ಆ್ಯಪ್ನಗರ

'ಆಂತರಿಕ ಯುದ್ಧ'ದ ಹೇಳಿಕೆ: ಮಮತಾಗೆ ಬಿಜೆಪಿ, ಕಾಂಗ್ರೆಸ್‌ ತರಾಟೆ

ರಾಷ್ಟ್ರೀಯ ಪೌರತ್ವ ದಾಖಲೆ (ಎನ್‌ಆರ್‌ಸಿ) ಅಂತಿಮ ಕರಡು ಪ್ರಕಟಣೆ ಹಿನ್ನೆಲೆಯಲ್ಲಿ 'ರಕ್ತಪಾತ ಮತ್ತು ಆಂತರಿಕ ಯುದ್ಧ'ದ ಹೇಳಿಕೆ ನೀಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಸ್ಸಾಂ ಕಾಂಗ್ರೆಸ್‌ ಅಧ್ಯಕ್ಷರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

TIMESOFINDIA.COM 1 Aug 2018, 3:00 pm
ಹೊಸದಿಲ್ಲಿ: ರಾಷ್ಟ್ರೀಯ ಪೌರತ್ವ ದಾಖಲೆ (ಎನ್‌ಆರ್‌ಸಿ) ಅಂತಿಮ ಕರಡು ಪ್ರಕಟಣೆ ಹಿನ್ನೆಲೆಯಲ್ಲಿ 'ರಕ್ತಪಾತ ಮತ್ತು ಆಂತರಿಕ ಯುದ್ಧ'ದ ಹೇಳಿಕೆ ನೀಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಸ್ಸಾಂ ಕಾಂಗ್ರೆಸ್‌ ಅಧ್ಯಕ್ಷರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web Mamata Banerjee


ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅವರು 'ಆಂತರಿಕ ಯುದ್ಧ'ದಂತಹ ಪ್ರಚೋದನಕಾರಿ ಹೇಳಿಕೆ ನೀಡಬಾರದು. ಅವರ ಹೇಳಿಕೆಯನ್ನು ಖಂಡಿಸುತ್ತೇವೆ' ಎಂದು ಅಸ್ಸಾಂ ಕಾಂಗ್ರೆಸ್‌ ಮುಖ್ಯಸ್ಥ ರಿಪುನ್ ಬೋರಾ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಅಸ್ಸಾಂ 'ಸಂಪೂರ್ಣ ಶಾಂತಿಯುತವಾಗಿದ್ದು' ಮಮತಾ ಹೇಳಿಕೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅವರು ತಿಳಿಸಿದರು.

ಅಸ್ಸಾಂನಲ್ಲಿ 40 ಲಕ್ಷ ಮಂದಿಗೆ ಭಾರತೀಯ ಪೌರತ್ವ ನಿರಾಕರಿಸಿದ ಎನ್‌ಆರ್‌ಸಿ ಕರಡು ಪಟ್ಟಿಯ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದ್ದ ಮಮತಾ ಬ್ಯಾನರ್ಜಿ, ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದರು. ಪಶ್ಚಿಮ ಬಂಗಾಳದಲ್ಲಿ ಇದೇ ರೀತಿ ಎನ್‌ಆರ್‌ಸಿ ಚಟುವಟಿಕೆಯನ್ನು ಪುನರಾವರ್ತಿಸಲು ಹೊರಟರೆ ಪರಿಣಾಮ ನೆಟ್ಟಗಿರದು ಎಂದು ಬೆದರಿಕೆಯನ್ನೂ ಹಾಕಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು, ಬ್ಯಾನರ್ಜಿ ಹೇಳಿಕೆಯನ್ನು ಬಲವಾಗಿ ಖಂಡಿಸಿದ್ದರು.

'ಕಾನೂನು ಮತ್ತ ಸುವ್ಯವಸ್ಥೆ ಪಾಲನೆ ಮುಖ್ಯಮಂತ್ರಿಯಾಗಿ ನೀವು ಮಾಡಬೇಕಾದ ಕರ್ತವ್ಯ. ಅದನ್ನು ಪಾಲಿಸುವುದು ಬಿಟ್ಟು ಆಂತರಿಕ ದಂಗೆಯಂತಹ ಹೇಳಿಕೆ ನೀಡುವುದು ಖಂಡನೀಯ' ಎಂದು ರಿಜಿಜು ಹೇಳಿದ್ದರು.

ಕೇಂದ್ರ ಸಚಿವರ ಹೇಳಿಕೆಗೆ ಬೆಂಬಲವೆಂಬಂತೆ ಅಸ್ಸಾಂ ಕಾಂಗ್ರೆಸ್‌ ಅಧ್ಯಕ್ಷರೂ ಮಮತಾ ಹೇಳಿಕೆಯನ್ನು ಖಂಡಿಸಿದ್ದಾರೆ.

ಇದಕ್ಕೆ ಮೊದಲು, ಎನ್‌ಆರ್‌ಸಿ ಕುರಿತ ಪ್ರಚೋದನಕಾರಿ ಹೇಳಿಕೆ ನೀಡಿದ ಮಮತಾ ವಿರುದ್ಧ ಬಿಜೆಪಿ ಯುವ ಮೋರ್ಚಾ ಎಫ್‌ಐಆರ್‌ ದಾಖಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ