ಆ್ಯಪ್ನಗರ

ದೇಶ ಕೇವಲ ರಾಜನಾಥ್ ಅವರಿಗೆ ಸೇರಿದ್ದಲ್ಲ: ಲಡಾಖ್ ಚರ್ಚೆಗೆ ಆಗ್ರಹಿಸಿ ಕಾಂಗ್ರೆಸ್ ಸಭಾತ್ಯಾಗ!

ಲೋಕಸಭೆಯಲ್ಲಿ ಲಡಾಖ್ ಗಡಿ ಸಮಸ್ಯೆ ಕುರಿತು ಮಾಹಿತಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಷಣಕ್ಕೆ, ಪ್ರತಿಪಕ್ಷ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಲಡಾಖ್ ಗಡಿ ಘರ್ಷಣೆ ಕುರಿತು ಚರ್ಚೆಗೆ ಆಸ್ಪದ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.

Vijaya Karnataka Web 15 Sep 2020, 6:41 pm
ನವದೆಹಲಿ: ಲೋಕಸಭೆಯಲ್ಲಿ ಭಾರತ-ಚೀನಾ ನಡುವಿನ ಲಡಾಖ್ ಗಡಿ ಸಮಸ್ಯೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸವಿಸ್ತಾರವಾದ ವಿವರಣೆ ನೀಡಿದ್ದಾರೆ.
Vijaya Karnataka Web AR Chowdhury
ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ


ಆದರೆ ರಾಜನಾಥ್ ಸಿಂಗ್ ಹೇಳಿಕೆಗೆ ಅತೃಪ್ತಿ ವ್ಯಕ್ತಪಡಿಸಿದ ವಿಪಕ್ಷ ಕಾಂಗ್ರೆಸ್ ಸದಸ್ಯರು, ಲಡಾಖ್ ಗಡಿ ಚರ್ಚೆ ಕುರಿತು ಚರ್ಚೆಗೆ ಆಸ್ಪದ ನೀಡಬೇಕೆಂದು ಆಗ್ರಹಿಸಿ ಸಭಾತ್ಯಾಗ ಮಾಡಿದರು.

ಬಳಿಕ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ, ಲಡಾಖ್ ಗಡಿ ಸಮಸ್ಯೆಯಂತಹ ಗಂಭೀರವದ ವಿಷಯದ ಮೇಲೆ ಚರ್ಚೆಗೆ ಅವಕಾಶ ಮಾಡಿಕೊಡದಿರುವುದು ಸರ್ಕಾರದ ಮೊಂಡುತನಕ್ಕೆ ಸಾಕ್ಷಿ ಎಂದು ಹರಿಹಾಯ್ದರು.

ಸಂಸತ್‌ನಲ್ಲಿ ಭಾರತ-ಚೀನಾ ಗಡಿ ಗುದ್ದಾಟದ ಚರ್ಚೆಗೆ ಕಾಂಗ್ರೆಸ್‌ ಆಗ್ರಹ: ಸ್ಪಷ್ಟವಾಗಿ ತಳ್ಳಿಹಾಕಿದ ಕೇಂದ್ರ ಸರ್ಕಾರ..!

ಈ ದೇಶ ಕೇವಲ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸೇರಿದ್ದಲ್ಲ, ದೇಶ ನಮಗೆಲ್ಲರಿಗೂ ಸೇರಿದ್ದು. ಹೀಗಾಗಿ ಲಡಾಖ್ ಗಡಿ ಸಮಸ್ಯೆ ಕುರಿತು ಸದನದಲ್ಲಿ ವಿಸ್ತಾರವಾದ ಚರ್ಚೆ ಆಗಲೇಬೇಕು ಎಂದು ಅಧೀರ್ ರಂಜನ್ ಚೌಧರಿ ಆಗ್ರಹಿಸಿದರು.


ಲಡಾಖ್‌ನಲ್ಲಿ ಸಿದ್ಧತೆಗಳು ಪೂರ್ಣಗೊಂಡಿದೆ ಎಂದಾದ ಮೇಲೆ ಈ ಕುರಿತು ಸರ್ಕಾರ ಚರ್ಚೆಗೆ ಹಿಂದೇಟು ಹಾಕುತ್ತಿರುವುದೇಕೆ ಎಂದು ಅಧೀರ್ ರಂಜನ್ ಚೌಧರಿ ಪ್ರಶ್ನಿಸಿದರು.

ಲಡಾಖ್ ಗಡಿಯ ವಾಸ್ತವ ಸ್ಥಿತಿ ಏನು ಎಂಬುದು ತಿಳಿಯುವುದು ಜನತೆಯ ಹಕ್ಕು. ಹೀಗಾಗಿ ಸಂಪೂರ್ಣ ಚರ್ಚೆಗೆ ಅವಕಾಶ ಕೊಡಲೇಬೇಕು ಎಂದು ಅಧೀರ್ ರಂಜನ್ ಚೌಧರಿ ಒತ್ತಾಯಿಸಿದರು.

ಸಂಸತ್ತಿನಲ್ಲಿ ರಾಜನಾಥ್ ಭಾಷಣ: ಲಡಾಖ್ ಲಡಾಯಿ ಸಂಪೂರ್ಣ ವರದಿ ಬಿಚ್ಚಿಟ್ಟ ರಕ್ಷಣಾ ಸಚಿವ!

ಇದಕ್ಕೂ ಮೊದಲು ಲಡಾಖ್ ಗಡಿ ಸಮಸ್ಯೆ ಕುರಿತು ಲೋಕಸಭೆಯಲ್ಲಿ ಸವಿಸ್ತಾರವಾಗಿ ಮಾತನಾಡಿದ ರಾಜನಾಥ್ ಸಿಂಗ್, ನಮ್ಮ ಸಾರ್ವಭೌಮತೆ ಮೇಲೆ ದಾಳಿ ಮಾಡಲು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜನಾಥ್ ಸಿಂಗ್ ಭಾಷಣದ ಬಳಿಕ ಈ ಕುರಿತು ಚರ್ಚೆಗೆ ಆಗ್ರಹಿಸಿದ ಕಾಂಗ್ರೆಸ್ ಸದಸ್ಯರು, ಸ್ಪೀಕರ್ ಇದಕ್ಕೆ ಅವಕಾಶ ಕೊಡದೇ ಹೋದಾಗ ಪ್ರತಿಭಟನೆ ರೂಪದಲ್ಲಿ ಸಭಾತ್ಯಾಗ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ