ಆ್ಯಪ್ನಗರ

ಹಾರ್ದಿಕ್‌ ಪಟೇಲ್‌ ಮೂಲಕ ಮೋದಿ-ಶಾಗೆ ಠಕ್ಕರ್‌ ಕೊಡಲು ಕಾಂಗ್ರೆಸ್‌ ರಣತಂತ್ರ! ವಿಶ್ಲೇಷಣೆ!

ಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಕಾಂಗ್ರೆಸ್‌ ಘಟಕದ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡುವ ಮೂಲಕ ಕಾಂಗ್ರೆಸ್‌ ವರಿಷ್ಠರು ಮೋದಿ-ಶಾ ವಿರುದ್ಧದ ಹೋರಾಟವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿದ್ದಾರೆ.

TIMESOFINDIA.COM 13 Jul 2020, 6:56 am
ಹೊಸದಿಲ್ಲಿ: ಪಾಟೀದಾರ್‌ ಮೀಸಲು ಹೋರಾಟದ ನೇತೃತ್ವ ವಹಿಸಿ ದೇಶದ ಗಮನ ಸೆಳೆದಿದ್ದ ಯುವ ನಾಯಕ ಹಾರ್ದಿಕ್‌ ಪಟೇಲ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಕಾಂಗ್ರೆಸ್‌ ಘಟಕದ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡುವ ಮೂಲಕ ಕಾಂಗ್ರೆಸ್‌ ವರಿಷ್ಠರು ಮೋದಿ-ಶಾ ವಿರುದ್ಧದ ಹೋರಾಟವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿದ್ದಾರೆ.
Vijaya Karnataka Web jpg - 2020-07-13T065248.413


ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಅಮಿತ್‌ ಛಾವ್ಡಾ ಅವರು ಕಾರ್ಯನಿರ್ವಹಿಸುತ್ತಿರುವಾಗಲೇ ಹಾರ್ದಿಕ್‌ಗೆ ಮಹತ್ವದ ಹುದ್ದೆಯನ್ನು ನೀಡಿರುವುದು ಬಹಳ ಆಸಕ್ತಿಕರ ಮತ್ತು ಮಹತ್ವದ ನಡೆಯಾಗಿದೆ ಎಂದು ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದಾರೆ. ಮೋದಿ -ಶಾ ಜೋಡಿಗೆ ಗುಜರಾತಿನಲ್ಲಿ ತನ್ನ ಜಾತಿ ಬಲದಿಂದ ಪೆಟ್ಟು ನೀಡಲು ಹಾರ್ದಿಕ್‌ಗೆ ಸಾಧ್ಯವಿದೆ ಎನ್ನುವುದನ್ನು ಅರಿತಿರುವ ರಾಹುಲ್‌ ಗಾಂಧಿ ಅವರು ಮಹತ್ವದ ಹುದ್ದೆಯನ್ನು ಅವರಿಗೆ ನೀಡಿದ್ದಾರೆ.

ಯುವಕರಿಗೆ ದಾರಿಕೊಡುವಂತೆ ಮತ್ತೆ ತಮ್ಮ ಹಳೆಯ ಸಂದೇಶವನ್ನು ಪರೋಕ್ಷವಾಗಿ ಕಾಂಗ್ರೆಸ್‌ನ ಹಿರಿಯರಿಗೆ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. 2017ರ ಗುಜರಾತ್‌ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರ ವಿರುದ್ಧ ತೊಡೆ ತಟ್ಟಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಒಬಿಸಿ ಸಮುದಾಯದ ನಾಯಕ ಅಲ್ಪೇಶ್‌ ಠಾಕೂರ್‌, ದಲಿತ ನಾಯಕ ಜಿಗ್ನೇಶ್‌ ಮೇವಾನಿ ಜತೆಗೆ ಬಲ ತುಂಬಿದ್ದು ಇದೇ ಪಾಟೀದಾರ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌.

ಗುಜರಾತ್ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರಾಗಿ ಹಾರ್ದಿಕ್ ಪಟೇಲ್ ನೇಮಕ!

ಈ ಮೂವರ ಸಂಘಟಿತ ಪ್ರಯತ್ನದಿಂದ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿತ್ತು. ಆದರೆ ಶಾಸಕರಾಗಿ ಜಿಗ್ನೇಶ್‌ ಬ್ಯುಸಿಯಾಗಿ, ನಂತರ ಅಲ್ಪೇಶ್‌ ಠಾಕೂರ್‌ 'ಕೈ' ತೊರೆದು ಕಮಲ ಹಿಡಿದ ಹಿನ್ನೆಲೆಯಲ್ಲಿ ಸದ್ಯ ಕಾಂಗ್ರೆಸ್‌ಗೆ ಆಸರೆಯಾಗಿ ಉಳಿದಿರುವುದು ಹಾರ್ದಿಕ್‌ ಮತ್ತು ಅವರ ಪಾಟೀದಾರ್‌ ಮೀಸಲು ಅಸ್ತ್ರ ಮಾತ್ರ.

ಅಹ್ಮದ್‌ ಪಟೇಲ್‌ಗೆ ಪರ್ಯಾಯವೇ?
ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ನಾಯಕತ್ವದಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲಾದಾಗ ಅವಲೋಕನ ಹಲವು ಸಂದರ್ಭಗಳಲ್ಲಿ ರಾಹುಲ್‌ ಗಾಂಧಿ ಅವರ ಅಭಿಪ್ರಾಯ ಹೊಸ ತಲೆಮಾರಿಗೆ ಕಾಂಗ್ರೆಸ್‌ ಹಿರಿಯರು ಮಣೆ ಹಾಕಬೇಕು ಎನ್ನುವುದೇ ಆಗಿತ್ತು. ಹಿರಿಯ ಕಾಂಗ್ರೆಸ್ಸಿಗರು ತಮ್ಮ ಮಹತ್ವದ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿ ಯುವ ನೇತಾರರಿಗೆ ಪಕ್ಷದಲ್ಲಿಅವಕಾಶ ನೀಡಬೇಕಿದೆ ಎಂಬ ಹಠಕ್ಕೆ ಬಿದ್ದೇ ರಾಹುಲ್‌ ತಮ್ಮ ಅಧ್ಯಕ್ಷ ಹುದ್ದೆಯನ್ನು ತೊರೆದಿದ್ದರು.

ಸದ್ಯ ಅದನ್ನೇ ರಾಜಕೀಯದ ಮೇಲಾಟಗಳ ಮೂಲಕ ಸಾಧಿಸಲು ಹೊರಟಿರುವ ರಾಹುಲ್‌ , ತಮ್ಮ ತಾಯಿ ಸೋನಿಯಾ ಅವರ ಆಪ್ತ ಮತ್ತು ಹಿರಿಯ ಕಾಂಗ್ರೆಸ್ಸಿಗರಿಗೆ ಹೈಕಮಾಂಡ್‌ನ ಕಿವಿ ಮತ್ತು ಕಣ್ಣು ಎನಿಸಿರುವ ಅಹ್ಮದ್‌ ಪಟೇಲ್‌ ಅವರನ್ನು ಪ್ರಭಾವಿ ವಲಯದಿಂದ ದೂರ ಇರಿಸಲು ಮುಂದಾಗಿದ್ದಾರೆ. ಸದ್ಯ ಜಾರಿ ನಿರ್ದೇಶನಾಲಯದ ಸುಳಿಯೊಳಗೆ ನಿಧಾನವಾಗಿ ಅಹ್ಮದ್‌ ಪಟೇಲ್‌ ಸಿಕ್ಕಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಕೂಡ ರಾಹುಲ್‌ ಮತ್ತು ಪ್ರಿಯಾಂಕಾ ವಾದ್ರಾ ಚೆನ್ನಾಗಿ ಅರಿತಿದ್ದಾರೆ. ಹೀಗಾಗಿಯೇ ಅಹ್ಮದ್‌ ಅವರಿಗೆ ಪರ್ಯಾಯ ನಾಯಕರನ್ನಾಗಿ ಹಾರ್ದಿಕ್‌ರನ್ನು ಬೆಳೆಸಲು ಮುಂದಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ