ವಿಶಾಖಪಟ್ಟಣಂ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ 'ಕ್ಯಾಂತ್' ಚಂಡಮಾರುತ ಅ.29ರಂದು ಆಂಧ್ರ ಮತ್ತು ಒಡಿಶಾ ರಾಜ್ಯಗಳ ತೀರ ಪ್ರದೇಶಕ್ಕೆ ಅಪ್ಪಳಿಸಲಿದ್ದು, ಕರಾವಳಿ ಭಾಗದಲ್ಲಿ ದೀಪಾವಳಿ ಸಂಭ್ರಮವನ್ನು ತೋಯಿಸಿಹಾಕುವ ಸಾಧ್ಯತೆಯಿದೆ.
ವಿಶಾಖಪಟ್ಟಣಂನಿಂದ 620 ಕಿ.ಮೀ ದೂರದ ಆಗ್ನೇಯ ಭಾಗದಲ್ಲಿರುವ ಗೋಪಾಲಪುರದಲ್ಲಿ ಚಂಡಮಾರುತ ನೆಲೆಸಿದ್ದು, ಮುಂದಿನ 48 ಗಂಟೆಗಳವರೆಗೂ ಅದರ ತೀವ್ರತೆ ಬಗ್ಗೆ ಕರಾರುವಕ್ಕಾಗಿ ಅಂದಾಜು ಮಾಡಲು ಸಾಧ್ಯವಿಲ್ಲ. ಇದು ಆಂಧ್ರದ ಉತ್ತರ ತೀರ ಪ್ರದೇಶದತ್ತ ಸಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗಂಟೆಗೆ 45ರಿಂದ 50 ಕಿ.ಮೀ. ವೇಗದ ಸುಳಿಗಾಳಿಯನ್ನು ಚಂಡಮಾರುತ ಸೃಷ್ಟಿಸಲಿದೆ. ವಿಶಾಖಪಟ್ಟಣಂ, ಶ್ರೀಕಾಕುಳಂ, ಪುರಿ, ಗಜಪತಿ, ಗಾಂಜಂ, ಗೋಪಾಲ್ಪುರ್, ಪೂರ್ವ ಗೋದಾವರಿ ಸೇರಿದಂತೆ ಹಲವು ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗುವ ಸಾಧ್ಯತೆಯಿದೆ.
ಚಂಡಮಾರುತದ ಪ್ರಭಾವದಿಂದ ಎರಡೂ ರಾಜ್ಯಗಳ ತೀರ ಪ್ರದೇಶಗಳಲ್ಲಿ ಗುರುವಾರ ಮತ್ತು ಶುಕ್ರವಾರವೂ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಒಡಿಶಾದ 14 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಮುದ್ರದಲ್ಲಿ ಭಾರಿ ಅಲೆಗಳ ಹಿನ್ನೆಲೆಯಲ್ಲಿ, ಈ ವಾರ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.