ಆ್ಯಪ್ನಗರ

ಕಾಂಗ್ರೆಸ್ ಪಕ್ಷ ಗೊತ್ತು ಗುರಿ ಇಲ್ಲದೇ ಸಾಗುತ್ತಿದೆ: ಶಶಿ ತರೂರ್‌

ಹೊಸ ದಿಲ್ಲಿ: ಪಕ್ಷವನ್ನು ಮತ್ತೊಮ್ಮೆ ಮುನ್ನಡೆಸಲು ರಾಹುಲ್‌ ಗಾಂಧಿ ಒಪ್ಪದೇ ಇದ್ದರೆ ಕಾಂಗ್ರೆಸ್‌ ಕ್ರಿಯಾಶೀಲ ಮತ್ತು ಪೂರ್ಣ ಪ್ರಮಾಣದ ನಾಯಕತ್ವವನ್ನು ಕಂಡುಕೊಳ್ಳಲೇಬೇಕು ಎಂದು ಸಂಸದ ಶಶಿ ತರೂರ್‌ ಅಭಿಪ್ರಾಯಪಟ್ಟಿದ್ದಾರೆ. ತಿರುವನಂತಪುರ ಕ್ಷೇತ್ರದ ಕಾಂಗ್ರೆಸ್‌ ಸಂಸದರಾಗಿರುವ ತರೂರ್‌ ಅವರು, ಕಾರ್ಯಕರ್ತರಲ್ಲಿ ಹುರುಪು ತುಂಬಿ ಪಕ್ಷಕ್ಕೆ ಪುನಶ್ಚೇತನ ನೀಡಲು ನಾಯಕತ್ವ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲೇಬೇಕು ಎಂದು ಪುನರುಚ್ಚರಿಸಿದ್ದಾರೆ. ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಕಾಂಗ್ರೆಸ್‌ ಕಾರ್ಯಕಾರಿಣಿ ಸದಸ್ಯರ ಆಯ್ಕೆ ಆಂತರಿಕ ಚುನಾವಣೆ ಮೂಲಕವೇ ನಡೆಯಬೇಕು ಎಂದು ಪ್ರತಿಪಾದಿಸಿದ್ದಾರೆ.

Vijaya Karnataka Web 23 Feb 2020, 7:28 pm
ಹೊಸ ದಿಲ್ಲಿ: ಪಕ್ಷವನ್ನು ಮತ್ತೊಮ್ಮೆ ಮುನ್ನಡೆಸಲು ರಾಹುಲ್‌ ಗಾಂಧಿ ಒಪ್ಪದೇ ಇದ್ದರೆ ಕಾಂಗ್ರೆಸ್‌ ಕ್ರಿಯಾಶೀಲ ಮತ್ತು ಪೂರ್ಣ ಪ್ರಮಾಣದ ನಾಯಕತ್ವವನ್ನು ಕಂಡುಕೊಳ್ಳಲೇಬೇಕು ಎಂದು ಸಂಸದ ಶಶಿ ತರೂರ್‌ ಅಭಿಪ್ರಾಯಪಟ್ಟಿದ್ದಾರೆ. ತಿರುವನಂತಪುರ ಕ್ಷೇತ್ರದ ಕಾಂಗ್ರೆಸ್‌ ಸಂಸದರಾಗಿರುವ ತರೂರ್‌ ಅವರು, ಕಾರ್ಯಕರ್ತರಲ್ಲಿ ಹುರುಪು ತುಂಬಿ ಪಕ್ಷಕ್ಕೆ ಪುನಶ್ಚೇತನ ನೀಡಲು ನಾಯಕತ್ವ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲೇಬೇಕು ಎಂದು ಪುನರುಚ್ಚರಿಸಿದ್ದಾರೆ. ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಕಾಂಗ್ರೆಸ್‌ ಕಾರ್ಯಕಾರಿಣಿ ಸದಸ್ಯರ ಆಯ್ಕೆ ಆಂತರಿಕ ಚುನಾವಣೆ ಮೂಲಕವೇ ನಡೆಯಬೇಕು ಎಂದು ಪ್ರತಿಪಾದಿಸಿದ್ದಾರೆ.
Vijaya Karnataka Web congress party again in turmoil shashi tharoor wants election for party president selection
ಕಾಂಗ್ರೆಸ್ ಪಕ್ಷ ಗೊತ್ತು ಗುರಿ ಇಲ್ಲದೇ ಸಾಗುತ್ತಿದೆ: ಶಶಿ ತರೂರ್‌



​ಕಾಂಗ್ರೆಸ್‌ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಪಕ್ಷ ಮುನ್ನಡೆಸುತ್ತಿರುವಾಗ ನಾಯಕತ್ವ ಸಮಸ್ಯೆ ಇದೆ ಎಂದು ನಿಮಗೇಕೆ ಅನ್ನಿಸುತ್ತಿದೆ?

ಪೂರ್ಣ ಪ್ರಮಾಣದ ಅಧ್ಯಕ್ಷರು ಇಲ್ಲದ ಕಾರಣ ಪಕ್ಷ ಗೊತ್ತು ಗುರಿ ಇಲ್ಲದೇ ಸಾಗುತ್ತಿದೆ. ಕಾಂಗ್ರೆಸ್‌ಗೆ ಸೋನಿಯಾ ಗಾಂಧಿಯವರ ಕೊಡುಗೆ ದೊಡ್ಡದು ಎನ್ನುವುದರಲ್ಲಿ ಅನುಮಾನವಿಲ್ಲ. ಎರಡು ವರ್ಷ ಸಕ್ರಿಯ ರಾಜಕಾರಣದಿಂದ ದೂರ ಇದ್ದ ಅವರಿಗೆ ಮತ್ತೆ ಪಕ್ಷದ ಹೊಣೆಗಾರಿಕೆ ನೀಡುವುದು ಎಷ್ಟರಮಟ್ಟಿಗೆ ಸರಿ..? ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಮಾತ್ರ ಪರ್ಯಾಯ ಎಂದು ಭಾವಿಸಿರುವ ಅಸಂಖ್ಯಾತ ಜನ ಈಗಲೂ ಇದ್ದಾರೆ. ಆದರೆ ನಾಯಕತ್ವದ ಕಾರಣದಿಂದಾಗಿ ಅವರು ಬೇರೆ ಆಯ್ಕೆಗಳತ್ತ ಗಮನ ಹರಿಸಿದ್ದಾರೆ. ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅದು ಸ್ಪಷ್ಟವಾಗಿ ಗೋಚರವಾಗಿದೆ. ಕಾಂಗ್ರೆಸ್‌ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಪ್‌ ಮತ್ತು ಕೆಲವು ಪ್ರಮಾಣದಲ್ಲಿ ಬಿಜೆಪಿಯತ್ತ ವಾಲಿದ್ದಾರೆ. ನಮ್ಮ ಮತದಾರರನ್ನು ಹಿಡಿದಿಟ್ಟುಕೊಳ್ಳಲು ನಾಯಕತ್ವ ಸಮಸ್ಯೆಗೆ ತ್ವರಿತ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ.

​ರಾಹುಲ್‌ ಗಾಂಧಿ ಅವರೇ ಮತ್ತೆ ಪಕ್ಷದ ಅಧ್ಯಕ್ಷರಾಗಬೇಕೆಂಬ ಬೇಡಿಕೆ ಕಾಂಗ್ರೆಸ್‌ನ ಕೆಲವು ನಾಯಕರಿಂದ ವ್ಯಕ್ತವಾಗಿದೆಯಲ್ಲ?

ರಾಹುಲ್‌ ಗಾಂಧಿಯವರೇ ಪಕ್ಷವನ್ನು ಮುನ್ನಡೆಸಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆಯೂ ಆಗಿತ್ತು. ಲೋಕಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಅವರು ಪದತ್ಯಾಗ ಮಾಡಲು ಮುಂದಾದಾಗಲೇ ನಾವು ತಡೆಯುವ ಪ್ರಯತ್ನ ಮಾಡಿದ್ದೆವು. ಆದರೆ ರಾಹುಲ್‌ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಈಗಲೂ ಅಷ್ಟೇ, ಅಂತಿಮ ತೀರ್ಮಾನ ಅವರದೇ ಆಗಿದೆ. ಒಂದೊಮ್ಮೆ ಅವರು ತಮ್ಮ ಹಿಂದಿನ ನಿರ್ಧಾರಕ್ಕೇ ಬದ್ಧವಾಗಿರಲು ನಿರ್ಧರಿಸಿದರೆ ಪಕ್ಷವು ಪೂರ್ಣಪ್ರಮಾಣದ, ಕ್ರಿಯಾಶೀಲ ನಾಯಕನನ್ನು ಆಯ್ಕೆ ಮಾಡಿಕೊಳ್ಳಲೇಬೇಕು. ಇಲ್ಲಿ ಗಾಂಧಿ ಅಥವಾ ಗಾಂಧಿಯೇತರ ಎನ್ನುವುದು ಮುಖ್ಯವಲ್ಲ. ಪಕ್ಷವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಪೂರ್ಣ ಪ್ರಮಾಣದ ನಾಯಕತ್ವ ಬೇಕು ಅಷ್ಟೆ.

​ಪ್ರಿಯಾಂಕಾ ವಾದ್ರಾ ಅವರಿಗೆ ಪಕ್ಷದ ಅಧ್ಯಕ್ಷ ಪದವಿಯನ್ನು ನೀಡಬಹುದಲ್ಲವೆ?

ಖಂಡಿತವಾಗಿಯೂ ಅಧ್ಯಕ್ಷರ ಆಯ್ಕೆ ವಿಚಾರ ಬಂದಾಗ ಪ್ರಿಯಾಂಕಾ ವಾದ್ರಾ ಹೆಸರನ್ನೂ ಕೆಲವರು ಪ್ರಸ್ತಾಪಿಸಲಿ ಎಂದೇ ನಾನು ಬಯಸುತ್ತೇನೆ. ಪ್ರಿಯಾಂಕಾ ಸಹಜ ವರ್ಚಸ್ಸು ಹೊಂದಿರುವ ನಾಯಕಿ. ಸ್ವಲ್ಪ ಮಟ್ಟಿಗೆ ಸಂಘಟನೆಯ ಅನುಭವವೂ ಇದೆ. ಆದರೆ ಅಂತಿಮ ತೀರ್ಮಾನ ಅವರದೇ ಆಗಿರುತ್ತದೆ ಮತ್ತು ಅದನ್ನು ನಾವು ಗೌರವಿಸಬೇಕಾಗುತ್ತದೆ.

​ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಬೇಕೆಂದು ಹೇಳಿದ್ದೀರಿ?

ಈಗ ಸಿಡಬ್ಲ್ಯೂಸಿ ಸದಸ್ಯರನ್ನು ಹೈಕಮಾಂಡ್‌ ನೇಮಕ ಮಾಡುತ್ತದೆ. ನನ್ನ ಪ್ರಕಾರ, ಕಾರ್ಯಕಾರಿಣಿಯಲ್ಲಿ ಚುನಾಯಿತ ಸದಸ್ಯರು, ಕಾಯಂ ಆಹ್ವಾನಿತರು ಮತ್ತು ವಿಶೇಷ ಆಹ್ವಾನಿತರು ಎಂದು ಮೂರು ಶ್ರೇಣಿ ಮಾಡಬೇಕು. ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಮತ್ತು ಪ್ರದೇಶ ಕಾಂಗ್ರೆಸ್‌ ಸಮಿತಿ (ಪಿಸಿಸಿ)ಗಳ ಪದಾಧಿಕಾರಿಗಳು ಸೇರಿ ಸುಮಾರು 10,000 ಜನ ಇದ್ದಾರೆ. ಇವರೆಲ್ಲ ಮುಕ್ತ ಮತ್ತು ಪಾರದರ್ಶಕವಾದ ಆಂತರಿಕ ಚುನಾವಣೆ ಮೂಲಕ ಸಿಡಬ್ಲ್ಯೂಸಿ ಸದಸ್ಯರನ್ನು ಆಯ್ಕೆ ಮಾಡಿದರೆ ಪಕ್ಷದ ಸಂಘಟನೆಗೆ ಒಳ್ಳೆಯದು. ಖಂಡಿತವಾಗಿಯೂ ಇದು ಪಕ್ಷದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ