ಆ್ಯಪ್ನಗರ

ತಲ್ವಾರ್‌ ದಂಪತಿಯಿಂದ ಕೈದಿಗಳ ದಂತ ಸೇವೆ

ಮಗಳು ಆರುಷಿ ಹಾಗೂ ಮನೆ ಕೆಲಸದಾಳು ಹೇಮರಾಜ್‌ ಕೊಲೆ ಪ್ರಕರಣದಲ್ಲಿ ಅಲಹಾಬಾದ್‌ ಕೋರ್ಟ್‌ನಿಂದ ಖುಲಾಸೆಗೊಂಡಿರುವ ರಾಜೇಶ್‌ ಮತ್ತು ನೂಪುರ್‌ ತಲ್ವಾರ್‌ ವೈದ್ಯ ದಂಪತಿ ಜೈಲಿನಿಂದ ...

Agencies 16 Oct 2017, 5:00 am

ದಾಸ್ನಾ (ಉತ್ತರ ಪ್ರದೇಶ): ಮಗಳು ಆರುಷಿ ಹಾಗೂ ಮನೆ ಕೆಲಸದಾಳು ಹೇಮರಾಜ್‌ ಕೊಲೆ ಪ್ರಕರಣದಲ್ಲಿ ಅಲಹಾಬಾದ್‌ ಕೋರ್ಟ್‌ನಿಂದ ಖುಲಾಸೆಗೊಂಡಿರುವ ರಾಜೇಶ್‌ ಮತ್ತು ನೂಪುರ್‌ ತಲ್ವಾರ್‌ ವೈದ್ಯ ದಂಪತಿ ಜೈಲಿನಿಂದ ಬಿಡುಗಡೆಯಾದ ಬಳಿಕ ಪ್ರತಿ 15 ದಿನಗಳಿಗೊಮ್ಮೆ ದಾಸ್ನಾ ಜೈಲಿಗೆ ತೆರಳಿ ದಂತ ಸಮಸ್ಯೆಗೊಳಗಾಗಿರುವ ಕೈದಿಗಳ ಯೋಗ ಕ್ಷೇಮ ನೋಡಿಕೊಳ್ಳಲಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೊಳಗಾಗಿದ್ದ ತಲ್ವಾರ್‌ ದಂಪತಿ 2013ರಿಂದಲೂ ಗಾಜಿಯಾಬಾದ್‌ನ ದಾಸ್ನಾ ಜೈಲಿನಲ್ಲಿದ್ದರು. ಇಬ್ಬರೂ ಸೋಮವಾರ ಬಂಧಮುಕ್ತರಾಗುವ ಸಾಧ್ಯತೆಗಳಿವೆ.

ಜೈಲಿನ ಆಸ್ಪತ್ರೆಯಲ್ಲಿ ಹೆಚ್ಚೂ ಕಡಿಮೆ ನಿಷ್ಕ್ರಿಯ ಸ್ಥಿತಿ ತಲುಪಿದ್ದ ದಂತ ಚಿಕಿತ್ಸಾ ವಿಭಾಗವನ್ನು ಪುನರುಜ್ಜೀವನಗೊಳಿಸುವಲ್ಲಿ ದಂತವೈದ್ಯ ದಂಪತಿ ನೆರವಾಗಿದ್ದು ವಿಶೇಷ.

''ತಲ್ವಾರ್‌ ದಂಪತಿ ಬಿಡುಗಡೆ ಬಳಿಕ ನಮ್ಮ ದಂತ ಚಿಕಿತ್ಸಾ ವಿಭಾಗದ ಭವಿಷ್ಯದ ಬಗ್ಗೆ ಕಳವಳಗೊಂಡಿದ್ದೆವು. ಆದರೆ, ಜೈಲಿನಿಂದ ಬಿಡುಗಡೆಯಾದ ನಂತರವೂ ಹಲ್ಲಿನ ಸಮಸ್ಯೆಗೊಳಗಾಗಿರುವ ಕೈದಿಗಳ ಯೋಗಕ್ಷೇಮ ನೋಡಿಕೊಳ್ಳಲು ಪ್ರತಿ 15 ದಿನಗಳಿಗೊಮ್ಮೆ ಜೈಲಿಗೆ ಭೇಟಿ ನೀಡುವುದಾಗಿ ಅವರು ನಮಗೆ ಭರವಸೆ ನೀಡಿದ್ದಾರೆ,'' ಎಂದು ಜೈಲಿನ ವೈದ್ಯ ಸುನಿಲ್‌ ತ್ಯಾಗಿ ತಿಳಿಸಿದ್ದಾರೆ.

ಕೈದಿಗಳಷ್ಟೇ ಅಲ್ಲದೆ, ಜೈಲಿನ ಸಿಬ್ಬಂದಿ, ಪೊಲೀಸ್‌ ಅಧಿಕಾರಿಗಳು ಹಾಗೂ ಅವರ ಮಕ್ಕಳ ಯೋಗಕ್ಷೇಮವನ್ನೂ ರಾಜೇಶ್‌ ಮತ್ತು ನೂಪುರ್‌ ತಲ್ವಾರ್‌ ನೋಡಿಕೊಳ್ಳುತ್ತಿದ್ದರು ಎಂಬುದಾಗಿ ತ್ಯಾಗಿ ಹೇಳಿದ್ದಾರೆ.

ದಂಪತಿ ಬೇಡಿಕೆ ಹೆಚ್ಚಿತ್ತು: ಅಲಹಾಬಾದ್‌ ಕೋರ್ಟ್‌ನಿಂದ ಖುಲಾಸೆಗೊಂಡ ಬೆನ್ನಹಿಂದೆಯೇ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ದಂಪತಿ ಬಳಿಗೆ ಬರುತ್ತಿದ್ದ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚತೊಡಗಿತ್ತು.

ದಿನೇಶ್‌ ತಲ್ವಾರ್‌ರಿಂದಲೂ ಸೇವೆ: ಇನ್ನು ಮುಂದೆ, ರಾಜೇಶ್‌ ತಲ್ವಾರ್‌ ಅವರ ಸಹೋದರ ನೇತ್ರ ವೈದ್ಯ ದಿನೇಶ್‌ ತಲ್ವಾರ್‌ ಕೂಡ ತಮ್ಮ ತಂಡದೊಂದಿಗೆ 15 ದಿನಗಳಿಗೊಮ್ಮೆ ದಾಸ್ನಾ ಜೈಲಿಗೆ ತೆರಳಿ ಕೈದಿಗಳ ಯೋಗಕ್ಷೇಮ ವಿಚಾರಿಸಿಕೊಳ್ಳಲಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ