ಆ್ಯಪ್ನಗರ

ಧಾರ್ಮಿಕ ಸ್ವಾತಂತ್ರ್ಯ ವರದಿ: ಅಮೆರಿಕಕ್ಕೆ ಭಾರತ ತಪರಾಕಿ

ಭಾರತಕ್ಕೆ ತನ್ನ ಜಾತ್ಯತೀತ ವಿಶ್ವಾಸಾರ್ಹತೆ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವೆಂಬ ಸ್ಥಾನಮಾನ, ಬಹುತ್ವದ ಬಗ್ಗೆ ಹೆಮ್ಮೆ ಇದೆ. ವಿದೇಶಿ ರಾಷ್ಟ್ರಕ್ಕೆ ನಮ್ಮ ದೇಶದ ಜನರ ಹಕ್ಕುಗಳ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

PTI 24 Jun 2019, 5:30 am
ಹೊಸದಿಲ್ಲಿ: ದೇಶದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆ ನೀಡಿರುವ ವರದಿಯನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ. ಜತೆಗೆ 'ನಮ್ಮ ನಾಗರಿಕರ ಹಕ್ಕುಗಳ ಬಗ್ಗೆ ವಿದೇಶಿ ಸರಕಾರಕ್ಕೆ ಮಾತನಾಡುವ ಹಕ್ಕಿಲ್ಲ ,''ಎಂದು ಅಮೆರಿಕಕ್ಕೆ ತಪರಾಕಿ ನೀಡಿದೆ.
Vijaya Karnataka Web raveesh


ಅಮೆರಿಕದ ವಿದೇಶಾಂಗ ಇಲಾಖೆಯು ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಧಾರ್ಮಿಕ ನಂಬಿಕೆ ಮತ್ತು ಪದ್ಧತಿಗಳನ್ನು, ಮಾನವ ಹಕ್ಕುಗಳನ್ನು ಅಲ್ಲಿನ ಸರಕಾರಗಳು ಹೇಗೆ ಗೌರವಿಸುತ್ತವೆ ಎಂಬುದರ ಬಗ್ಗೆ ವಾರ್ಷಿಕ ವರದಿಯನ್ನು ಸಿದ್ಧಪಡಿಸುತ್ತದೆ. ವಿದೇಶಾಂಗ ಸಚಿವ ಮೈಕ್‌ ಪಾಂಪಿಯೊ ಅವರು ಕಳೆದ ವಾರ ಅಮೆರಿಕದ ಕಾಂಗ್ರೆಸ್‌ಗೆ ಈ ವರದಿಯನ್ನು ಸಲ್ಲಿಸಿದ್ದು, ಬಳಿಕ ಸಚಿವಾಲಯದ ವೆಬ್‌ಸೈಟ್‌ನಲ್ಲೂ ಪ್ರಕಟವಾಗಿದೆ.

ಈ ವರದಿಯನ್ನು ತೀವ್ರವಾಗಿ ಆಕ್ಷೇಪಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಅವರು, ''ಭಾರತಕ್ಕೆ ತನ್ನ ಜಾತ್ಯತೀತ ವಿಶ್ವಾಸಾರ್ಹತೆ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವೆಂಬ ಸ್ಥಾನಮಾನ, ಬಹುತ್ವದ ಬಗ್ಗೆ ಹೆಮ್ಮೆ ಇದೆ. ಸಹಿಷ್ಣುತೆ ಮತ್ತು ಎಲ್ಲರನ್ನೂ ಒಳಗೊಳಿಸುವ ಬದ್ಧತೆ ಇದೆ. ವಿದೇಶಿ ರಾಷ್ಟ್ರಕ್ಕೆ ನಮ್ಮ ದೇಶದ ಜನರ ಹಕ್ಕುಗಳ ಬಗ್ಗೆ ಮಾತನಾಡುವ ಹಕ್ಕಿಲ್ಲ'' ಎಂದು ಹೇಳಿದ್ದಾರೆ.

ಬಿಜೆಪಿಯಿಂದಲೂ ವಿರೋಧ
ವರದಿ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿ ಇದನ್ನು ತೀವ್ರವಾಗಿ ಆಕ್ಷೇಪಿಸಿತ್ತು. ಇದೊಂದು ದುರುದ್ದೇಶಪೂರಿತ ವರದಿ ಎಂದು ಹೇಳಿರುವ ಬಿಜೆಪಿ, ನರೇಂದ್ರ ಮೋದಿ ಸರಕಾರ ಮಹಾ ಬಹುಮತದೊಂದಿಗೆ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವುದನ್ನು ಸಹಿಸದ ಶಕ್ತಿಗಳ ಹುನ್ನಾರ ಎಂದಿದೆ.

''ದೇಶದಲ್ಲಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದಾಳಿಗಳ ಹಿಂದೆ ಒಂದು ಯೋಜಿತ ಸಂಚಿದೆ ಎನ್ನುವ ವರದಿಯ ಮೂಲ ಊಹೆಯೇ ತಪ್ಪಾಗಿದೆ. ಭಾರತದಲ್ಲಿ ನಡೆದಿರುವ ಇಂಥ ಹಲ್ಲೆಗಳ ಹಿಂದೆ ಸ್ಥಳೀಯ ವಿವಾದಗಳು, ಕ್ರಿಮಿನಲ್‌ ಗೂಂಡಾಗಳ ಕೃತ್ಯಗಳಿರುವುದು ಕಂಡುಬಂದಿದೆ'' ಎಂದು ಬಿಜೆಪಿ ಮಾಧ್ಯಮ ಮುಖ್ಯಸ್ಥ, ಸಂಸದ ಅನಿಲ್‌ ಬಲೂನಿ ಹೇಳಿದ್ದಾರೆ.

''ದೇಶದ ನ್ಯಾಯವ್ಯವಸ್ಥೆಯೂ ಸೇರಿ ಆಳವಾಗಿ ಬೇರೂರಿರುವ ಪ್ರಜಾಸತ್ತಾತ್ಮಕ ಸಂಸ್ಥೆಗಳು ಅತ್ಯಂತ ಸ್ವತಂತ್ರ ಮತ್ತು ಸಕ್ರಿಯವಾಗಿವೆ. ಆದರೆ, ಈ ಅಂಶವನ್ನೇ ವರದಿ ನಿರ್ಲಕ್ಷಿಸಿದೆ,'' ಎಂದು ಬಿಜೆಪಿ ಆಕ್ಷೇಪಿಸಿದೆ.

ವರದಿಯ ಪ್ರಮುಖಾಂಶ
ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯ, ಅದರಲ್ಲೂ ಮುಸ್ಲಿಮರ ಮೇಲೆ ಹಿಂದೂ ಉಗ್ರವಾದಿ ಸಂಘಟನೆಗಳು ನಡೆಸುವ ಹಿಂಸಾತ್ಮಕ ಸಮೂಹ ದಾಳಿಗಳು 2018ರಲ್ಲೂ ಮುಂದುವರಿದಿವೆ. ಮಾಂಸಕ್ಕಾಗಿ ದನಗಳನ್ನು ಮಾರಾಟ ಮಾಡಿದ ಇಲ್ಲವೇ ಕೊಂದ ಕಾರಣಕ್ಕಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಭಾರತದ ತಿರುಗೇಟು
- ಸಂವಿಧಾನದ ಸುರಕ್ಷತಾಕವಚ ಹೊಂದಿರುವ ನಮ್ಮ ನಾಗರಿಕರ ಹಕ್ಕುಗಳ ಬಗ್ಗೆ ಮಾತನಾಡುವುದಕ್ಕೆ ವಿದೇಶಿ ಸರಕಾರಕ್ಕೆ ಯಾವುದೇ ಹಕ್ಕಿಲ್ಲ.
- ಭಾರತದ್ದು ಸ್ಪಂದನಶೀಲ ಪ್ರಜಾಪ್ರಭುತ್ವವಾಗಿದ್ದು, ಇಲ್ಲಿನ ಸಂವಿಧಾನವು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ