ಆ್ಯಪ್ನಗರ

ಅರುಣಾಚಲದಲ್ಲಿ ಮತ್ತೆ ಚೀನೀ ಅತಿಕ್ರಮಣ: ನದಿಗೆ ಮರದ ಸೇತುವೆ ನಿರ್ಮಿಸಿದ ಪಿಎಲ್‌ಎ

ಪಾಪಿ ಚೀನಾ ತನ್ನ ನರಿ ಬುದ್ಧಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಅರುಣಾಚಲ ಪ್ರದೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯೊಳಗೆ 100 ಕಿ.ಮೀ ದೂರಕ್ಕೆ ನುಸುಳಿ ಬಂದಿರುವ ಪಿಎಲ್‌ ಸೈನಿಕರು ಹೊಳೆಯೊಂದಕ್ಕೆ ಮರದ ಸೇತುವೆ ನಿರ್ಮಿಸಿರುವುದು ಬೆಳಕಿಗೆ ಬಂದಿದೆ.

Times Now 4 Sep 2019, 3:38 pm
ಹೊಸದಿಲ್ಲಿ: ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) 100 ಕಿ.ಮೀಯಷ್ಟು ಒಳಗೆ ಚೀನಾ ಸೇನೆ ಅತಿಕ್ರಮಣ ನಡೆಸಿದೆ ಎಂದು ಅರುಣಾಚಲ ಪ್ರದೇಶದ ಬಿಜೆಪಿ ಅಧ್ಯಕ್ಷ ತಾಪಿರ್‌ ಗಾವೊ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.
Vijaya Karnataka Web PLA intrusion


ಚೀನಾದ ಸೇನೆ ಅರುಣಾಚಲದ ಅಂಜಾವ್ ಜಿಲ್ಲೆಯ ಚಗಲ್‌ಗಾಮ್ ಗ್ರಾಮದಲ್ಲಿ ದೊಮಿರು ನಾಲಾಗೆ ಮರದ ಸೇತುವೆಯೊಂದನ್ನು ನಿರ್ಮಿಸಿದೆ. ಬಿಜೆಪಿ ಕಾರ್ಯಕರ್ತನೊಬ್ಬ ಸೇತುವೆಯ ದೃಶ್ಯಾವಳಿಗಳನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ ಎಂದು ಅರುಣಾಚಲ ಪೂರ್ವದ ಸಂಸದ ಹೇಳಿದರು.

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆ ಅಕ್ರಮವಾಗಿ ಒಳನುಸುಳುವಂತಹ ನಡೆಸಬಹುದಾದ ಹಲವು ಸ್ಥಳಗಳಿವೆ ಎಂದು ಅವರು ತಿಳಿಸಿದರು.

2018ರ ಅಕ್ಟೋಬರ್‌ನಲ್ಲಿ ಚೀನಾ ಸೇನೆ ಅದೇ ಸ್ಥಳದಲ್ಲಿ ಒಳನುಸುಳಿ ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿತ್ತು. ಸ್ಥಳೀಯ ಬೇಟೆಗಾರರು ಇದನ್ನು ಪತ್ತೆಹಚ್ಚಿ ಬಹಿರಂಗಪಡಿಸಿದ್ದರು.

ರಕ್ಷಣಾ ಸಚಿವಾಲಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚೀನೀ ಸೇನೆ ಇನ್ನೂ ಆ ಸ್ಥಳದಲ್ಲೇ ಇದೆಯೇ ಅಥವಾ ತೆರವು ಮಾಡಿದೆಯೇ ಎಂಬುದೂ ಸ್ಪಷ್ಟವಾಗಿಲ್ಲ.

ಚೀನೀ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಈ ವರ್ಷ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬುದು ಗಮನಾರ್ಹ ಸಂಗತಿ. ಚೀನಾ ಜತೆಗಿನ ವಾಸ್ತವಿಕ ನಿಯಂತ್ರಣ ರೇಖೆ ಜಮ್ಮು ಮತ್ತು ಕಾಶ್ಮೀರದಿಂದ ತೊಡಗಿ ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಕಳೆದ ವರ್ಷ ಅರುಣಾಚಲ ಪ್ರದೇಶದ ಮೇಲಿನ ದಿಬಂಗ್ ಕಣಿವೆ ಜಿಲ್ಲೆಯಲ್ಲಿ ಅಕ್ರಮವಾಗಿ ನುಸುಳಿತ್ತು. ಬುಡಕಟ್ಟು ಸಮುದಾಯದ ಗ್ರಾಮಸ್ಥರ ಗುಂಪೊಂದು 11 ಮಂದಿ ಚೀನೀ ಸೈನಿಕರನ್ನು ಮೇಲಿನ ದಿಬಂಗ್‌ನಲ್ಲಿ ಪತ್ತೆ ಮಾಡಿದ್ದರು. ಅವರು ಕೆಲವು ಚಿತ್ರಗಳನ್ನೂ ತೆಗೆದಿದ್ದರು ಎನ್ನಲಾಗಿದೆ. ಚೀನೀ ಸೈನಿಕರ ಉಪಸ್ಥಿತಿ ಬಗ್ಗೆ ಈ ಬುಡಕಟ್ಟು ಜನರೇ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಿದ್ದರು.

2017ರಲ್ಲಿ ಭೂತಾನ್ ಮತ್ತು ಭಾರತ ಗಡಿಯಲ್ಲಿರುವ ಡೋಕ್ಲಾಂನಲ್ಲಿ ಚೀನಾ ರಸ್ತೆ ನಿರ್ಮಿಸಲು ಹೊರಟಾಗ ಭಾರತ ಅದನ್ನು ತಡೆದಿತ್ತು. ಈ ಬಿಕ್ಕಟ್ಟು ಚೀನೀ ಸೈನಿಕರು ಹಿಂದೆ ಸರಿದ ಬಳಿಕ 73 ದಿನಗಳ ನಂತರ ಕೊನೆಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ