ಆ್ಯಪ್ನಗರ

ರಾಜಸ್ಥಾನ ಸಿಎಂ ಗಾದಿಗಾಗಿ ಬೀದಿ ರಂಪ: ಪೈಲಟ್ ಬೆಂಬಲಿಗರ ದಾಂಧಲೆ

ಅಂತಿಮಗೊಳ್ಳದ ರಾಜಸ್ಥಾನ ಮುಖ್ಯಮಂತ್ರಿ: ಪೈಲಟ್‌ ಬೆಂಬಲಿಗರ ದಾಂಧಲೆ; ರಾಹುಲ್‌-ಸೋನಿಯಾಗೆ ಸವಾಲಾದ ಜೂನಿಯರ್-ಸೀನಿಯರ್‌ ಜಗ್ಗಾಟ; ಮಧ್ಯ ಪ್ರದೇಶಕ್ಕೆ ಕಮಲ್ ನಾಥ್‌ ಮುಖ್ಯಮಂತ್ರಿ: ತಡರಾತ್ರಿ ಘೋಷಣೆ

Vijaya Karnataka 14 Dec 2018, 7:26 am
ಹೊಸದಿಲ್ಲಿ : ಮೂರು ರಾಜ್ಯಗಳನ್ನು ಗೆದ್ದ ಕಾಂಗ್ರೆಸ್‌ ಆ ರಾಜ್ಯಗಳಿಗೆ ಮುಖ್ಯಮಂತ್ರಿಗಳನ್ನು ನೇಮಿಸುವಲ್ಲಿ ಭಾರಿ ಸವಾಲು ಎದುರಿಸುತ್ತಿದೆ. ಹಲವು ಸುತ್ತಿನ ಚರ್ಚೆಯ ಬಳಿಕ ಗುರುವಾರ ತಡರಾತ್ರಿ ಮಧ್ಯಪ್ರದೇಶ ಸಿಎಂ ಆಗಿ ಕಮಲ್‌ ನಾಥ್‌ ಅವರನ್ನು ಘೋಷಿಸಲಾಯಿತು.
Vijaya Karnataka Web 2-2-13122-PTI12_13_2018_000182B


ಆದರೆ, ರಾಜಸ್ಥಾನದ ಕಗ್ಗಂಟು ಮುಂದುವರಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಳಂಬವಾಗುತ್ತಿರುವುದಕ್ಕೆ ಆಕ್ರೋಶಿತರಾದ ಪದಾಕಾಂಕ್ಷಿ ಸಚಿನ್‌ ಪೈಲಟ್‌ ಬೆಂಬಲಿಗರು ಹಿಂಸಾಚಾರಕ್ಕೆ ಇಳಿದರು. ಛತ್ತೀಸ್‌ಗಢದಲ್ಲಿ ಮೂವರು ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಶುಕ್ರವಾರ ಅಂತಿಮ ಆಯ್ಕೆ ನಡೆಯಲಿದೆ.
ಬುಧವಾರ ಜೈಪುರ ಮತ್ತು ಭೋಪಾಲ್‌ನಲ್ಲಿ ಧೂಳೆಬ್ಬಿಸಿದ ಸಿಎಂ ಪಟ್ಟದ ಚರ್ಚೆ ಗುರುವಾರ ರಾಜಧಾನಿಯಲ್ಲಿ ತುರುಸಿನ ರಾಜಕೀಯ ಚಟುವಟಿಕೆಗೆ ಕಾರಣವಾಯಿತು.

ರಾಹುಲ್‌ ಗಾಂಧಿ ಅವರು ರಾಜಸ್ಥಾನದ ಸಿಎಂ ಹುದ್ದೆ ಆಕಾಂಕ್ಷಿಗಳಾದ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌, ಮಧ್ಯಪ್ರದೇಶದ ಆಕಾಂಕ್ಷಿಗಳಾದ ಕಮಲನಾಥ್‌ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಪ್ರತ್ಯೇಕವಾಗಿ ಹಲವು ಸುತ್ತಿನ ಚರ್ಚೆ ನಡೆಸಿದರು. ಜತೆಗೆ, ತಾಯಿ ಸೋನಿಯಾ ಗಾಂಧಿ ಮತ್ತು ಸೋದರಿ ಪ್ರಿಯಾಂಕಾ ವಾದ್ರಾ ಅವರ ನೆರವನ್ನೂ ಪಡೆದರು. ಅಂತಿಮವಾಗಿ ಮಧ್ಯಪ್ರದೇಶಕ್ಕೆ ಕಮಲ್‌ನಾಥ್‌ ಅವರು ಸಿಎಂ ಎಂದು ಭೋಪಾಲ್‌ನಲ್ಲಿ ತಡರಾತ್ರಿ ನಡೆದ ಶಾಸಕರ ಸಭೆಯಲ್ಲಿ ಘೋಷಿಸಲಾಯಿತು.

ಪೈಲಟ್‌ ಬೆಂಬಲಿಗರಿಂದ ರಸ್ತೆ ತಡೆ, ಬೆಂಕಿ

ಸಚಿನ್‌ ಪೈಲಟ್‌ ಅವರನ್ನೇ ಸಿಎಂ ಆಗಿ ನೇಮಿಸಬೇಕೆಂದು ಆಗ್ರಹಿಸಿ ಅವರ ಬೆಂಬಲಿಗರು ಗುರುವಾರ ಸಂಜೆ ದೌಸಾ, ಅಜ್ಮೇರ್‌ ಮತ್ತು ಕೌರಾಲಿ ಜಿಲ್ಲೆಗಳಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು. ಪೈಲಟ್‌ ಅವರು ಸೇರಿರುವ ಗುಜ್ಜಾರ್‌ ಸಮುದಾಯದ ಯುವಕರು ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಜೈಪುರ-ಅಜ್ಮೇರ್‌ ಹೆದ್ದಾರಿಯಲ್ಲೂ ರಸ್ತೆ ತಡೆ ನಡೆಸಲಾಯಿತು. ಕೆಲವೊಂದು ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ.
ಶಾಂತಿಗೆ ಮನವಿ: ಈ ನಡುವೆ, ಕಾರ್ಯಕರ್ತರು ಶಾಂತಿ ಕಾಪಾಡಬೇಕೆಂದು ಸಚಿನ್‌ ಪೈಲಟ್‌ ಮತ್ತು ಅಶೋಕ್‌ ಗೆಹ್ಲೋಟ್‌ ಇಬ್ಬರೂ ಮನವಿ ಮಾಡಿದರು.

ರಾಜಸ್ಥಾನಕ್ಕೆ ಗೆಹ್ಲೋಟ್‌?

ಕಾಂಗ್ರೆಸ್‌ಗೆ ರಾಜಸ್ಥಾನದ ಸಿಎಂ ಆಯ್ಕೆ ದೊಡ್ಡ ಸವಾಲಾಗಿದೆ. ಹೈಕಮಾಂಡ್‌ ಅಶೋಕ್‌ ಗೆಹ್ಲೋಟ್‌ ಪರವಾಗಿದ್ದರೂ ಸಚಿನ್‌ ಪೈಲಟ್‌ ಮನವೊಲಿಕೆ ಕಷ್ಟವಾಗಿದೆ. ನಾಲ್ಕು ವರ್ಷದ ಹಿಂದೆ ಸಂಪೂರ್ಣ ಸೋತು ಸುಣ್ಣವಾದ ಪಕ್ಷಕ್ಕೆ ಜೀವ ತುಂಬಿದ್ದು ತಾವು ಎಂಬುದು ಅವರ ವಾದ. ರಾಜಸ್ಥಾನ ಬಿಕ್ಕಟ್ಟು ಎಷ್ಟು ಗಾಢವಾಗಿದೆ ಎಂದರೆ ಜೈಪುರಕ್ಕೆ ಹೊರಟಿದ್ದ ಅಶೋಕ್‌ ಗೆಹ್ಲೋಟ್‌ ಅವರನ್ನು ಮೂರು ಮೂರು ಬಾರಿ ವಿಮಾನ ನಿಲ್ದಾಣದಿಂದ ಮರಳಿ ಕರೆಸಲಾಯಿತು! ಅಂತಿಮವಾಗಿ ಮುಖ್ಯಮಂತ್ರಿ ಹುದ್ದೆ ಅಶೋಕ್‌ ಗೆಹ್ಲೋಟ್‌ ಅವರಿಗೆ ಒಲಿಯುವ ಸಾಧ್ಯತೆ ಹೆಚ್ಚಿದೆ.

ಕಾಂಗ್ರೆಸ್‌ ಯೋಚನೆ ಏನು?

* ಮೂರು ರಾಜ್ಯ ಗೆದ್ದರೂ ಲೋಕಸಭೆ ಚುನಾವಣೆಯೇ ಕಾಂಗ್ರೆಸ್‌ನ ಗುರಿ.
* ಸಿಎಂ ಆಯ್ಕೆ ಬಂಡಾಯಕ್ಕೆ ದಾರಿಯಾಗದಂತೆ ನೋಡಿಕೊಳ್ಳುವ ಯತ್ನ.
* ಹಿರಿಯರಿಗೆ ಸಿಎಂ ಪಟ್ಟ, ಕಿರಿಯರಿಗೆ ಲೋಕಸಭೆ ಉಸ್ತುವಾರಿ ನೀಡಲು ಚಿಂತನೆ
* ನಾಯಕತ್ವ ಗೊಂದಲದಿಂದ ರಾಜಕೀಯ ಅಸ್ಥಿರತೆ ಕಾಡದಂತೆ ಕಾಯುವ ತಂತ್ರ

ತಾಳ್ಮೆ ಮಂತ್ರ ಬೋಧಿಸಿದ ರಾಹುಲ್‌

ಮಧ್ಯಪ್ರದೇಶ ಸಿಎಂ ಪದಾಕಾಂಕ್ಷಿಗಳಾದ ಸಿಂಧಿಯಾ ಮತ್ತು ಕಮಲನಾಥ್‌ ಅವರನ್ನು ಕೈಸೆರೆ ಮಾಡಿಕೊಂಡ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ರಾಹುಲ್‌ ಗಾಂಧಿ, 'ತಾಳ್ಮೆ ಮತ್ತು ಕಾಲ ಎರಡು ಶಕ್ತಿಶಾಲಿ ಆಯುಧಗಳು' ಎಂಬ ಲಿಯೊ ಟಾಲ್‌ಸ್ಟಾಯ್‌ ವಾಕ್ಯವನ್ನು ಉಲ್ಲೇಖಿಸಿದ್ದಾರೆ. ಇಬ್ಬರೂ ನಾಯಕರು ನಗುತ್ತಿರುವುದು ಕದನ ಅಂತ್ಯಗೊಂಡಿದ್ದನ್ನು ಸೂಚಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ