ಆ್ಯಪ್ನಗರ

ರಾಜದಂಡ ಗುದ್ದಾಟ: ಕಾಂಗ್ರೆಸ್ - ಬಿಜೆಪಿ ನಡುವೆ 'ಮ್ಯಾಚ್ ರೆಫ್ರಿ' ಆದ ಶಶಿ ತರೂರ್!

Sengol Controversy: ರಾಜದಂಡದ ಇತಿಹಾಸ ಏನು? ಬ್ರಿಟಿಷರಿಂದ ಭಾರತೀಯರಿಗೆ ಅಧಿಕಾರ ಹಸ್ತಾಂತರದ ಪ್ರತೀಕ ಎನ್ನುತ್ತಿದೆ ಬಿಜೆಪಿ. ಆದ್ರೆ, ರಾಜದಂಡದ ಇತಿಹಾಸವೇ ಬೋಗಸ್ ಎಂದು ಕಾಂಗ್ರೆಸ್ ಹೇಳುತ್ತಿದೆ. ಇವೆರಡೂ ಪಕ್ಷಗಳ ವಾದಗಳ ನಡುವೆ ಸಮನ್ವಯತೆ ಸಾಧಿಸುವ ರೀತಿಯಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. ರಾಜ ಪ್ರಭುತ್ವದ ಪ್ರತೀಕವಾಗಿ ಪ್ರಜಾಪ್ರಭುತ್ವದ ಶಕ್ತಿ ಕೇಂದ್ರದಲ್ಲಿ ಪ್ರತಿಷ್ಠಾಪನೆ ಆಗಿರುವ ರಾಜದಂಡ ಎನ್ನುವ ರೀತಿಯಲ್ಲಿ ಶಶಿ ತರೂರ್ ಪ್ರತಿಪಾದಿಸಿದ್ದು, ಇತಿಹಾಸ ಹಾಗೂ ವರ್ತಮಾನವನ್ನು ಜೋಡಿಸುವ ಮಾತುಗಳನ್ನಾಡಿದ್ದಾರೆ.

Authored byದಿಲೀಪ್ ಡಿ. ಆರ್. | Vijaya Karnataka Web 28 May 2023, 1:24 pm

ಹೈಲೈಟ್ಸ್‌:

  • ಕಾಂಗ್ರೆಸ್ ಪಕ್ಷವು ರಾಜದಂಡದ ಇತಿಹಾಸವನ್ನು ಬೋಗಸ್ ಎನ್ನುತ್ತಿದೆ
  • ಬಿಜೆಪಿ ನಾಯಕರು ರಾಜದಂಡವನ್ನು ಅಧಿಕಾರ ಹಸ್ತಾಂತರ ಸಂಕೇತ ಎಂದು ಪ್ರತಿಪಾದಿಸಿದ್ದಾರೆ
  • ನೂತನ ಸಂಸತ್ ಭವನದ ಲೋಕಸಭೆಯಲ್ಲಿ ಸ್ಪೀಕರ್ ಪೀಠದ ಬಳಿ ಪ್ರತಿಷ್ಠಾಪನೆಯಾಗಿದೆ ರಾಜದಂಡ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web sengol shashi
ಹೊಸ ದಿಲ್ಲಿ: ಐತಿಹಾಸಿಕ ಹಿನ್ನೆಲೆ ಹೊಂದಿರುವ ರಾಜದಂಡ (ಸೆಂಗೋಲ್) ಕುರಿತಾಗಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ನಡೆಯುತ್ತಿರುವ ಸಮರಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಎಂಟ್ರಿ ಕೊಟ್ಟಿದ್ಧಾರೆ. ಎರಡೂ ಕಡೆಗೆ ವಾಲದೆ ಮಧ್ಯದಲ್ಲಿ ನಿಂತು ಅಂಪೈರ್‌ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ!
ಕಾಂಗ್ರೆಸ್ ಪಕ್ಷವು ರಾಜದಂಡದ ಇತಿಹಾಸವನ್ನು ಬೋಗಸ್ ಎನ್ನುತ್ತಿದೆ. ಆದ್ರೆ, ಬಿಜೆಪಿ ನಾಯಕರು ರಾಜದಂಡವನ್ನು ಅಧಿಕಾರ ಹಸ್ತಾಂತರ ಸಂಕೇತ ಎಂದು ಪ್ರತಿಪಾದಿಸಿರುವುದಷ್ಟೇ ಅಲ್ಲ, ನೂತನ ಸಂಸತ್ ಭವನದ ಲೋಕಸಭೆಯಲ್ಲಿ ಸ್ಪೀಕರ್ ಪೀಠದ ಬಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಷ್ಠಾಪನೆಯನ್ನೂ ಮಾಡಿದ್ದಾರೆ. ಸೆಂಗೋಲ್ ಕುರಿತಾದ ಈ ಪರ - ವಿರೋಧ ವಿವಾದದ ಕುರಿತಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ವಿವರವಾಗಿ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್‌ನ ಸಾರಾಂಶ ಇಂತಿದೆ:

ವಿಪಕ್ಷಗಳ ಬಹಿಷ್ಕಾರದ ನಡುವೆ ಹೊಸ ಸಂಸತ್ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ
‘ರಾಜದಂಡ (ಸೆಂಗೋಲ್) ವಿವಾದದ ಕುರಿತಾಗಿ ಎರಡೂ ಕಡೆಯವರ ವಾದ ಉತ್ತಮ ಅಂಶಗಳನ್ನು ಹೊಂದಿದೆ ಅನ್ನೋದು ನನ್ನ ಸ್ವಂತ ಅಭಿಮತ. ಧರ್ಮ ಪಾಲನೆ, ಪರಮಾಧಿಕಾರದ ಪಾವಿತ್ರ್ಯತೆ ಹಾಗೂ ಅಧಿಕಾರ ಹಸ್ತಾಂತರದ ಪ್ರತೀಕವಾಗಿ ಹಾಗೂ ಸಂಪ್ರದಾಯ ಮುಂದುವರಿಕೆಯ ಸಂಕೇತವಾಗಿ ರಾಜದಂಡ ಇದೆ ಅನ್ನೋದು ಸರ್ಕಾರದ ವಾದ. ಇತ್ತ ವಿರೋಧ ವಿರೋಧ ಪಕ್ಷಗಳ ವಾದವೂ ಸಮರ್ಪಕವಾಗಿಯೇ ಇದೆ. ನಮ್ಮ ಸಂವಿಧಾನವು ಜನರ ಹೆಸರಿನಲ್ಲಿ, ಜನರಿಗಾಗಿ ರಚನೆಯಾಗಿದೆ. ನಮ್ಮ ದೇಶದ ಪರಮಾಧಿಕಾರವು ಜನರ ಬಳಿ ಇದೆ. ಜನರನ್ನು ನಮ್ಮ ಸಂಸತ್ತು ಪ್ರತಿನಿಧಿಸುತ್ತದೆ. ರಾಜಪ್ರಭುತ್ವದ ಮಾದರಿಯಲ್ಲಿ ಅಧಿಕಾರ ಹಸ್ತಾಂತರ ಆಗುವ ಆಧ್ಯಾತ್ಮಿಕ ಹಕ್ಕು ಸಾಧನೆ ಪ್ರಜಾಪ್ರಭುತ್ವದಲ್ಲಿ ನಡೆಯೋದಿಲ್ಲ ಅನ್ನೋದು ಕಾಂಗ್ರೆಸ್ ಪಕ್ಷದ ವಾದ’ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ಧಾರೆ.


ಸರ್ಕಾರದ ಪ್ರಕಾರ ಆಗಸ್ಟ್ 14, 1947ರಲ್ಲಿ ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಭಾರತೀಯರಿಗೆ ಅಧಿಕಾರ ಹಸ್ತಾಂತರ ಮಾಡುವ ವೇಳೆ ರಾಜದಂಡವನ್ನು ಭಾರತದ ಪ್ರಥಮ ಪ್ರಧಾನ ಮಂತ್ರಿಗಳಾದ ಜವಹರಲಾಲ್ ನೆಹರೂ ಅವರಿಗೆ ಹಸ್ತಾಂತರ ಮಾಡಿದ್ದರು ಅನ್ನೋದು ಬಿಜೆಪಿ ವಾದ.

News Parliament Building: ಸಂಸತ್ ಉದ್ಘಾಟನೆ ಕಾರ್ಯಕ್ರಮದಲ್ಲಿ ದೇವೇಗೌಡ ಭಾಗಿ: ವಿಪಕ್ಷಗಳ ಒಗ್ಗಟ್ಟಿನಲ್ಲಿ ಒಡಕು
ಆದ್ರೆ, ಕಾಂಗ್ರೆಸ್ ಪಕ್ಷದ ನಾಯಕ ಜೈರಾಮ್ ರಮೇಶ್ ಅವರು ಬೇರೆಯದೆ ಆದ ವಾದ ಮಂಡಿಸುತ್ತಾರೆ. ಮದ್ರಾಸ್‌ನ ಧಾರ್ಮಿಕ ಸಂಸ್ಥೆಯೊಂದು ರಾಜದಂಡವನ್ನು ಜವಹರ ಲಾಲ್ ನೆಹರೂ ಅವರಿಗೆ ನೀಡಿತ್ತು ಅನ್ನೋದು ಅವರ ನಿಲುವು. ಈ ರಾಜದಂಡವನ್ನು ಲಾರ್ಡ್‌ ಮೌಂಟ್ ಬ್ಯಾಟನ್ ಅಥವಾ ರಾಜಾಜಿ ಅವರು ನೆಹರೂ ಅವರಿಗೆ ಹಸ್ತಾಂತರ ಮಾಡಿರಲಿಲ್ಲ. ಈ ಕುರಿತ ಯಾವುದೇ ಸಾಕ್ಷ್ಯವೂ ಇಲ್ಲ. ಬ್ರಿಟಿಷರು ಅಧಿಕಾರವನ್ನು ಭಾರತೀಯರಿಗೆ ವರ್ಗಾಯಿಸಿದ ಸಂಕೇತವಾಗಿ ರಾಜದಂಡ ನೀಡಿರಲಿಲ್ಲ. ಈ ಕುರಿತಾಗಿ ಮಾಡಲಾಗುತ್ತಿರುವ ಎಲ್ಲಾ ವಾದಗಳೂ ಬೋಗಸ್ ಅನ್ನೋದು ಜೈರಾಮ್ ರಮೇಶ್ ಅವರ ಸ್ಪಷ್ಟೋಕ್ತಿ.

ಈ ಎರಡೂ ವಾದಗಳನ್ನೂ ಪ್ರಸ್ತಾಪಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಕೊನೆಗೆ ತಮ್ಮ ವಾದವನ್ನೂ ಮಂಡಿಸುತ್ತಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ವಾದಗಳ ನಡುವೆ ಸಮನ್ವಯತೆ ಸಾಧಿಸುವ ಯತ್ನ ಮಾಡಿದ್ದಾರೆ. ರಾಜದಂಡದ ಕುರಿತಾಗಿ ಹಲವು ವಾದ ವಿವಾದಗಳಿವೆ. ಆದರೆ, ನೆಹರೂ ಅವರಿಗೆ ಲಾರ್ಡ್ ಮೌಂಟ್ ಬ್ಯಾಟನ್ ಅವರು ರಾಜದಂಡವನ್ನು ಹಸ್ತಾಂತರಿಸಿ ಸಾಂಕೇತಿಕವಾಗಿ ಅಧಿಕಾರ ಹಸ್ತಾಂತರ ಮಾಡಿರುವ ಬಗ್ಗೆ ಯಾವುದೇ ಸಾಕ್ಷಿ ಇಲ್ಲ ಎನ್ನುತ್ತಾರೆ ಶಶಿ ತರೂರ್.


ಆದ್ರೆ, ಈ ವಿಚಾರದ ಬಗ್ಗೆ ಅನಗತ್ಯ ವಾದ ವಿವಾದ ಮಾಡದೆ, ರಾಜದಂಡ ಅನ್ನೋದನ್ನ ನಮ್ಮ ಭಾರತೀಯ ಸಂಪ್ರದಾಯದ ಪ್ರಕಾರ ಅಧಿಕಾರ ಹಾಗೂ ಶಕ್ತಿ ಎಂದು ಪರಿಗಣಿಸಬಹುದು. ಜೊತೆಗೆ ಈ ರಾಜದಂಡವನ್ನು ಲೋಕಸಭೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಹಿನ್ನೆಲೆಯಲ್ಲಿ ದೇಶದ ಪರಮಾಧಿಕಾರವು ಯಾವುದೇ ವ್ಯಕ್ತಿ, ರಾಜ ಪರಂಪರೆಯ ಬಳಿ ಇಲ್ಲ, ಇದು ಪ್ರಜಾತಂತ್ರದ ಬಳಿ ಇದೆ ಎಂದು ಸಾಂಕೇತಿಕವಾಗಿ ಹೇಳಬಹುದಾಗಿದೆ ಎಂದು ಶಶಿ ತರೂರ್ ಅಭಿಪ್ರಾಯ ಮಂಡಿಸಿದ್ದಾರೆ. ರಾಜದಂಡವನ್ನು ನಾವು ಇತಿಹಾಸದ ಪರಮಾಧಿಕಾರದ ಸಂಕೇತವಾಗಿ ಹಾಗೂ ವರ್ತಮಾನದ ಮೌಲ್ಯಗಳ ಸಂಕೇತವಾಗಿ ಪರಿಭಾವಿಸೋಣ ಎಂದು ಶಶಿ ತರೂರ್ ಆಶಿಸಿದ್ಧಾರೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ