ಆ್ಯಪ್ನಗರ

ರಮ್ಜಾನ್ ಉಪವಾಸ ಮುರಿದು ಕ್ಯಾನ್ಸರ್ ರೋಗಿಗೆ ರಕ್ತ ನೀಡಿದ ಭಾರತೀಯ ಯೋಧರು

ಕಾಶ್ಮೀರ ಕಣಿವೆಯ ಸೈನಿಕರು ಕೇವಲ ಗಡಿ ರಕ್ಷಣೆಗಷ್ಟೇ ಸೀಮಿತರಲ್ಲ, ಅವರು ಸ್ಥಳೀಯರ ಜೀವ ರಕ್ಷಣೆಗೂ ಬದ್ಧರು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

Vijaya Karnataka 15 Jun 2018, 9:30 am
ಶ್ರೀನಗರ್‌: ಕಾಶ್ಮೀರ ಕಣಿವೆಯ ಸೈನಿಕರು ಕೇವಲ ಗಡಿ ರಕ್ಷಣೆಗಷ್ಟೇ ಸೀಮಿತರಲ್ಲ, ಅವರು ಸ್ಥಳೀಯರ ಜೀವ ರಕ್ಷಣೆಗೂ ಬದ್ಧರು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇಬ್ಬರು ಸಿಆರ್‌ಪಿಎಫ್‌ ಯೋಧರು ಗುರುವಾರ ತಮ್ಮ ಕರ್ತವ್ಯ ವ್ಯಾಪ್ತಿಯನ್ನು ಮೀರಿ, ರಂಜಾನ್‌ ಉಪವಾಸವನ್ನೂ ಮುರಿದು ರಕ್ತದಾನ ಮಾಡಿದ್ದಾರೆ. ಸ್ಥಳೀಯರಿಗೆ ಸಹಾಯ ಮಾಡುವ ಭದ್ರತಾ ಪಡೆಗಳ ಮದದ್‌ಗಾರ್‌ ಯೋಜನೆಯಡಿ ಅವರು ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆಗೆ ರಕ್ತ ನೀಡಿದರು.
Vijaya Karnataka Web IA


ಸಿಆರ್‌ಪಿಎಫ್‌ನ ಮದದ್‌ಗಾರ್‌ ಹೆಲ್ಪ್‌ ಲೈನ್‌ಗೆ ಕೆಲವು ದಿನಗಳ ಹಿಂದೆ ಕಿಷ್ತ್ವಾರ ನಿವಾಸಿ ಅನಿಲ್‌ ಸಿಂಗ್‌ ಎಂಬವರಿಂದ ಕರೆ ಬಂದಿತ್ತು. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸೋದರಿ ಪೂಜಾ ದೇವಿ ಅವರಿಗೆ ರಕ್ತ ಪಡೆಯಲು ಸಹಕರಿಸಬೇಕು ಎಂದು ಕೋರಿದ್ದರು. ಒಟ್ಟು ಆರು ಯುನಿಟ್‌ ರಕ್ತ ಬೇಕಾಗಿದೆ, ಇದರಲ್ಲಿ ಎರಡು ಯುನಿಟ್‌ ಕುಟುಂಬಿಕರಿಂದ ದೊರೆತಿದೆ. ನಾಲ್ಕು ಯುನಿಟ್‌ ಬೇಕಾಗಿದೆ ಎಂದು ಅವರು ಹೇಳಿದ್ದರು.

ಈ ಹಂತದಲ್ಲಿ ಶ್ರೀನಗರದಲ್ಲಿ ನಿಯೋಜನೆಗೊಂಡಿದ್ದ ಸಿಆರ್‌ಪಿಎಫ್‌ನ ನಾಲ್ವರು ಸೈನಿಕರಾದ ಎಸ್‌ಐ ಸಂಜಯ್‌ ಪಾಸ್ವಾನ್‌ ಮತ್ತು ಕಾನ್‌ಸ್ಟೇಬಲ್‌ಗಳಾದ ರಾಮ್‌ ನಿವಾಸ್‌, ಮುದಸಿರ್‌ ರಸೂಲ್‌ ಭಟ್‌ ಮತ್ತು ಮೊಹಮ್ಮದ್‌ ಅಸ್ಲಾಂ ಮೀರ್‌ ರಕ್ತ ಕೊಡಲು ಮುಂದಾದರು. ಇವರಲ್ಲಿ ಭಟ್‌ ಮತ್ತು ಮೀರ್‌ ರಂಜಾನ್‌ ಉಪವಾಸ ಆಚರಿಸುತ್ತಿದ್ದರೂ ರಕ್ತ ನೀಡುವುದಕ್ಕಾಗಿ ಅದನ್ನು ಮುರಿದರು.

ಕೆಲವು ವಾರದ ನವಜಾತ ಶಿಶುವೊಂದು ಮೆದುಳಿನಲ್ಲಿ ನೀರು ತುಂಬುವ ಸಮಸ್ಯೆ ಎದುರಿಸುತ್ತಿರುವುದನ್ನು ಆಶಿಕ್‌ ಹುಸೇನ್‌ ಎಂಬವರು ಸಹಾಯವಾಣಿಗೆ ವಿವರಿಸಿದ್ದರು. ಸಿಆರ್‌ಪಿಎಫ್‌ ತಕ್ಷಣ ಸ್ಪಂದಿಸಿ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಕೊಡಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ