ಆ್ಯಪ್ನಗರ

ಸಹಪಾಠಿಗೆ ಜೀವ ಬೆದರಿಕೆಯೊಡ್ಡಿ 3 ಲಕ್ಷ ದೋಚಿದ 9ನೇ ತರಗತಿಯ 2 ವಿದ್ಯಾರ್ಥಿಗಳು

ಬಾಲಪರಾಧ ಪ್ರಕರಣಗಳಲ್ಲಿ ಎಗ್ಗಿಲ್ಲದೇ ಏರಿಕೆಯಾಗುತ್ತಿದ್ದು ಅದಕ್ಕೊಂದು ತಾಜಾ ನಿದರ್ಶನ ಈ ಘಟನೆ.

TIMESOFINDIA.COM 27 Jul 2019, 1:40 pm
ಮುಂಬಯಿ: 9 ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಅಪ್ರಾಪ್ತ ವಿದ್ಯಾರ್ಥಗಳು ಮತ್ತೊಬ್ಬ ಗೆಳೆಯನ ಸಹಾಯದೊಂದಿಗೆ ತಮ್ಮದೇ ಸಹಪಾಠಿಯಿಂದ ಬರೋಬ್ಬರಿ 3 ಲಕ್ಷ ರೂಪಾಯಿ ಮೌಲ್ಯದ ಹಣ ಮತ್ತು ಚಿನ್ನಭರಣ ದೋಚಿದ ಬೆಚ್ಚಿ ಬೀಳಿಸುವ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ.
Vijaya Karnataka Web Police 1


ಇಬ್ಬರು ಆರೋಪಿ ವಿದ್ಯಾರ್ಥಿಗಳಲ್ಲಿ ಒಬ್ಬನ ಸೋದರ ಸಂಬಂಧಿ ಕೂಡ ಈ ಕೃತ್ಯದಲ್ಲಿ ಪಾಲುದಾರನಾಗಿದ್ದಾನೆ. ಆತನಿಗೆ ಗೂಂಡಾಗಳ ಸ್ನೇಹವಿದ್ದು, ಅವರು ಸದಾ ತಲ್ವಾರ್ ಮತ್ತು ಚಾಕುವನ್ನಿಟ್ಟುಕೊಂಡಿರುತ್ತಾರೆ ಎಂದು ಪೀಡಿತ ಬಾಲಕನಿಗೆ ಕೊಲೆ ಬೆದರಿಕೆ ಒಡ್ಡಿ ಆತನಿಂದ ಹಣ ಮತ್ತು ಚಿನ್ನಾಭರಣವನ್ನು ದೋಚಲಾಗುತ್ತಿತ್ತು.

ಪೀಡಿತ ಬಾಲಕ ಇದ್ದಕ್ಕಿದ್ದಂತೆ ತೂಕ ಇಳಿಕೆಗೊಳಗಾಗಿದ್ದಕ್ಕೆ ಚಿಂತಿತಗೊಂಡ ತಾಯಿ ಭಾನುವಾರ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಳು. ಆ ಸಂದರ್ಭದಲ್ಲಿ ಆತನಿಗೆ ಫೋನ್ ಕರೆ ಬಂದಿದ್ದು ತಾಯಿ ಅದನ್ನು ಸ್ವೀಕರಿಸಿದ್ದಾಳೆ. ಕರೆ ಮಾಡಿದವರು ಕೆಲಸ ಆಯಿತೇ ಎಂದು ಹೇಳಿದಾಗ ನೀನ್ಯಾರು ಎಂದಾಕೆ ಪ್ರಶ್ನಿಸಿದ್ದಾಳೆ. ಕರೆ ಮಾಡಿದಾತ (ಆರೋಪಿಗಳಲ್ಲೊಬ್ಬ) ನಿನ್ನ ಮಗನ ಗೆಳೆಯ ಎಂದು ಪರಿಚಯಿಸಿಕೊಂಡಿದ್ದಾನೆ.

ಈ ಅನುಮಾನಾಸ್ಪದ ಫೋನ್ ಕರೆ ಬಗ್ಗೆ ಕೇಳಿದಾಗ ಬಾಲಕ ಏನೋ ಕಾರಣ ನೀಡಿ ಮಾತನ್ನು ಬದಲಿಸಿದ್ದ. ಆದರೆ ಮರು ದಿನ ಅವರ ಮನೆಯಿಂದ ಹಣ ನಾಪತ್ತೆಯಾಗಿರುವುದು ಬೆಳಕಿಗೆ ಬಂತು. ಸಾರಿಗೆ ವ್ಯವಹಾರ ನಡೆಸುತ್ತಿದ್ದ ತಂದೆ ಏಕಾಏಕಿ ಮನೆಯಿಂದ ಹಣ ನಾಪತ್ತೆಯಾಗಿದ್ದಕ್ಕೆ ಮಗನಲ್ಲಿ ನೀನೇನಾದರೂ ತೆಗೆದುಕೊಂಡೆಯಾ ಕೇಳಿದ್ದಕ್ಕಾತ ತಿಂಡಿ ಕೊಂಡು ತಿಂದೆ ಎಂದು ಹೇಳಿದ. ಆದರೆ ಆತ ಹೇಳಿದ ಅಂಗಡಿಗೆ ಕರೆದುಕೊಂಡು ಹೋಗಿ ಕೇಳಲಾಗಿ ಅಂಗಡಿಯಾತ ಅದನ್ನು ನಿರಾಕರಿಸಿದ. ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದಾಗ ಆತ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಮಗನೊಂದಿಗೆ ಶಾಲೆಗೆ ಹೋದ ತಂದೆ ಪ್ರಾಚಾರ್ಯರಲ್ಲಿ ಎಲ್ಲವನ್ನು ಹೇಳಿದ್ದಾರೆ. ಆರೋಪಿಗಳಲ್ಲೊಬ್ಬನ ಪೋಷಕರನ್ನು ಕರೆದು ಈ ಬಗ್ಗೆ ವಿಚಾರಣೆ ನಡೆಸಿದಾಗ ಅವರು ಸಹ ಬೆದರಿಕೆಯನ್ನೊಡ್ಡಿದ್ದಾರೆ. ಬಳಿಕ ಪೀಡಿತನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನನ್ನ ಮಗನನ್ನು ಮತ್ತು ಕುಟುಂಬವನ್ನು ಸಾಯಿಸುವ ಬೆದರಿಕೆ ಒಡ್ಡಿ ಹಣ ದೋಚಲಾಗುತ್ತಿತ್ತು, ಎಂದು ಪೀಡಿತನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವೈದ್ಯಕೀಯ ವೆಚ್ಚ, ವಿಮೆ ಮತ್ತು ಉಳಿತಾಯದ ಉದ್ದೇಶಕ್ಕೆ ಮನೆಯಲ್ಲಿಟ್ಟಿದ್ದ ಹಣವನ್ನೆಲ್ಲ ಮಗ ಆರೋಪಿಗಳಿಗೆ ನೀಡಿದ್ದಾನೆ ಎಂದವರು ಹೇಳಿದ್ದಾರೆ.

ಅಪ್ರಾಪ್ತ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ