ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವರ ಸಮಿತಿ ಸಭೆಯಲ್ಲೂಈ ಬಗ್ಗೆ ಚರ್ಚೆ ನಡೆಸಲಾಗಿದೆ. ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ದೇಶದಲ್ಲಿ ಸರಕಾರದ ಲೆಕ್ಕಾಚಾರ ಮೀರಿ ಸೋಂಕಿತರು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿಒಮ್ಮೆಲೆ ಲಾಕ್ಡೌನ್ ತೆರವುಗೊಳಿಸಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಆತಂಕ ಸಭೆಯಲ್ಲಿ ವ್ಯಕ್ತವಾಗಿದೆ. ಲಾಕ್ಡೌನ್ ಮುಂದುವರಿಸದರೂ ಅಥವಾ ಹಂತಹಂತವಾಗಿ ತೆರವುಗೊಳಿಸಿದರೂ ಅನುಸರಿಸಬೇಕಾದ ಕಾರ್ಯತಂತ್ರವೇನು ಎಂಬ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಮುಖ್ಯವಾಗಿ ಸಾರ್ವಜನಿಕ ಸ್ಥಳಗಳು, ಧಾರ್ಮಿಕ ಕಾರ್ಯಕ್ರಮಗಳ ಮೇಲೆ ತೀವ್ರ ನಿಗಾ ಇಡಲು ತೀರ್ಮಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಕೊರೊನಾ ವಿರುದ್ಧ ಸುದೀರ್ಘ ಹೋರಾಟಕ್ಕೆ ಸಿದ್ಧರಾಗುವಂತೆ ದೇಶದ ಜನತೆಗೆ ಸೋಮವಾರವೇ ಕರೆ ನೀಡಿದ್ದಾರೆ.
ಮಾ.25ರಿಂದ 21 ದಿನಗಳ ಕಾಲ ಜಾರಿಯಾಗಿರುವ ಲಾಕ್ಡೌನ್ ಏ.14ರಂದು ಮಧ್ಯರಾತ್ರಿ ಕೊನೆಗೊಳ್ಳುತ್ತದೆ. ಆದರೆ, ತಬ್ಲಿಘಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದವರಿಂದ ಸೋಂಕು ವ್ಯಾಪಕವಾಗಿ ಹಬ್ಬಿರುವ ಹಿನ್ನೆಲೆಯಲ್ಲಿ, 14 ದಿನಗಳ ಲಾಕ್ಡೌನ್ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಹೀಗಾಗಿ ತಿಂಗಳ ಅಂತ್ಯದವರೆಗೂ ಇದನ್ನು ಮುಂದುವರಿಸಬೇಕು ಎಂದು ತೆಲಂಗಾಣ ಸಿಎಂ ಕೆಸಿಆರ್ ಪ್ರಧಾನಿಗೆ ಸೋಮವಾರ ಮನವಿ ಮಾಡಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿರುವ ಮಹಾರಾಷ್ಟ್ರ ಲಾಕ್ಡೌನ್ ಮುಂದುವರಿಸಲು ಈಗಾಗಲೇತೀರ್ಮಾನಿಸಿದೆ.
186 ತಬ್ಲಿಘಿಗಳ ವಿರುದ್ಧ ಎಫ್ಐಆರ್
ದಿಲ್ಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ 150 ಜನರ ವಿರುದ್ಧ, ಕೊರೊನಾ ಸೋಂಕು ಹರಡಿರುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ' ಆರೋಪದಡಿ ಮುಂಬಯಿನ ಆಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಉತ್ತರ ಪ್ರದೇಶದಲ್ಲೂ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿದ 36 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಒಬ್ಬರಿಂದ 406 ಜನರಿಗೆ ಸೋಂಕು ಹರಡುವ ಸಾಧ್ಯತೆ
ಐಸೊಲೇಷನ್ಗೆ ಒಳಪಡದ ಒಬ್ಬ ಕೊರೊನಾ ಸೋಂಕಿತ ವ್ಯಕ್ತಿಯು 30 ದಿನಗಳಲ್ಲಿ 406 ಮಂದಿಗೆ ಸೋಂಕು ಹರಡಿಸುವ ಸಾಧ್ಯತೆ ಇದೆ. ಲಾಕ್ಡೌನ್ ನಿಯಮ ಪಾಲಿಸಿದಲ್ಲಿ ಒಬ್ಬ ವ್ಯಕ್ತಿಯಿಂದ 30 ದಿನದಲ್ಲಿ ಸೋಂಕು ಹರಡುವ ಅಪಾಯ ಇಬ್ಬರು ಅಥವಾ ಮೂವರಿಗೆ ಸೀಮಿತಗೊಳ್ಳುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಹೊಸ ಅಧ್ಯಯನ ತಿಳಿಸಿದೆ. ಕೊರೊನಾದಿಂದ ಬಚಾವಾಗಲು ಸಾಮಾಜಿಕ ಅಂತರದ ಅಗತ್ಯವನ್ನು ಈ ಅಧ್ಯನ ಪುನರುಚ್ಛರಿಸಿದೆ.
ಕೊರೊನಾ ಮೀಟರ್
- ರಾಜ್ಯ: ಸೋಂಕು -175 ಸಾವು-04
- ದೇಶ: ಸೋಂಕು - 5035 ಸಾವು-143
- ವಿಶ್ವ: ಸೋಂಕು - 13,64,711 ಸಾವು- 76,449
ಕೊರೊನಾ ಹೈಲೈಟ್ಸ್
- ರಾಜ್ಯದಲ್ಲಿ ಮಂಗಳವಾರ ಪತ್ತೆಯಾದ ಹೊಸ 12 ಪ್ರಕರಣದಲ್ಲಿ8ಕ್ಕೆ ತಬ್ಲಿಘಿ ನಂಟು
- ದೇಶಾದ್ಯಂತ ಮಂಗಳವಾರ 325ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢ
- ಒಂದೇ ದಿನ ವಿವಿಧ ರಾಜ್ಯಗಳಲ್ಲಿ16 ಮಂದಿ ಸೋಂಕಿಗೆ ಬಲಿ
- ಅಮೆರಿಕದಲ್ಲಿ 11 ಸಾವಿರ ದಾಟಿದ ಕೊರೊನಾ ಸಾವಿನ ಸಂಖ್ಯೆ
- ಇಟಲಿ, ಸ್ಪೇನ್ನಲ್ಲೂ ಮುಂದುವರಿದ ಮರಣ ಮೃದಂಗ, ಒಂದೇ ದಿನ 400ಕ್ಕೂ ಹೆಚ್ಚು ಬಲಿ
- ರಾಜ್ಯಗಳು, ತಜ್ಞರ ಮನವಿ ಬಗ್ಗೆ ಸರಕಾರ ಗಂಭೀರ ಚಿಂತನೆ
- ರಾಜ್ಯದಲ್ಲಿಇನ್ನೂ 12 ಹೊಸ ಪ್ರಕರಣ
- ದೇಶಾದ್ಯಂತ 5,000 ಗಡಿ ದಾಟಿದ ಸೋಂಕಿತರು
ಕೋವಿಡ್ ಡ್ಯಾಶ್ಬೋರ್ಡ್ ಆರಂಭ
ಸೋಂಕಿನ ಬಗ್ಗೆ ಅಧಿಕೃತ ಹಾಗೂ ಕ್ಷಣಕ್ಷಣದ ಮಾಹಿತಿ ತಲುಪಿಸಲು ರಾಜ್ಯ ಸರಕಾರ 'ಕೋವಿಡ್ -19 ಡ್ಯಾಶ್ಬೋರ್ಡ್' ಆರಂಭ ಮಾಡಿದೆ. covid19DashBoard.karnataka.gov.in ವಿಳಾಸದಲ್ಲಿ ಡ್ಯಾಶ್ಬೋರ್ಡ್ ಲಭ್ಯವಿದೆ.