೆ 7ರಲ್ಲಿಯೇ ಚಿದಂಬರಂ ಅವರನ್ನು ಇರಿಸಲಾಗಿದೆ. ಜಾರಿ ನಿರ್ದೇಶನಾಲಯದ ಪ್ರಕರಣದ ಆರೋಪಿಗಳಿಗೆ ತಿಹಾರ್‌ ಜೈಲಿನ ಕೊಠಡಿ ಸಂಖ್ಯೆ 7ಅನ್ನು ಮೀಸಲಿರಿಸಲಾಗಿದೆ. ಇಲ್ಲಿ ಯಾವುದೇ ವಿಶೇಷ ಸವಲತ್ತುಗಳಿಲ್ಲ. ಚಿದಂಬರಂ ಅವರಿಗೆ ವೆಸ್ಟರ್ನ್‌ ಟಾಯ್ಲೆಟ್‌ ಇರುವ ಕೊಠಡಿ ನೀಡಿರುವುದರ ಹೊರತಾಗಿ ಅವರಿಗೆ ಬೇರೆ ವಿಶೇಷ ಸೌಕರ್ಯಗಳನ್ನು ನೀಡಲಾಗಿಲ್ಲ. ಇತರ ವಿಚಾರಣಾಧೀನ ಕೈದಿಗಳಂತೆ ಅವರಿಗೆ ನಿಗದಿತ ಸಮಯದಲ್ಲಿ ಗ್ರಂಥಾಲಯ ಪ್ರವೇಶಕ್ಕೆ ಹಾಗೂ ಟಿವಿ ನೋಡಲು ಅವಕಾಶ ಕಲ್ಪಿಸಲಾಗಿದೆ. ದಿನಪತ್ರಿಕೆಗಳನ್ನು ನೀಡಲಾಗಿದೆ.

ಯುಪಿಎ-1 ಹಾಗೂ ಯುಪಿಎ-2 ಸರಕಾರದಲ್ಲಿ ವಿತ್ತ ಸಚಿವ ಹಾಗೂ ಗೃಹ ಸಚಿವರಾಗಿದ್ದವರು ಚಿದಂಬರಂ. ರಾಷ್ಟ್ರ ರಾಜಕಾರಣದಲ್ಲಿ ಒಂದು ಹಂತದಲ್ಲಿ ಸಂಭವನೀಯ ಪ್ರಧಾನಿ ಅಭ್ಯರ್ಥಿಯಾಗಿಯೂ ಬಿಂಬಿತರಾಗಿದ್ದರು. ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಅವರು ಜೈಲು ಸೇರುವ ಮೂಲಕ ಕೇಂದ್ರದ ಮಾಜಿ ಗೃಹ ಸಚಿವರೊಬ್ಬರು ಕಾರಾಗೃಹ ವಾಸ ಅನುಭವಿಸುತ್ತಿರುವುದು ಇದೇ ಮೊದಲು. ಅಂದಹಾಗೆ, ಬಹುಕೋಟಿ ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಕಾಪ್ಟರ್‌ ಹಗರಣದಲ್ಲಿ ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಅವರ ಸೋದರಳಿಯ ರತುಲ್‌ ಪುರಿ ಕೂಡ ಇದೇ ಜೈಲಿನಲ್ಲಿ ಇದ್ದಾರೆ.

ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ದಾಖಲಾಗಿರುವ ಏರ್ಸೆಲ್‌-ಮ್ಯಾಕ್ಸಿಸ್‌ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಸಿಬಿಐ ಹಾಗೂ ಇ.ಡಿಗಳೆರಡೂ ವಿಚಾರಣೆ ನಡೆಸುತ್ತಿರುವ ಈ ಪ್ರಕರಣದಲ್ಲಿ ಗುರುವಾರವಷ್ಟೇ ಚಿದಂಬರಂ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಶುಕ್ರವಾರ ಸಿಬಿಐ ಹಾಗೂ ಇ.ಡಿ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ , ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ ನಿತೇಶ್‌ ರಾಣಾ ಅವರು 'ಲೆಟರ್ಸ್‌ ರೊಗೆಟರಿ' (ವಿದೇಶಿ ಕೋರ್ಟ್‌ ಮೂಲಕ ಆರೋಪಿ ವಿರುದ್ಧದ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಸಲ್ಲಿಸುವ ಮನವಿ) ಬಂದಿಲ್ಲ. ಹಾಗಾಗಿ ವಿಚಾರಣೆಯನ್ನು ಅಕ್ಟೋಬರ್‌ಗೆ ಮುಂದೂಡಬೇಕು ಎಂದು ನ್ಯಾಯಾಲಯವನ್ನು ಕೋರಿದರು. ತನಿಖಾ ಸಂಸ್ಥೆಗಳು ಒಂದಿಲ್ಲೊಂದು ಕಾರಣ ನೀಡಿ ವಿಚಾರಣೆ ಮುಂದೂಡಲು ಮನವಿ ಮಾಡುತ್ತಿರುವುದನ್ನು ಗಮನಿಸಿದ ನ್ಯಾಯಾಧೀಶ ಒ.ಪಿ.ಸೈನಿ ಅವರು ಅನಿರ್ದಿಷ್ಟಾವಧಿಗೆ ವಿಚಾರಣೆ ಮುಂದೂಡಿದರಲ್ಲದೇ, ತನಿಖೆ ಸಂಪೂರ್ಣವಾಗಿ ಪೂರ್ಣಗೊಂಡ ಬಳಿಕ ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ