ಆ್ಯಪ್ನಗರ

ದೋಸ್ತಿ ಫೈಟ್‌ಗೆ ನಿರ್ಧಾರ

ಆಡಳಿತಾರೂಢ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರಿಯುವುದೇ ಇಲ್ಲವೇ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಏಕಾಂಗಿ ಸ್ಪರ್ಧೆ ಮಾಡುವುದನ್ನು ಎರಡೂ ಪಕ್ಷಗಳು ಬಹಿರಂಗವಾಗಿ ಹೇಳಿದ್ದರೂ, ಬಿಜೆಪಿ ಪ್ರಾಬಲ್ಯವಿರುವ ಕಡೆ ಫ್ರೆಂಡ್ಲಿ ಫೈಟ್‌ ನಡೆಸುವ ತೀರ್ಮಾನಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಮನಸ್ಸು ಮಾಡಿವೆ.

Vijaya Karnataka 6 Aug 2018, 9:34 am
ಬೆಂಗಳೂರು: ಆಡಳಿತಾರೂಢ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರಿಯುವುದೇ ಇಲ್ಲವೇ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಏಕಾಂಗಿ ಸ್ಪರ್ಧೆ ಮಾಡುವುದನ್ನು ಎರಡೂ ಪಕ್ಷಗಳು ಬಹಿರಂಗವಾಗಿ ಹೇಳಿದ್ದರೂ, ಬಿಜೆಪಿ ಪ್ರಾಬಲ್ಯವಿರುವ ಕಡೆ ಫ್ರೆಂಡ್ಲಿ ಫೈಟ್‌ ನಡೆಸುವ ತೀರ್ಮಾನಕ್ಕೆ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಮನಸ್ಸು ಮಾಡಿವೆ.
Vijaya Karnataka Web jds congress


ಮೈತ್ರಿ ಸರಕಾರ ರಚಿಸುವಾಗ ಆಗಿರುವ ಒಪ್ಪಂದದಂತೆ ಲೋಕಸಭೆ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆಗೆ ಮಾತುಕತೆ ನಡೆಯುತ್ತಿದೆ, ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಗೆ ಇಲ್ಲ ಎಂದು ಉಭಯ ಪಕ್ಷಗಳ ನಾಯಕರೂ ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ, ಬಿಜೆಪಿಯನ್ನು ಕಟ್ಟಿ ಹಾಕಲು ಒಳ ಒಪ್ಪಂದ ನಡೆದಿದೆ.

ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ ನೇರ ಎದುರಾಳಿಯಾಗಿದೆ. ಈ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡರೆ ಕಾರ್ಯಕರ್ತರ ವಲಯದಲ್ಲಿ ಅತೃಪ್ತಿಯ ಅಲೆಯೇಳುತ್ತದೆ. ಹಾಗಾಗಿ ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿ ಜೆಡಿಎಸ್‌ ಬೇರು ಗಟ್ಟಿಯಿರುವ ಜಿಲ್ಲೆಗಳಲ್ಲಿ ದೋಸ್ತಿ ಪಕ್ಷಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಿಂತೇ ಹೋರಾಡಲಿವೆ. ಫಲಿತಾಂಶದ ನಂತರ ಅಧಿಕಾರ ಹಂಚಿಕೆಗಾಗಿ ಹೊಂದಾಣಿಕೆ ಸೂತ್ರ ಸಿದ್ಧವಾಗಲಿದೆ.

ಆದರೆ, ತಮಕೂರು ಸೇರಿ ಕೆಲವು ಜಿಲ್ಲೆಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಇನ್ನು ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಜೆಡಿಎಸ್‌ಗೆ ಅಷ್ಟಾಗಿ ನೆಲೆಯಿಲ್ಲ. ಜೆಡಿಎಸ್‌ಗೆ ಗಟ್ಟಿ ನೆಲೆ ಇಲ್ಲದ ಉತ್ತರ ಕರ್ನಾಟಕ, ಕರಾವಳಿಯಲ್ಲಿ ಹೊಂದಾಣಿಕೆಯಾಗಲಿದೆ.

ಎಚ್ಚರಿಕೆ ಹೆಜ್ಜೆ
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಿದರೆ ಬೇರೆಯದೇ ಸಂದೇಶ ರವಾನೆಯಾಗುತ್ತದೆ. ಇದರ ಪರಿಣಾಮ ಲೋಕಸಭೆ ಚುನಾವಣೆಯ ಮೇಲೂ ಉಂಟಾಗಬಹುದು. ಹಾಗಾಗಿ ಎಚ್ಚರಿಕೆಯ ಹೆಜ್ಜೆಯಿರಿಸಬೇಕು ಎಂಬ ನಿರ್ಧಾರಕ್ಕೆ ಉಭಯ ಪಕ್ಷಗಳ ಪ್ರಮುಖ ನಾಯಕರು ಬಂದಿದ್ದಾರೆ ಎನ್ನಲಾಗಿದೆ.

ರಾಹುಲ್‌ ಸೂಚನೆ
ಸ್ಥಳೀಯ ಮುಖಂಡರ ಹಂತದಲ್ಲಿ ಸಮಾಲೋಚಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಸಾಧ್ಯವಿರುವೆಡೆ ಫ್ರೆಂಡ್ಲಿ ಫೈಟ್‌ ನಡೆಸಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೊಂದಾಣಿಕೆಯ ಉಸ್ತುವಾರಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹೆಗಲಿಗೆ ಹಾಕಲು ಅವರು ಬಯಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ಗೆ ಲಾಭ, ಕಾಂಗ್ರೆಸ್ಸಿಗೆ ಅಷ್ಟಕ್ಕಷ್ಟೆ
ಅಸೆಂಬ್ಲಿ ಚುನಾವಣೆ ಬಳಿಕ ಸರಕಾರ ರಚನೆಯಿಂದ ಹಿಡಿದು ಎಲ್ಲ ಹಂತಗಳಲ್ಲಿ ಮೇಲುಗೈ ಸಾಧಿಸಿರುವ ಜೆಡಿಎಸ್‌ ಪೌರ ಸಂಸ್ಥೆಗಳ ಚುನಾವಣೆ ಹೊಂದಾಣಿಕೆ ವಿಚಾರದಲ್ಲೂ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೆಡಿಎಸ್‌ ಪ್ರಾಬಲ್ಯ ಇರುವ ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಇಲ್ಲದೆ, ಕಾಂಗ್ರೆಸ್‌ ಪ್ರಬಲವಾಗಿರುವ ಉತ್ತರ, ಮಧ್ಯ ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ ಸ್ಥಾನ ಗಳಿಕೆ ಹೆಚ್ಚಿಸಿಕೊಳ್ಳುವುದು ಲೆಕ್ಕಾಚಾರವಾಗಿದೆ. ಇದರಿಂದ ಸ್ಥಳೀಯ ಸಂಸ್ಥೆ ಮತ್ತು ಲೋಕಸಭೆಯಲ್ಲೂ ಲಾಭವಾಗುವ ಆಶಯ ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ