ಆ್ಯಪ್ನಗರ

ಪಾಕಿಸ್ತಾನ ಬೆನ್ನಿಗೆ ನಿಂತ ಚೀನಾ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ, ಅದಕ್ಕೆ ಭಾರತದ ಸಮರ್ಥನೆ, ಪಾಕ್‌ನ ಆರೋಪಗಳೆಲ್ಲವನ್ನೂ ಭದ್ರತಾ ಮಂಡಳಿ ಸದಸ್ಯರು ಚರ್ಚಿಸಲಿದ್ದಾರೆ. ನಂತರ ಎರಡೂ ದೇಶಗಳಿಗೆ ಕೆಲವು ಸೂಚನೆಗಳನ್ನು ನೀಡುವ ಸಾಧ್ಯತೆಯಿದೆ.

Agencies 16 Aug 2019, 5:00 am
ನ್ಯೂಯಾರ್ಕ್‌: ಜಮ್ಮು-ಕಾಶ್ಮೀರ ಕುರಿತು ಚರ್ಚಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆ ಶುಕ್ರವಾರ ನಡೆಯುವ ಸಾಧ್ಯತೆ ಇದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ಕ್ರಮ ಖಂಡಿಸಿ ಪಾಕಿಸ್ತಾನವು ಭದ್ರತಾ ಮಂಡಳಿಗೆ ದೂರು ನೀಡಿದ ಬೆನ್ನಲ್ಲೇ ಚೀನಾ ತುರ್ತು ಸಭೆಗೆ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿದ್ದು, ಚೀನಾದ ಒತ್ತಾಯದಂತೆ 'ಮುಚ್ಚಿದ ಕೊಠಡಿ'ಯಲ್ಲಿ ಸಭೆ ನಡೆಯಲಿದೆ ಎಂದು ಕೆಲವು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ, ಅದಕ್ಕೆ ಭಾರತದ ಸಮರ್ಥನೆ, ಪಾಕ್‌ನ ಆರೋಪಗಳೆಲ್ಲವನ್ನೂ ಭದ್ರತಾ ಮಂಡಳಿ ಸದಸ್ಯರು ಚರ್ಚಿಸಲಿದ್ದಾರೆ. ನಂತರ ಎರಡೂ ದೇಶಗಳಿಗೆ ಕೆಲವು ಸೂಚನೆಗಳನ್ನು ನೀಡುವ ಸಾಧ್ಯತೆಯಿದೆ. ಇದಕ್ಕೆ ಪೂರಕವೆಂಬಂತೆ ಭದ್ರತಾ ಮಂಡಳಿ ಅಧ್ಯಕ್ಷೆ ಜೊವನ್ನಾ ವ್ರೊನೆಕಾ ಆ.16ರಂದು ಕಾಶ್ಮೀರ ವಿಚಾರವಾಗಿ ಸಭೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
Vijaya Karnataka Web imran

ಮುಸ್ಲಿಮರಿಂದ ದಂಗೆ: ಕಾಶ್ಮೀರ ವಿಚಾರದಲ್ಲಿ ಎಲ್ಲಾ ದೇಶಗಳೂ ಭಾರತದ ಬೆನ್ನಿಗೆ ನಿಂತಿರುವುದರಿಂದ ಹತಾಶರಾಗಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು, ''370ನೇ ವಿಧಿ ರದ್ದತಿಯ ಭಾರತದ ಕ್ರಮಕ್ಕೆ ಅಂತಾರಾಷ್ಟ್ರೀಯ ಬೆಂಬಲ ವ್ಯಕ್ತವಾದರೆ ಮುಸ್ಲಿಮರು ದಂಗೆ ಏಳಬಹುದು,'' ಎನ್ನುವ ಮೂಲಕ ಮುಸ್ಲಿಮರನ್ನು ಪ್ರಚೋದಿಸುವ ಪ್ರಯತ್ನ ನಡೆಸಿದ್ದಾರೆ. ''ಜಾಗತಿಕ ಬೆಂಬಲದಿಂದಾಗಿ ಮುಸ್ಲಿಮರು ಮೂಲಭೂತ ಸಿದ್ಧಾಂತದಿಂದ ದೂರ ಸರಿಯುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಲಿದೆ. ಒಂದು ವೇಳೆ ಭಾರತ ತನ್ನ ಕಾರ್ಯದಲ್ಲಿ ಯಶಸ್ವಿಯಾದರೆ ಜಾಗತಿಕವಾಗಿ ಮುಸ್ಲಿಮರು ದಂಗೆ ಎದ್ದು ಹಿಂಸಾಚಾರ ನಡೆಯಲಿದೆ,'' ಎಂದಿದ್ದಾರೆ. ಬುಧವಾರ ಭಾರತದ ಜತೆ ಯುದ್ಧಕ್ಕೂ ಸಿದ್ಧ ಎಂದಿದ್ದ ಅವರು, ಈಗ ಜಾಗತಿಕವಾಗಿ ಮುಸ್ಲಿಮರನ್ನು ಪ್ರಚೋದಿಸಲು ಮುಂದಾಗಿದ್ದಾರೆ. ಈ ನಡುವೆ, ಭಾರತದ 73ನೇ ಸ್ವಾತಂತ್ರ್ಯ ದಿನವನ್ನು ಪಾಕಿಸ್ತಾನ 'ಕರಾಳ ದಿನ'ವೆಂದು ಆಚರಿಸುವ ಮೂಲಕ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಗೆ ತನ್ನ ಆಕ್ರೋಶ ಹೊರಹಾಕಿದೆ.
ಅಭಿನಂದನ್‌ ವಿಮಾನ ಉರುಳಿಸಿದವರಿಗೆ ಪುರಸ್ಕಾರ: ಫೆ.27ರಂದು ಭಾರತದ ಮೇಲೆ ದಾಳಿಗಾಗಿ ಎರಗಿ ಬಂದಿದ್ದ ಪಾಕ್‌ನ ಎಫ್‌-16 ಯುದ್ಧವಿಮಾನ ಉರುಳಿಸಿದ್ದಕ್ಕಾಗಿ ವಿಂಗ್‌ ಕಮಾಂಡರ್‌ ಅಭಿನಂದನ್‌ಗೆ ಭಾರತದ ಸರಕಾರ ವೀರ ಚಕ್ರ ಘೋಷಿಸಿರುವ ಕ್ರಮಕ್ಕೆ ಸಡ್ಡು ಹೆಡೆಯುವಂತೆ ಪಾಕಿಸ್ತಾನವು ಅಭಿನಂದನ್‌ ಅವರ ಮಿಗ್‌ ವಿಮಾನ ಉರುಳಿಸಿದ್ದ ಇಬ್ಬರು ಪೈಲಟ್‌ಗಳಿಗೆ ಉನ್ನತ ಮಿಲಿಟರಿ ಪುರಸ್ಕಾರಗಳನ್ನು ಘೋಷಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ