ಆ್ಯಪ್ನಗರ

Congress President Poll: ಗಾಂಧಿ ಕುಟುಂಬದವರಿಗೆ ಅಧ್ಯಕ್ಷಗಿರಿ ಬೇಡ: ರಾಹುಲ್ ಗಾಂಧಿ ಸ್ಪಷ್ಟನೆ

Congress President Election: ಗಾಂಧಿ ಕುಟುಂಬದ ಯಾರು ಕೂಡ ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರಾಗಬಾರದು ಎಂದು ರಾಹುಲ್ ಗಾಂಧಿ ಅವರು ತಮಗೆ ಸ್ಪಷ್ಟವಾಗಿ ಹೇಳಿರುವುದಾಗಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

Edited byಅಮಿತ್ ಎಂ.ಎಸ್ | Vijaya Karnataka Web 23 Sep 2022, 11:37 am

ಹೈಲೈಟ್ಸ್‌:

  • ಗಾಂಧಿ ಕುಟುಂಬದ ಯಾವ ಸದಸ್ಯರೂ ಅಧ್ಯಕ್ಷರಾಗಬಾರದು
  • ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾಗಿ ಗೆಹ್ಲೋಟ್ ಹೇಳಿಕೆ
  • ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಬಗ್ಗೆ ರಾಹುಲ್ ಸ್ಪಷ್ಟನೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web rahul gandhi
ಹೊಸದಿಲ್ಲಿ: ಗಾಂಧಿ ಕುಟುಂಬದಿಂದ ಯಾರೂ ಮುಂದಿನ ಕಾಂಗ್ರೆಸ್ ಅಧ್ಯಕ್ಷರಾಗುವುದಿಲ್ಲ ಎಂದು ರಾಹುಲ್ ಗಾಂಧಿ ಅವರು ತಮಗೆ ಸ್ಪಷ್ಟಪಡಿಸಿರುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದ ಸಾರಥ್ಯ ವಹಿಸಿಕೊಳ್ಳುವ ಪೈಪೋಟಿ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದೆ. ಆದರೆ ಚುನಾವಣೆಯ ಪ್ರಕ್ರಿಯೆ ಅಗತ್ಯವಿಲ್ಲದೆ ರಾಹುಲ್ ಗಾಂಧಿ ಅವರೇ ಮತ್ತೆ ಅಧ್ಯಕ್ಷಗಿರಿ ಒಪ್ಪಿಕೊಳ್ಳಬೇಕು ಎಂದು ಅನೇಕ ನಾಯಕರು ಒತ್ತಾಯಿಸಿದ್ದಾರೆ. ಪಕ್ಷದ ಉನ್ನತ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಅಶೋಕ್ ಗೆಹ್ಲೋಟ್ ಕೂಡ ರಾಹುಲ್ ಗಾಂಧಿ ಅವರ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ, ರಾಹುಲ್ ಅವರು ತಾವು ಯಾವ ಒತ್ತಡಕ್ಕೂ ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.
Congress President Poll: ಕಾಂಗ್ರೆಸ್ ಚುನಾವಣೆ ವೇಳಾಪಟ್ಟಿ ಪ್ರಕಟ: ರೇಸ್‌ನಲ್ಲಿ ಖರ್ಗೆ, ಸಿದ್ದರಾಮಯ್ಯ?

ಕೇರಳದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅಶೋಕ್ ಗೆಹ್ಲೋಟ್, "ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂಬ ಎಲ್ಲರ ಬೇಡಿಕೆಯನ್ನು ಅಂಗೀಕರಿಸುವಂತೆ ನಾನು ರಾಹುಲ್ ಗಾಂಧಿ ಅವರಿಗೆ ಅನೇಕ ಬಾರಿ ಮನವಿ ಮಾಡಿದ್ದೆ. ಆದರೆ ಗಾಂಧಿ ಕುಟುಂಬದಿಂದ ಯಾರೂ ಕೂಡ ಮುಂದಿನ ಮುಖ್ಯಸ್ಥರಾಗಬಾರದು ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ" ಎಂದರು.


ತಾವು ಶೀಘ್ರದಲ್ಲಿಯೇ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸುವುದಾಗಿ ಗೆಹ್ಲೋಟ್ ತಿಳಿಸಿದರು. ದೇಶದ ಈಗಿನ ಪರಿಸ್ಥಿತಿಯನ್ನು ಪರಿಗಣಿಸಿದಾಗ ವಿರೋಧ ಪಕ್ಷವು ಪ್ರಬಲವಾಗಬೇಕಿದೆ ಎಂದು ಹೇಳಿದರು.
Congress President Poll: 'ಒಬ್ಬ ವ್ಯಕ್ತಿ, ಒಂದು ಹುದ್ದೆ': ರಾಹುಲ್ ಗಾಂಧಿ ಹೇಳಿಕೆಯಿಂದ ಗೆಹ್ಲೋಟ್ ಆಸೆಗೆ ತಣ್ಣೀರು!

ಭಾರತ್ ಜೋಡೋ ಯಾತ್ರೆಗಾಗಿ ಕೇರಳದಲ್ಲಿರುವ ರಾಹುಲ್ ಗಾಂಧಿ ಅವರನ್ನು ಅಶೋಕ್ ಗೆಹ್ಲೋಟ್ ಭೇಟಿ ಮಾಡಿ ಚರ್ಚಿಸಿದರು. "ನನ್ನನ್ನು ಅಧ್ಯಕ್ಷನನ್ನಾಗಿ ಮಾಡಬೇಕು ಎಂದು ಅವರು ಬಯಸಿರುವುದು ನನಗೆ ತಿಳಿದಿದೆ. ಆದರೆ, ಗಾಂಧಿಯೇತರ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂಬ ಕಾರಣಕ್ಕೆ ನಾನು ಈ ನಿರ್ಧಾರ ಮಾಡಿದ್ದೇನೆ" ಎಂದು ರಾಹುಲ್ ಹೇಳದ್ದಾಗಿ ತಿಳಿಸಿದರು.


ಗೆಹ್ಲೋಟ್ ಪರ ಗಾಂಧಿಗಳ ಒಲವು
ಅಶೋಕ್ ಗೆಹ್ಲೋಟ್ ಮತ್ತು ಶಶಿ ತರೂರ್ ಅವರು ಮುಂದಿನ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ರಾಹುಲ್ ಗಾಂಧಿ ಅವರು ಮತ್ತೆ ಅಧ್ಯಕ್ಷರಾಗಲು ಒಪ್ಪದ ಕಾರಣ, ಮತ್ತಷ್ಟು ಆಕಾಂಕ್ಷಿಗಳು ಕಣಕ್ಕಿಳಿದರೂ ಅಚ್ಚರಿಯಿಲ್ಲ. ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಅಶೋಕ್ ಗೆಹ್ಲೋಟ್ ಅವರಿಗೆ ರಾಹುಲ್ ಮತ್ತು ಸೋನಿಯಾ ಗಾಂಧಿ ಬೆಂಬಲ ಸಿಗುವ ಸಾಧ್ಯತೆ ಹೆಚ್ಚಿದೆ. ಕಳೆದ 20 ವರ್ಷಗಳಲ್ಲಿಯೇ ಮೊದಲ ಬಾರಿಗೆ ಗಾಂಧಿಯೇತರ ಕುಟುಂಬದ ನಾಯಕರೊಬ್ಬರು ಅಧ್ಯಕ್ಷರಾಗುವ ಅವಕಾಶ ಸಿಕ್ಕಿದ್ದು, ಗೆಹ್ಲೋಟ್ ಪರ ಗಾಂಧಿ ಕುಟುಂಬ ನಿಲ್ಲಲಿದೆ ಎಂದು ಹೇಳಲಾಗುತ್ತಿದೆ.
Congress President Poll: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಶಶಿ ತರೂರ್‌ಗೆ ತವರಿನಲ್ಲಿಯೇ ಸಿಗದ ಬೆಂಬಲ

ಗೆಹ್ಲೋಟ್‌ಗೆ ಎರಡು ಹುದ್ದೆ ಆಸೆ
ಆದರೆ, ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕವೂ ರಾಜಸ್ಥಾನ ಸಿಎಂ ಕುರ್ಚಿಯನ್ನು ತ್ಯಜಿಸಲು ಗೆಹ್ಲೋಟ್ ಸಿದ್ಧರಿಲ್ಲ. 71 ವರ್ಷದ ಗೆಹ್ಲೋಟ್ ಅವರಿಗೆ ತಾವು ದಿಲ್ಲಿಗೆ ಹೋದರೆ, ರಾಜ್ಯದ ಅಧಿಕಾರ ತಮ್ಮ ವಿರೋಧಿ ಸಚಿನ್ ಪೈಲಟ್ ಅವರಿಗೆ ಸಿಗಲಿದೆ ಎನ್ನುವುದು ಆತಂಕ ಮೂಡಿಸಿದೆ. ಅದಕ್ಕಾಗಿ ತಮ್ಮ ನಿಷ್ಠಾವಂತ ನಾಯಕನನ್ನು ಸಿಎಂ ಮಾಡಬೇಕೆಂಬ ಪ್ರಸ್ತಾಪವನ್ನು ಸೋನಿಯಾ ಗಾಂಧಿ ಮುಂದೆ ಇರಿಸಿದ್ದಾರೆ ಎನ್ನಲಾಗಿದೆ.

ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂದು ಈ ಹಿಂದೆ ರಾಜಸ್ಥಾನದಲ್ಲಿ ನಡೆದಿದ್ದ ಚಿಂತನ ಶಿಬಿರದಲ್ಲಿ ಕಾಂಗ್ರೆಸ್ ನಿರ್ಣಯ ತೆಗೆದುಕೊಂಡಿತ್ತು. ಅದರಂತೆ ಗೆಹ್ಲೋಟ್ ಅವರಿಗೆ ಎರಡು ಹುದ್ದೆಗಳು ಸಿಗುವುದು ಅಸಾಧ್ಯ ಎಂಬ ಸುಳಿವನ್ನು ರಾಹುಲ್ ಗಾಂಧಿ ಗುರುವಾರ ನೀಡಿದ್ದರು.
Congress: ಗೆಹ್ಲೋಟ್, ತರೂರ್ ಯಾರೇ ಕಾಂಗ್ರೆಸ್ ಅಧ್ಯಕ್ಷರಾದ್ರೂ ರಾಹುಲ್ ಗಾಂಧಿ ಕೈಗೊಂಬೆ: ಬಿಜೆಪಿ

ಅಧ್ಯಕ್ಷರಿಗೆ ಅಧಿಕಾರ
ಈ ನಡುವೆ ದೇಶಾದ್ಯಂತ ಕಾಂಗ್ರೆಸ್ ಸಮಿತಿಗಳು ಸಭೆಗಳನ್ನು ನಡೆಸುತ್ತಿದ್ದು, ಮುಂಬರುವ ಕಾಂಗ್ರೆಸ್ ಅಧ್ಯಕ್ಷರಿಗೆ ಪಿಸಿಸಿ ಮತ್ತು ಎಐಸಿಸಿ ಸದಸ್ಯರನ್ನು ನೇಮಕ ಮಾಡುವ ಅಧಿಕಾರ ನೀಡುವ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಪಕ್ಷದ ಬೆಂಬಲ ಮತ್ತು ಒತ್ತಾಯದ ನಡುವೆಯೂ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವ ಕುರಿತಾದ ನಿರ್ಧಾರದ ಬಗ್ಗೆ ತುಟಿಬಿಚ್ಚಿಲ್ಲ. "ನಾನು ಕಾಂಗ್ರೆಸ್ ಅಧ್ಯಕ್ಷನಾಗುವುದು ಅಥವಾ ಆಗದೆ ಇರುವುದು ಅಧ್ಯಕ್ಷೀಯ ಚುನಾವಣೆ ನಡೆದ ಬಳಿಕ ಸ್ಪಷ್ಟವಾಗಲಿದೆ" ಎಂದು ಈ ಹಿಂದೆ ಗೂಡಾರ್ಥದ ಹೇಳಿಕೆ ನೀಡಿದ್ದರು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ