ಹೊಸದಿಲ್ಲಿ: ಬ್ಯಾಂಕುಗಳಲ್ಲಿ ಲೆಕ್ಕಕ್ಕೆ ಸಿಗದ ಠೇವಣಿಗಳ ಮೇಲೆ ಕೇಂದ್ರ ಸರಕಾರ ದೊಡ್ಡ ತೆರಿಗೆ ಹೊರೆ ಹಾಕುವುದು ಬಹುತೇಕ ನಿಶ್ಚಿತ. ನೋಟು ರದ್ದತಿಯಂತಹ ನಿಷ್ಠುರ ನಿರ್ಧಾರ ಕೈಗೊಂಡಿರುವ ಮೋದಿ ಸರಕಾರ ಇನ್ನೊಂದು ದೊಡ್ಡ ನಿರ್ಧಾರಕ್ಕೆ ಸಜ್ಜಾಗುತ್ತಿರುವುದು ಸ್ಪಷ್ಟವಾಗುತ್ತಿದೆ.
ಕೇವಲ ಎರಡೇ ವಾರಗಳಲ್ಲಿ ಶೂನ್ಯ ಬ್ಯಾಲೆನ್ಸ್ನ ಜನ್ಧನ್ ಖಾತೆಗಳಿಗೆ ಸುಮಾರು 21 ಸಾವಿರ ಕೋಟಿ ರೂ. ಹಣ ಹರಿದು ಬಂದಿರುವುದು ಸರಕಾರವನ್ನು ಉತ್ತೇಜಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಗುಪ್ತವಾಗಿ ಇಟ್ಟಿರುವ ಅಥವಾ ಲೆಕ್ಕ ಕೊಡದ ಠೇವಣಿಗಳ ಮೇಲೆ 60% ತೆರಿಗೆ ಹಾಕುವ ಬಗ್ಗೆ ಗುರುವಾರ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿದೆ ಎಂದು ತಿಳಿದುಬಂದಿದೆ.
ಲೆಕ್ಕ ನೀಡದ ಮತ್ತು ಆದಾಯ ತೆರಿಗೆ ವಿವರ ಸಲ್ಲಿಸದ ಬ್ಯಾಂಕ್ ಠೇವಣಿಗಳಿಗೆ 60% ತೆರಿಗೆ ವಿಧಿಸುವ ಸಂಬಂಧ ಆದಾಯ ತೆರಿಗೆ ಕಾಯಿದೆಗೆ ತಿದ್ದುಪಡಿ ತರುವ ಕುರಿತಂತೆಯೂ ಸಂಪುಟ ಸಭೆಯಲ್ಲಿ ವಿಸ್ತೃತ ಸಮಾಲೋಚನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಜನ್ಧನ್ ಖಾತೆಗಳಿಗೆ ಕೇವಲ 2 ವಾರಗಳಲ್ಲಿ 21 ಸಾವಿರ ಕೋಟಿ ರೂ. ಹರಿದುಬಂದಿದೆ ಎಂದು ಬ್ಯಾಂಕ್ಗಳು, ಕೇಂದ್ರ ಸರಕಾರದ ಗಮನಕ್ಕೆ ತಂದಿರುವುದೇ ಸಂಪುಟ ಸಭೆಯಲ್ಲಿ ಹಠಾತ್ ಚರ್ಚೆಗೆ ಬರಲು ಕಾರಣ. ಇದು ಕಾಳಧನಿಕರ ಹಣವೇ ಆಗಿರುವ ಎಲ್ಲಾ ಸಾಧ್ಯತೆ ಇದೆ ಎಂಬುದು ಸರಕಾರದ ಶಂಕೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಯಾರೂ ನೀಡುತ್ತಿಲ್ಲ. ಸಂಸತ್ತಿನ ಕಲಾಪ ನಡೆಯುವ ಸಂದರ್ಭದಲ್ಲೇ ಸಂಪುಟ ಸಭೆ ನಡೆದರೆ, ಸಭೆಯ ಅಧಿಕೃತ ಮಾಹಿತಿಯನ್ನು ಸರಕಾರ ಬಹಿರಂಗಪಡಿಸುವುದಿಲ್ಲ. ನೀತಿ ನಿರ್ಧಾರಗಳ ವಿಷಯದಲ್ಲಿ ಇದು ನಡೆದು ಬಂದಿರುವ ಸಂಪ್ರದಾಯ ಎನ್ನುತ್ತವೆ ಮೂಲಗಳು.
ಆದಾಯ ತೆರಿಗೆ ಕಾಯಿದೆಗೆ ಚಳಿಗಾಲದ ಅಧಿವೇಶನದಲ್ಲೇ ತಿದ್ದುಪಡಿ ತಂದು, ಕಾಳಧನಿಕರಿಗೆ 60% ತೆರಿಗೆ ಹಾಕಲು ಸರಕಾರ ಚಿಂತನೆ ನಡೆಸುತ್ತಿದೆ. ಜನ್ಧನ್ ಖಾತೆಗಳಿಗೆ ಬಂದಿರುವ ಬೇನಾಮಿ ಠೇವಣಿಗಳ ಮೇಲೆ ಸರಕಾರ ಕಣ್ಣಿಟ್ಟಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.
ಚಿನ್ನದ ಸಂಗ್ರಹದ ಮೇಲೂ ಕಣ್ಣು
ಕೌಟುಂಬದ ಚಿನ್ನ ಸಂಗ್ರಹಕ್ಕೂ ಮಿತಿ ಹೇರುವ ಕುರಿತಂತೆಯೂ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಆದರೆ, ಇದು ಸಂಪುಟ ಸಭೆಯಲ್ಲಿ ಚರ್ಚೆಗೆ ಬಂತೇ ಎಂಬ ವಿಷಯ ತಿಳಿದುಬಂದಿಲ್ಲ.
ಜನರು ಹಳೆಯ ನೋಟುಗಳನ್ನು ಸುಡುವ ಬದಲು ಬ್ಯಾಂಕ್ ಖಾತೆಗಳಿಗೆ ಹಾಕುವುದನ್ನು ಸರಕಾರ ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ ಠೇವಣಿ ಯೋಜನೆ ಅಥವಾ ನಗದು ಉಳಿತಾಯ ಬಾಂಡ್ಗಳನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
500 ಮತ್ತು 1,000 ನೋಟುಗಳ ರದ್ದಿನಿಂದ 86% ಕರೆನ್ಸಿ ಚಲಾವಣೆಯಿಂದ ಹೊರಹೋದಂತಾಗಿದೆ. ಜತೆಗೆ, 14 ಲಕ್ಷ ಕೋಟಿ ರೂ. ಮೌಲ್ಯದ ಕರೆನ್ಸಿಯನ್ನು ಚಲಾವಣೆಯಿಂದ ಹಿಂಪಡೆದಂತಾಗಿದೆ.
ಆದಾಯ ತೆರಿಗೆ ಇಲಾಖೆಯ ಕಣ್ಣು
ನವೆಂಬರ್ 10ರಿಂದ ಡಿಸೆಂಬರ್ 30ರ ವರೆಗೆ ಬ್ಯಾಂಕ್ ಸೇರಿದಂತೆ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಬರುವ ನಾನಾ ರೀತಿಯ ಠೇವಣಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಚಿತ್ತ ನೆಟ್ಟಿದೆ.
2.5 ಲಕ್ಷ ರೂ.ಮಿತಿಗಿಂತ ಹೆಚ್ಚಿನ ಎಲ್ಲಾ ಠೇವಣಿಗಳನ್ನು ಅದು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.
ಮಿತಿ ದಾಟಿದ ಠೇವಣಿಗಳಿಗೆ 200% ದಂಡ ವಿಧಿಸುವುದಾಗಿ ಈಗಾಗಲೇ ಐಟಿ ಇಲಾಖೆ ಸೂಚನೆ ನೀಡಿದೆ.
ಜನರು ಇದಕ್ಕೆ ಬೆದರಿ ಹಳೆಯ ನೋಟುಗಳನ್ನು ಸುಟ್ಟು ಹಾಕುತ್ತಿದ್ದಾರೆ ಎನ್ನಲಾಗಿದೆ.