ಆ್ಯಪ್ನಗರ

ಪತ್ರಕರ್ತನ ಕೊಲೆ: ರಾಮ್‌ ರಹೀಮ್‌ಗೆ ಶಿಕ್ಷೆ

ಪಂಚಕುಲದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ರಾಮ್‌ ರಹೀಂ ಮತ್ತು ಇತರ ಮೂವರಿಗೆ ಶಿಕ್ಷೆ ವಿಧಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಜನವರಿ 17ರಂದು ಪ್ರಕಟಿಸಲಿದೆ.

Vijaya Karnataka 12 Jan 2019, 5:00 am
ಪಂಚಕುಲ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ರಾಮ್‌ ರಹೀಂ ಸಿಂಗ್‌ನನ್ನು ಪತ್ರಕರ್ತ ರಾಮ್‌ ಚಂದರ್‌ ಛತ್ರಪತಿ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಲಾಗಿದೆ.
Vijaya Karnataka Web ramrahim


ಪಂಚಕುಲದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ರಾಮ್‌ ರಹೀಂ ಮತ್ತು ಇತರ ಮೂವರಿಗೆ ಶಿಕ್ಷೆ ವಿಧಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಜನವರಿ 17ರಂದು ಪ್ರಕಟಿಸಲಿದೆ.

ಡೇರಾ ಮ್ಯಾನೇಜರ್‌ ಕೃಷ್ಣ ಲಾಲ್‌ ಮತ್ತು ಪತ್ರಕರ್ತನನ್ನು ಗುಂಡಿಟ್ಟು ಸಾಯಿಸಿದ ಶೂಟರ್‌ಗಳಾದ ಕುಲ್‌ ದೀಪ್‌ ಸಿಂಗ ಮತ್ತು ನಿರ್ಮಲ್‌ ಸಿಂಗ್‌ ಶಿಕ್ಷೆಗೆ ಒಳಗಾದ ಇತರ ಮೂವರು.

ಶಿಕ್ಷೆ ಪ್ರಕಟಣೆ ವೇಳೆ ಮೂವರು ಅಪರಾಧಿಗಳು ಕೋರ್ಟ್‌ನಲ್ಲಿ ಹಾಜರಿದ್ದರೆ, ರಾಮ್‌ ರಹೀಂ ಸಿಂಗ್‌ನನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ಗೆ ಹಾಜರುಪಡಿಸಲಾಯಿತು.

ಬಿಗಿ ಭದ್ರತೆ: ಈ ನಡುವೆ, ಕೋರ್ಟ್‌ ತೀರ್ಪು ನೀಡುವ ವೇಳೆ ಹಿಂಸಾಚಾರ ಭುಗಿಲೇಳಬಹುದು ಎಂಬ ಭಯದಲ್ಲಿ ಪೊಲೀಸರು ಹರಿಯಾಣ ಮತ್ತು ಪಂಜಾಬ್‌ನ ಕೆಲವು ಭಾಗಗಳಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಸಜ್ಜುಗೊಳಿಸಿದ್ದರು. 2017ರ ಆಗಸ್ಟ್‌ನಲ್ಲಿ , ಇಬ್ಬರು ಮಹಿಳೆಯರ ರೇಪ್‌ ಪ್ರಕರಣದಲ್ಲಿ ಶಿಕ್ಷೆ ವಿಧಿಸಿದಾಗ ಪಂಚಕುಲದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದು 40 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಪ್ರಸಕ್ತ ಸುನಾರಿಯಾ ಜೈಲಿನಲ್ಲಿ ಕೂಡಿ ಹಾಕಲಾಗಿದೆ.

ಕೊಲೆ ನಡೆದಿದ್ದೇಕೆ?

ರಾಮ್‌ಚಂದರ್‌ ಛತ್ರಪತಿ ಅವರು 'ಪೂರಾ ಸಚ್ಚಾ' ಎಂಬ ಪ್ರಾದೇಶಿಕ ಸಂಜೆ ಪತ್ರಿಕೆಯ ಸಂಪಾದಕರಾಗಿದ್ದರು. 2002ರಲ್ಲಿ ಈ ಪತ್ರಿಕೆಯಲ್ಲಿ ಪ್ರಕಟವಾದ ಅನಾಮಿಕ ಪತ್ರವೊಂದರಲ್ಲಿ ಡೇರಾ ಸಚ್ಚಾ ಸೌದಾದಲ್ಲಿ ಮಹಿಳಾ ಭಕ್ತರ ಮೇಲೆ ರಾಮ್‌ ರಹೀಮ್‌ ಸಿಂಗ್‌ ನಡೆಸುತ್ತಿದ್ದ ಲೈಂಗಿಕ ಶೋಷಣೆಯನ್ನು ಒಬ್ಬ ಸಾಧ್ವಿ ವಿವರಿಸಿದ್ದರು. ಈ ಪತ್ರವನ್ನು ಸ್ವಯಂಪ್ರೇರಿತ ದೂರಾಗಿ ಸ್ವೀಕರಿಸಿದ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ 2002 ಸೆಪ್ಟೆಂಬರ್‌ 22ರಂದು ತನಿಖೆಗೆ ಆದೇಶಿಸಿತ್ತು.

ಪೂರಾ ಸಚ್ಚಾದಲ್ಲಿ ಪ್ರಕಟವಾದ ಪತ್ರದಿಂದ ಸಂಕಟ ಎದುರಾಗಿದ್ದನ್ನು ಅರಿತ ರಾಮ್‌ ರಹೀಂ, ಡೇರಾ ಮ್ಯಾನೇಜರ್‌ ಕೃಷನ್‌ ಲಾಲ್‌ ಮೂಲಕ ರಾಮ್‌ಚಂದರ್‌ ಅವರನ್ನು ಕೊಲೆ ಮಾಡಿಸಲು ನಿರ್ಧರಿಸಿದ. ಈ ಕಾರ್ಯತಂತ್ರದಂತೆ, ಕುಲ್ದೀಪ್‌ ಸಿಂಗ್‌ ಮತ್ತು ನಿರ್ಮಲ್‌ ಸಿಂಗ್‌ ಎಂಬ ಶೂಟರ್‌ಗಳು 2002ರ ಅಕ್ಟೋಬರ್‌ 24ರಂದು ಛತ್ರಪತಿಯ ಮನೆಯ ಮುಂದೆಯೇ ಗುಂಡಿನ ದಾಳಿ ನಡೆಸಿದರು. ಮೂರು ವಾರಗಳ ನಂತರ ರಾಮ್‌ ಚಂದರ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಈ ಪ್ರಕರಣದಲ್ಲಿ ಡೇರಾ ಮುಖ್ಯಸ್ಥನ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಸಿಬಿಐನ ಮಾಜಿ ಅಧಿಕಾರಿ, ಕಾಸರಗೋಡಿನ ಮುಳಿಂಜದ ನಾರಾಯಣನ್‌ ಅವರು ಇತ್ತೀಚೆಗೆ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ