ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ನಿರ್ಮಾಣ | 3,720 ಕೋಟಿ ರೂ. ವೆಚ್ಚ ದ ಹೈಟೆಕ್ ಟನಲ್
ಉಧಂಪುರ: ಕಾಶ್ಮೀರ ಕಣಿವೆಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ದೇಶದ ಅತಿದೊಡ್ಡ ರಸ್ತೆ ಸುರಂಗ ಮಾರ್ಗ ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ಸುರಂಗದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದ್ದು, ತಿಂಗಳಾಂತ್ಯಕ್ಕೆ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.
286 ಕಿ.ಮೀ ಉದ್ದದ ಜಮ್ಮು-ಶ್ರೀನಗರ ಚತುಷ್ಪತ ಹೆದ್ದಾರಿ ಯೋಜನೆಯ ಭಾಗವಾಗಿ ಹಿಮಾಲಯದ ಪರ್ವತ ಶ್ರೇಣಿಗಳನ್ನು ಹಾದುಹೋಗುವ ಉಧಂಪುರದ ಚೆನಾನಿ-ನಾಸ್ರಿ ಪಟ್ಟಣಗಳ ನಡುವೆ 9.2 ಕಿ.ಮೀ ಉದ್ದದ ಅವಳಿ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. 2011ರ ಮೇ 23ರಂದು ಈ ಯೋಜನೆಗೆ ಅಡಿಗಲ್ಲು ಹಾಕಲಾಗಿತ್ತು. ಒಟ್ಟು 3,720 ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು, ಇದೀಗ ಪೂರ್ಣಗೊಂಡಿದೆ.
ಸ್ವಯಂ ಚಾಲಿತ ವ್ಯವಸ್ಥೆ:
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಈ ಅವಳಿ ಸುರಂಗದಲ್ಲಿ ಅಳವಡಿಸಲಾಗಿರುವ ಫೈರ್ ಕಂಟ್ರೋಲ್, ಸಿಗ್ನಲ್, ಕಮ್ಯೂನಿಕೇಷನ್ ಮತ್ತು ಎಲೆಕ್ಟ್ರಿಕಲ್ ಸಿಸ್ಟಮ್ಗಳೆಲ್ಲವೂ ಸ್ವಯಂ ಚಾಲಿತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಪ್ರತಿ 75 ಮೀಟರ್ಗೆ ಒಂದರಂತೆ 124 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುರಕ್ಷಿತ ಪಯಣಕ್ಕೆ ಆದ್ಯತೆ ಕೊಡಲಾಗಿದ್ದು, ವೇಗದ ಮಿತಿಯನ್ನು ಗಂಟೆಗೆ ಗರಿಷ್ಠ 50 ಕಿ.ಮೀ ನಿಗದಿಗೊಳಿಸಲಾಗಿದೆ.
ಸಮಯ ಉಳಿತಾಯ:
ಈ ಸುರಂಗ ಮಾರ್ಗದಿಂದ ಜಮ್ಮು ಮತ್ತು ಶ್ರೀನಗರ ಅವಧಿಯ ಪಯಣದ ಸಮಯದಲ್ಲಿ ಎರಡೂವರೆ ಗಂಟೆ ಉಳಿತಾಯವಾಗಲಿದೆ. ಚೆನಾನಿ ಮತ್ತು ನಾಸ್ರಿ ನಡುವಿನ ಸದ್ಯದ ರಸ್ತೆ ಮಾರ್ಗ 41 ಕಿ.ಮೀ ಇದ್ದು, ಅದೀಗ 10.9 ಕಿ.ಮೀಗೆ ಇಳಿದಂತಾಗಿದೆ. ಸುರಂಗ ಮಾರ್ಗವು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ಬಳಿಕ, ಹೆದ್ದಾರಿಯಲ್ಲಿ ದಟ್ಟ ಮಂಜು, ಹಿಮಪಾತ, ಭೂಕುಸಿತದಿಂದ ಆಗಾಗ ತಲೆದೋರುತ್ತಿದ್ದ ಟ್ರಾಫಿಕ್ ಜಾಮ್ ಸಮಸ್ಯೆ ಬಹುತೇಕ ನೀಗಲಿದೆ ಎನ್ನುತ್ತಾರೆ ಯೋಜನಾ ನಿರ್ದೇಶಕ ಐಎಲ್ಅಂಡ್ಎಫ್ಎಸ್ ಸಂಸ್ಥೆಯ ಜೆ.ಎಸ್. ರಾಥೋಡ್.