ಆ್ಯಪ್ನಗರ

ರಾಜ್ಯಕ್ಕೂ ಓಖೀ ಹೊಡೆತ

ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಅಬ್ಬರಿಸುತ್ತಿರುವ ಓಖೀ ಚಂಡಮಾರುತ ತಮಿಳುನಾಡು ...

Vi.Ka. Suddiloka 2 Dec 2017, 5:01 am

ಬೆಂಗಳೂರು

ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಅಬ್ಬರಿಸುತ್ತಿರುವ ಓಖೀ ಚಂಡಮಾರುತ ತಮಿಳುನಾಡು ಮತ್ತು ಕೇರಳದಲ್ಲಿ 12 ಮಂದಿಯನ್ನು ಬಲಿ ಪಡೆದು ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿರುವ ನಡುವೆಯೇ ರಾಜ್ಯವೂ ತೂಫಾನ್‌ ಹೊಡೆತ ಅನುಭವಿಸಿದೆ.

ಚಂಡಮಾರುತದ ಪರಿಣಾಮವಾಗಿ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಶುಕ್ರವಾರ ಮಳೆಗಾಲದ ವಾತಾವರಣ ಸೃಷ್ಟಿಯಾಗಿತ್ತು. ನಿರಂತರವಾಗಿ ಸುರಿದ ತುಂತುರು ಮಳೆ ಕಾಫಿ, ಭತ್ತ ಮೊದಲಾದ ಬೆಳೆಗಳಿಗೆ ಹಾನಿಯುಂಟು ಮಾಡುವ ಭೀತಿ ಎದುರಾಗಿದೆ. ಈ ನಡುವೆ, ಕರ್ನಾಟಕ ಕರಾವಳಿಯಲ್ಲಿ ಮುಂದಿನ ಎರಡು ದಿನ ಭಾರಿ ಗಾಳಿ ಬೀಸುವ ಸಾಧ್ಯತೆಗಳಿದ್ದು, ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಶುಕ್ರವಾರ ಸಂಜೆಯ ಹೊತ್ತಿಗೆ ಚಂಡಮಾರುತ ಲಕ್ಷದ್ವೀಪದ ಮೇಲೆ ಅಪ್ಪಳಿಸಿದ್ದು ಅಲ್ಲಿ ಭಾರಿ ಅನಾಹುತಗಳನ್ನು ಸೃಷ್ಟಿಸಿದೆ. ಇದು ಲಕ್ಷದ್ವೀಪಕ್ಕೆ ಸಮೀಪದಲ್ಲಿರುವ ಕರ್ನಾಟಕದ ಕರಾವಳಿಯ ಮೇಲೂ ಪರಿಣಾಮ ಬೀರಿದ್ದು ಕಡಲು ಪ್ರಕ್ಷುಬ್ದಗೊಂಡಿದೆ.

ಭಾರೀ ಗಾಳಿ: ಗಂಟೆಗೆ 45-55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರಿಂದ ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಲಿದೆ. ಹೀಗಾಗಿ ಮೀನುಗಾರರು 48 ಗಂಟೆಗಳವೆರೆಗೆ ಸಮುದ್ರಕ್ಕಿಳಿಯಬಾರದು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಕೂಡಾ ಎಚ್ಚರಿಕೆ ವಹಿಸಬೇಕು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಹೊನ್ನಾವರ, ಕಾರವಾರ, ಶಿರಾಲಿ, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ ಪ್ರದೇಶಗಳ ಜನರು ಎಚ್ಚರಿಕೆ ವಹಿಸಬೇಕು. ಹಾಗೆಯೇ ಈ ಭಾಗದಲ್ಲಿನ ಸಮುದ್ರ ತೀರದಿಂದ ದೂರವಿರಬೇಕು ಎಂದು ಸೂಚಿಸಲಾಗಿದೆ.

ತುಂತುರು ಮಳೆ

ಚಂಡಮಾರುತ ಪರಿಣಾಮದಿಂದ ಸದ್ಯಕ್ಕೆ ತುಂತುರು ಮಳೆ ಬರುತ್ತಿದ್ದು, ಇನ್ನೂ ಎರಡು ದಿನಗಳವರೆಗೆ ಇದು ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರದ ಬಹುತೇಕ ಪ್ರದೇಶಗಳಲ್ಲಿ ತುಂತುರು ಮಳೆ ಸುರಿದಿದೆ. ಈ ಪ್ರದೇಶಗಳಲ್ಲಿ ಶುಕ್ರವಾರವಿಡೀ ಮೋಡ ಕವಿದ ವಾತಾವರಣವಿದ್ದು, ಬಹುತೇಕ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ಮಳೆಯ ಸಿಂಚನವಾಯಿತು. ಶನಿವಾರದಿಂದ ಕರಾವಳಿ ಭಾಗದ ಪ್ರದೇಶಗಳು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಪ್ರದೇಶಗಳಿಗೆ ಚಂಡಮಾರುತದ ಪರಿಣಾಮವಾಗಿಲ್ಲ.

''ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಎರಡು ದಿನ ತುಂತುರು ಮಳೆಯಾಗಲಿದೆ. ಜತೆಗೆ ಜೋರಾದ ಗಾಳಿ ಬೀಸಲಿದೆ. ಆದರೆ ತಮಿಳುನಾಡು ಹಾಗೂ ಕೇರಳದಲ್ಲಾದಂತೆ ರಾಜ್ಯದಲ್ಲಿ ಹೆಚ್ಚಿನ ಪರಿಣಾಮವಾಗುವ ಸೂಚನೆಯಿಲ್ಲ. ಆದರೂ ಕರಾವಳಿ ಭಾಗದಲ್ಲಿ ಎಚ್ಚರಿಕೆ ವಹಿಸಬೇಕು,'' ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ (ಮಿ.ಮೀ.)

ಕೋಲಾರ- 17.4

ಬೆಂಗಳೂರು ನಗರ-11.5

ಬೆಂಗಳೂರು ಗ್ರಾಮಾಂತರ-7.1

ಚಾಮರಾಜನಗರ- 6.4

ರಾಮನಗರ-4

Vijaya Karnataka Web cyclone ockhi beings rain to karnataka
ರಾಜ್ಯಕ್ಕೂ ಓಖೀ ಹೊಡೆತ

---

ಕರಾವಳಿ ಪ್ರದೇಶಗಳಲ್ಲಿ ಎರಡು ದಿನ ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಸೂಚನೆ ನೀಡಲಾಗಿದೆ. ದಕ್ಷಿಣ ಒಳನಾಡಿಗೂ ಚಂಡಮಾರುತದ ಪರಿಣಾಮ ತಟ್ಟಿದೆ. ಈ ಭಾಗದಲ್ಲಿ ಎರಡು ದಿನ ತುಂತುರು ಮಳೆ ಸುರಿಯಲಿದೆ.

-ಸುಂದರ್‌ ಮೇತ್ರಿ, ನಿರ್ದೇಶಕ, ಹವಾಮಾನ ಇಲಾಖೆ

ವಾಯುಭಾರ ಕುಸಿತದಿಂದ ತುಂತುರು ಮಳೆ ಒಂದೆರಡು ದಿನ ಬಿದ್ದರೆ ಬೆಳೆಗಳಿಗೆ ತೊಂದರೆ ಇಲ್ಲ. ಕಟಾವು ಮಾಡಿದ ಬೆಳೆಯನ್ನು ಸಂಗ್ರಹಿಸಿ ಒಣಗಿಸಿದ್ದಲ್ಲಿ ಸಮಸ್ಯೆಯಾಗದು. ಒಂದು ವಾರ ಕಾಲ ಗಾಳಿ, ಮಳೆ ಮುಂದುವರಿದರೆ ಮಾತ್ರ ಬಿತ್ತನೆ ಬೆಳೆಗಳಿಗೆ ಸಮಸ್ಯೆಯಾಗಬಹುದು. ಈ ಕುರಿತು ರೈತರು ಜಾಗ್ರತೆ ವಹಿಸಲಿ.

- ಡಾ.ಎಸ್‌. ರಾಜೇಂದ್ರಪ್ರಸಾದ್‌, ಡೀನ್‌, ಬೆಂಗಳೂರು ಕೃಷಿ ವಿವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ