ಆ್ಯಪ್ನಗರ

Covid Vaccine: ಕೋವಿಡ್ ಲಸಿಕೆಗೆ ಸಂಬಂಧಿಸಿದ ಸಾವಿಗೆ ನಾವು ಜವಾಬ್ದಾರಿ ಅಲ್ಲ; ಸುಪ್ರೀಂ ಕೋರ್ಟ್​ಗೆ ಕೇಂದ್ರದ ಸ್ಪಷ್ಟನೆ

ಕೋವಿಡ್‌ ಲಸಿಕೆಯಿಂದ ಉಂಟಾಗುವ ದುಷ್ಪರಿಣಾಮ ಹಾಗೂ ಸಾವುಗಳಿಗೆ ನಾವು ಜವಾಬ್ದಾರಿ ಅಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಲಸಿಕೆಗಳನ್ನು ಖಾಸಗಿ ಕಂಪನಿಗಳು ಉತ್ಪಾದಿಸುತ್ತಿವೆ ಎಂದು ತಿಳಿಸಿರುವ ಕೇಂದ್ರ, ಲಸಿಕೆ ತೆಗೆದುಕೊಳ್ಳಲು ಸಾರ್ವಜನಿಕರಿಗೆ ಯಾವುದೇ ಕಾನೂನಿನ ಒತ್ತಡ ಇಲ್ಲ ಎಂದು ಹೇಳಿದೆ.

Edited byಅವಿನಾಶ ವಗರನಾಳ | Vijaya Karnataka Web 29 Nov 2022, 5:35 pm

ಹೈಲೈಟ್ಸ್‌:


  • ಕೋವಿಡ್ ಲಸಿಕೆಗೆ ಸಂಬಂಧಿಸಿದ ಸಾವಿಗೆ ನಾವು ಜವಾಬ್ದಾರಿ ಅಲ್ಲ
  • ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರದ ಅಫಿಡವಿಟ್‌ ಸಲ್ಲಿಕೆ
  • ಲಸಿಕೆಗಳನ್ನು ಖಾಸಗಿ ಕಂಪನಿಗಳು ಉತ್ಪಾದಿಸುತ್ತಿವೆ ಎಂದ ಕೇಂದ್ರ ಸರ್ಕಾರ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Covid Vaccine
ಹೊಸದಿಲ್ಲಿ: ಕೋವಿಡ್‌ ಲಸಿಕೆಯಿಂದ (Covid Vaccine) ಉಂಟಾಗುವ ದುಷ್ಪರಿಣಾಮಗಳಿಗೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಲಸಿಕೆಗಳನ್ನು ಖಾಸಗಿ ಕಂಪನಿಗಳು ಉತ್ಪಾದಿಸುತ್ತಿದ್ದು, ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಗೊತ್ತಾದ ಬಳಿಕ ಅವುಗಳನ್ನು ಬಳಸಲಾಗಿದೆ ಎಂದು ಕೇಂದ್ರ ಸರ್ಕಾರ (Central Government) ಸುಪ್ರೀಂ ಕೋರ್ಟ್‌ಗೆ (Supreme Court of India) ತಿಳಿಸಿದೆ. ಅದಲ್ಲದೇ ಲಸಿಕೆ ತೆಗೆದುಕೊಳ್ಳಲು ಸಾರ್ವಜನಿಕರಿಗೆ ಯಾವುದೇ ರೀತಿಯ ಕಾನೂನಿನ ಒತ್ತಡವಿಲ್ಲ ಎಂದು ಕೇಂದ್ರ ಹೇಳಿದೆ.
ಒಂದು ವೇಳೆ ಕೋವಿಡ್‌ ಲಸಿಕೆಯಿಂದ ಸಾವು ಸಂಭವಿಸಿದರೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ಪರಿಹಾರ ಪಡೆಯುವುದೊಂದೇ ಪರಿಹಾರ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕಳೆದ ವರ್ಷ ಕೋವಿಡ್‌ ಲಸಿಕೆ ಹಾಕಿಸಿದ ಬಳಿಕ ಸಾವನ್ನಪ್ಪಿದ್ದ ಇಬ್ಬರು ಯುವತಿಯರ ಪೋಷಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಅಫಿಡವಿಟ್‌ ಸಲ್ಲಿಸಿದ್ದು, ಕೋವಿಡ್‌ ಲಸಿಕೆ ಸಂಬಂಧಿತ ಸಾವುಗಳಿಗೆ ಕೇಂದ್ರ ಸರ್ಕಾರ ಜವಾಬ್ದಾರಿ ಅಲ್ಲ ಎಂದು ತಿಳಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ಕೋವಿಡ್ ಲಸಿಕೆಗಳ ಬಳಕೆಯಿಂದ ಸಂಭವಿಸುವ ಸಾವುಗಳಿಗೆ ಪರಿಹಾರವನ್ನು ನೀಡಲು ರಾಜ್ಯ ಅಥವಾ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವುದು ಕಾನೂನು ಪ್ರಕಾರ ಸಮರ್ಥವಲ್ಲ ಎಂದು ಹೇಳಿತ್ತು. ಸಂವಿಧಾನದ 32ನೇ ವಿಧಿ ಪ್ರಕಾರ ಪರಿಹಾರ ಪಡೆಯಲು ಹಾಗೂ ಸರ್ಕಾರವನ್ನು ಮಕ್ಕಳ ಸಾವಿಗೆ ಹೊಣೆಗಾರರನ್ನಾಗಿ ಮಾಡಲು ಯಾವುದೇ ಸಮರ್ಥ ಕಾರಣಗಳಿಲ್ಲ ಎಂದು ಸಚಿವಾಲಯ ಹೇಳಿದೆ.

ಇನ್ನು, ಕೋವಿಡ್‌ ಲಸಿಕೆಗಳನ್ನು ಲಸಿಕಾಕರಣ ಯೋಜನೆಯಡಿ ಖಾಸಗಿ ಕಂಪನಿಗಳು ಉತ್ಪಾದಿಸಿವೆ. ಅಲ್ಲಿ ಉತ್ಪಾದನೆಯಾದ ಲಸಿಕೆಗಳನ್ನು ಪರೀಕ್ಷಿಸಿಯೇ ಬಳಸಲಾಗಿದ್ದು, ಅವುಗಳು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಗೊತ್ತಾದ ಬಳಿಕ ಬಳಸಲಾಗಿದೆ. ಭಾರತ ಸೇರಿ ಜಗತ್ತಿನ ಇತರ ದೇಶಗಳು ಕೂಡ ಇದೇ ರೀತಿ ಲಸಿಕೆಯನ್ನು ಬಳಸಿವೆ ಎಂದು ಸಚಿವಾಲಯ ತಿಳಿಸಿದೆ.

Covid 19: ಕೋವಿಡ್ ಬೂಸ್ಟರ್ ಲಸಿಕೆಗೂ ಹೃದಯ ಸಮಸ್ಯೆಗೂ ಸಂಬಂಧವಿಲ್ಲ: ಪರಿಣತರ ಹೇಳಿಕೆ
2022ರ ನವೆಂಬರ್ 19ರವರೆಗೆ ದೇಶದಲ್ಲಿ ನೀಡಲಾದ ಕೋವಿಡ್ 19 ಲಸಿಕೆಗಳ 219.86 ಕೋಟಿ ಡೋಸ್‌ಗಳಲ್ಲಿ 92,114 ಎಇಎಫ್‌ಐಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯಯವೂ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ. ಮೊದಲ ಅರ್ಜಿದಾರರಾದ ರಚನಾ ಗಂಗೂ ಅವರ ಮಗಳು 2021ರ ಮೇ 29ರಂದು ಕೋವಿಶೀಲ್ಡ್ನ ಮೊದಲ ಡೋಸ್ ಪಡೆದಿದ್ದರು. ಲಸಿಕೆ ಪಡೆದು 20 ದಿನಗಳಲ್ಲಿಯೇ ಅಂದರೇ 2021 ಜೂನ್ 19ರಂದು ನಿಧನರಾಗಿದ್ದರು.

200 Crore Covid Jab: 200 ಕೋಟಿ ಡೋಸ್ ಲಸಿಕೆ ಮೈಲುಗಲ್ಲು ದಾಟಿದ ಭಾರತ
ಮತ್ತೊಬ್ಬ ಅರ್ಜಿದಾರರಾದ ವೇಣುಗೋಪಾಲನ್ ಗೋವಿಂದನ್ ಅವರ ಮಗಳು ಎಂಎಸ್ಸಿ ವಿದ್ಯಾರ್ಥಿನಿಯಾಗಿದ್ದು, 2021ರ ಜೂನ್ 18ರಂದು ಕೋವಿಶೀಲ್ಡ್ನ ಮೊದಲ ಡೋಸ್ ಪಡೆದಿದ್ದರು. ಅದಾಗಿ 22 ದಿನಗಳಲ್ಲಿ ಅಂದರೇ ಜುಲೈ 10ರಂದು ಅವರು ಕೂಡ ಸಾವನ್ನಪ್ಪಿದ್ದರು. ಮೊದಲ ಅರ್ಜಿದಾರರ ಮಗಳಿಗೆ ಥ್ರಂಬೋಸಿಸ್ ಮತ್ತು ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಇತ್ತು ಎಂದು ಸಚಿವಾಲಯ ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ