ಆ್ಯಪ್ನಗರ

ದಿಲ್ಲಿ ಗಲಭೆ: ಪೊಲೀಸರಿಂದ 17,500 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ, 15 ಮಂದಿ ವಿರುದ್ಧ ಗಂಭೀರ ಆರೋಪ

ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಚಾರ್ಜ್‌ಶೀಟ್‌ನಲ್ಲಿಒಟ್ಟು 15 ಮಂದಿ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದ್ದು, ಎಲ್ಲರೂ ಸಿಎಎ ವಿರೋಧಿ ಹೋರಾಟದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.

Agencies 17 Sep 2020, 12:27 am
ಹೊಸದಿಲ್ಲಿ: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ ) ಜಾರಿ ವಿರೋಧಿಸಿ ಕಳೆದ ಫೆಬ್ರವರಿಯಲ್ಲಿ ನಡೆದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರ ವಿಶೇಷ ತಂಡ 17,500 ಪುಟಗಳ ವಿಸ್ತೃತ ಆರೋಪಪಟ್ಟಿಯನ್ನು ಬುಧವಾರ ಕೋರ್ಟ್‌ಗೆ ಸಲ್ಲಿಸಿದೆ.
Vijaya Karnataka Web delhi riots (1)


ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಚಾರ್ಜ್‌ಶೀಟ್‌ನಲ್ಲಿಒಟ್ಟು 15 ಮಂದಿ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ. ಉಚ್ಚಾಟಿತ ಆಮ್‌ ಆದ್ಮಿ ಪಕ್ಷದ ಪಾಲಿಕೆ ಸದಸ್ಯ ತಾಹಿರ್‌ ಹುಸೇನ್‌ ಸೇರಿದಂತೆ ಇವರೆಲ್ಲರೂ ಕೋಮು ಪ್ರಚೋದನಾಕಾರಿ ಹೇಳಿಕೆಗಳನ್ನು, ಘೋಷಣೆಗಳನ್ನು ಕೂಗಿದ್ದಲ್ಲದೆ ಜನರು ದಂಗೆ ಏಳಲು ಪ್ರಚೋದನೆ ನೀಡಿದ್ದರು ಎಂದು ಸಾಕ್ಷ್ಯಗಳ ಸಮೇತ ಪೊಲೀಸರು ಆರೋಪಿಸಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ), ಐಪಿಸಿ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳು ಹಿಂಸಾಚಾರ ಪ್ರಚೋದಿಸಲು ಸಂವಹನ ನಡೆಸಿದ ವಾಟ್ಸ್‌ಆ್ಯಪ್‌ ಚಾಟ್‌ಗಳು ಮತ್ತು ಕರೆಗಳ ದಾಖಲೆಗಳನ್ನು ಕೂಡ ಕೋರ್ಟ್‌ಗೆ ಪೊಲೀಸರು ಸಲ್ಲಿಕೆ ಮಾಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ಪ್ರಚೋದಿಸಲೆಂದು ಆರೋಪಿಗಳು 25 ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

751 ಪ್ರಕರಣಗಳು, 53 ಸಾವು

ಹಿಂಸಾಚಾರ ಸಂಬಂಧ ದಿಲ್ಲಿ ಪೊಲೀಸರ ಕಂಟ್ರೋಲ್‌ ರೂಮ್‌ಗೆ ಒಟ್ಟು 16,000 ಕರೆಗಳು ಬಂದಿದ್ದವು. ಕರೆ ಮಾಹಿತಿ ಮತ್ತು ಇತರೆ ದಾಖಲೆಗಳನ್ನು ಆಧರಿಸಿ ಒಟ್ಟು 751 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು. ಆ ಪೈಕಿ 59 ಪ್ರಕರಣಗಳನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಿ 691 ಪ್ರಕರಣಗಳನ್ನು ದಿಲ್ಲಿಯ ಜಿಲ್ಲಾ ಪೊಲೀಸರು ತನಿಖೆಗೆ ಕೈಗೆತ್ತಿಕೊಂಡಿದ್ದರು.

ತನಿಖೆ ವೇಳೆ ಪೊಲೀಸರು 12 ಪಿಸ್ತೂಲ್‌ಗಳನ್ನು, 92 ಸುತ್ತು ಗುಂಡುಗಳನ್ನು, ರಾಸಾಯನಿಕಗಳಿಂದ ತುಂಬಿದ 61 ಗಾಜಿನ ಬಾಟಲಿಗಳನ್ನು , 75 ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಪಡಿಸಿಕೊಂಡಿದ್ದರು. 747 ಸಾಕ್ಷ್ಯಗಳ ವಿಚಾರಣೆ ನಡೆಸಿದ್ದ ಎಸ್‌ಐಟಿ ತಂಡ ಮೊದಲ ಹಂತದ ತನಿಖೆ ಪೂರ್ಣಗೊಳಿಸಲು 195 ದಿನಗಳನ್ನು ತೆಗೆದುಕೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ