ಆ್ಯಪ್ನಗರ

ಗಣರಾಜ್ಯೋತ್ಸವದ ದಿನ ರೈತರ ಟ್ರ್ಯಾಕ್ಟರ್‌ ರ‍್ಯಾಲಿ ಬಗ್ಗೆ ದಿಲ್ಲಿ ಪೊಲೀಸರು ನಿರ್ಧರಿಸಲಿದ್ದಾರೆ - ಸುಪ್ರೀಂ ಕೋರ್ಟ್

ಟ್ರ್ಯಾಕ್ಟರ್‌ ರ‍್ಯಾಲಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ದಿಲ್ಲಿ ಪೊಲೀಸರು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, 'ಇದನ್ನು ದಿಲ್ಲಿ ಪೊಲೀಸರೇ ನಿರ್ಧರಿಸಬೇಕು; ನಾವಲ್ಲ' ಎಂದು ಸ್ಪಷ್ಟಪಡಿಸಿದೆ.

Agencies 18 Jan 2021, 5:53 pm

ಹೊಸದಿಲ್ಲಿ: ಗಣರಾಜ್ಯೋತ್ಸವದ ದಿನ ದಿಲ್ಲಿಯಲ್ಲಿ ಟ್ರ್ಯಾಕ್ಟರ್‌ ರ‍್ಯಾಲಿ ನಡೆಸಲು ರೈತರು ಉದ್ದೇಶಿಸಿದ್ದು, ಈ ರ‍್ಯಾಲಿಗೆ ಅನುಮತಿ ನೀಡುವುದು ಅಥವಾ ನೀಡದೇ ಇರುವ ನಿರ್ಧಾರ ದಿಲ್ಲಿ ಪೊಲೀಸರಿಗೆ ಬಿಟ್ಟಿದ್ದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಸ್ಪಷ್ಟಪಡಿಸಿದೆ.
Vijaya Karnataka Web India Farmer Protest


ಟ್ರ್ಯಾಕ್ಟರ್‌ ರ‍್ಯಾಲಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ದಿಲ್ಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, 'ಇದನ್ನು ದಿಲ್ಲಿ ಪೊಲೀಸರೇ ನಿರ್ಧರಿಸಬೇಕು; ನಾವಲ್ಲ' ಎಂದು ಹೇಳಿದೆ.

“ರೈತರು ದಿಲ್ಲಿ ಪ್ರವೇಶಿಸಬೇಕೇ ಎಂಬುದನ್ನು ದಿಲ್ಲಿ ಪೊಲೀಸರು ನಿರ್ಧರಿಸಬೇಕು ಹಾಗೂ ಎಷ್ಟು ಜನ ಯಾವ ಷರತ್ತಿನ ಮೇಲೆ ಎಂಬುದನ್ನೂ ಅವರೇ ನಿರ್ಧರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಗಣರಾಜ್ಯೋತ್ಸವ ಸಂದರ್ಭದಲ್ಲಿ ಮುಜುಗರಕ್ಕೀಡಾಗುವುದನ್ನು ತಪ್ಪಿಸಲು ದಿಲ್ಲಿ ಪ್ರವೇಶಿಸದಂತೆ ರೈತರನ್ನು ತಡೆಯುವಂತೆ ಸುಪ್ರೀಂ ಕೋರ್ಟ್‌ಗೆ ಅಟಾರ್ನಿ ಜನರಲ್‌ ಕೆಕೆ ವೇಣುಗೋಪಾಲ್‌ ಹಾಗೂ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ನ್ಯಾಯಾಲಯ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಇರುವ ಅಧಿಕಾರದ ಬಗ್ಗೆ ನಾವು ಕೇಂದ್ರ ಸರಕಾರಕ್ಕೆ ಹೇಳಬೇಕಿಲ್ಲ ಎಂದು ಹೇಳಿತು.

ಗಣರಾಜ್ಯೋತ್ಸವದಂದು ದಿಲ್ಲಿಯಲ್ಲಿ ರೈತರಿಂದ ಟ್ರಾಕ್ಟರ್ ರ‍್ಯಾಲಿ..! ಪೂರ್ವಾಭ್ಯಾಸ ಶುರು..

ಸುಪ್ರೀಂ ಕೋರ್ಟ್‌ ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವುದರಿಂದ ಕೇಂದ್ರ ಸರಕಾರ ಈ ಮನವಿ ಮಾಡಿಕೊಳ್ಳುತ್ತಿದೆ ಎಂದು ವೇಣುಗೋಪಾಲ್‌ ಹೇಳಿದ್ದಕ್ಕೆ, ಉತ್ತರಿಸಿದ ಸಿಜೆಐ, "ನಾವು ಒಂದು ವಿಷಯವನ್ನು ಮಾತ್ರ ಕೈಗೆತ್ತಿಕೊಂಡಿದ್ದೇವೆ. ನಮ್ಮ ಮಧ್ಯ ಪ್ರವೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ," ಎಂದು ಹೇಳಿದರು.

ಮೂರು ಕೃಷಿ ಕಾಯಿದೆಗಳ ಸಂಬಂಧ ಸಮಾಲೋಚನೆಗೆ ಸಮಿತಿ ರಚಿಸುವ ಪ್ರಸ್ತಾವಕ್ಕೆ ಸಂಬಂಧಪಟ್ಟ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಬುಧವಾರಕ್ಕೆ ಮುಂದೂಡಿತು. ಸುಪ್ರೀಂ ಕೋರ್ಟ್‌ ಜನವರಿ 14ರಂದು ನೇಮಿಸಿದ್ದ ನಾಲ್ಕು ಸದಸ್ಯರ ಸಮಿತಿಯಿಂದ ಭೂಪಿಂದರ್‌ ಸಿಂಗ್‌ ಮನ್‌ ಹೊರಬಂದಿದ್ದು, ಅವರ ಸ್ಥಾನಕ್ಕೆ ಹೊಸಬರನ್ನು ನೇಮಿಸುವ ಬಗ್ಗೆಯೂ ನ್ಯಾಯಾಲಯ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

ಈ ಹಿಂದೆ ಕೇಂದ್ರ ಸರಕಾರ ಗಣರಾಜ್ಯೋತ್ಸವ ಪೆರೇಡ್‌ಗೆ ಅಡ್ಡಿಪಡಿಸಲು ಯತ್ನಿಸುವ ಅಥವಾ ಅಡ್ಡಿಪಡಿಸುವ ಘಟನೆಗಳು ದೇಶಕ್ಕೆ ಮುಜುಗರ ಉಂಟು ಮಾಡಲಿದೆ ಎಂದು ಹೇಳಿ ದಿಲ್ಲಿ ಪೊಲೀಸರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಜನವರಿ 12ರಂದು ಸರ್ವೋಚ್ಚ ನ್ಯಾಯಾಲಯ ಇದರ ವಿಚಾರಣೆಗೆ ಸಮ್ಮತಿ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ