ಆ್ಯಪ್ನಗರ

ರಾಜಕೀಯ ಸೋಂಕು ಅಭಿವೃದ್ಧಿಯಿಂದ ಹೊರಗಿರಲಿ: ನರೇಂದ್ರ ಮೋದಿ

ಮೂಲಸೌಕರ್ಯ ಅಭಿವೃದ್ಧಿ ವಿಷಯದಲ್ಲಿ ಅನಗತ್ಯ ರಾಜಕೀಯ ಬೆರೆಸುವುದರಿಂದ ಯೋಜನೆಗಳ ಜಾರಿ ವಿಳಂಬ-ಗೊಳ್ಳುತ್ತದೆ. ಅದರಿಂದ ಸರಣಿ ಹಿನ್ನಡೆ ಸೃಷ್ಟಿಯಾಗುತ್ತದೆ. ನಾವು ಸ್ಪರ್ಧೆ ಮಾಡುವುದಾದರೆ ಮೂಲಸೌಕರ್ಯಗಳ ಗುಣಮಟ್ಟದ ವಿಷಯದಲ್ಲಿ ಮಾಡೋಣ.

Vijaya Karnataka Web 29 Dec 2020, 11:46 pm
ಹೊಸದಿಲ್ಲಿ: ''ದೇಶದ ಭವ್ಯ ಭವಿಷತ್ತಿಗೆ ಮುನ್ನುಡಿ ಬರೆಯಲು ಮೂಲ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳು ತುಂಬ ಮುಖ್ಯ. ಇವುಗಳ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಅಭಿವೃದ್ಧಿಯ ಫಲ ಐದು ವರ್ಷಕ್ಕೆ ಮುಗಿದು ಹೋಗುವುದಿಲ್ಲ. ಅವು ಮುಂದಿನ ತಲೆಮಾರುಗಳನ್ನು ಪ್ರಭಾವಿಸುತ್ತವೆ,'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Vijaya Karnataka Web ನರೇಂದ್ರ ಮೋದಿ
ನರೇಂದ್ರ ಮೋದಿ


ಉತ್ತರ ಪ್ರದೇಶದ ಹೊಸ ಭೌಪುರ್‌-ಹೊಸ ಖುರ್ಜಾ ನಡುವಿನ ಸರಕು ಸಾಗಣೆ ರೈಲು ಕಾರಿಡಾರ್‌ ಹಾಗೂ ಪೂರ್ವ-ವಲಯ ನಿಯಂತ್ರಣ ಕೇಂದ್ರಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಅಭಿವೃದ್ಧಿ ಯೋಜನೆಗಳನ್ನು ತ್ವರಿತಗೊಳಿಸುವ ವಿಷಯದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾದ ಅಗತ್ಯದ ಕುರಿತು ಒತ್ತಿ ಹೇಳಿದರು.

''ಮೂಲಸೌಕರ್ಯ ಅಭಿವೃದ್ಧಿ ವಿಷಯದಲ್ಲಿ ಅನಗತ್ಯ ರಾಜಕೀಯ ಬೆರೆಸುವುದರಿಂದ ಯೋಜನೆಗಳ ಜಾರಿ ವಿಳಂಬ-ಗೊಳ್ಳುತ್ತದೆ. ಅದರಿಂದ ಸರಣಿ ಹಿನ್ನಡೆ ಸೃಷ್ಟಿಯಾಗುತ್ತದೆ. ನಾವು ಸ್ಪರ್ಧೆ ಮಾಡುವುದಾದರೆ ಮೂಲಸೌಕರ್ಯಗಳ ಗುಣಮಟ್ಟದ ವಿಷಯದಲ್ಲಿ ಮಾಡೋಣ. ವೇಗ ಮತ್ತು ಅಭಿವೃದ್ಧಿಯ ವಿಸ್ತಾರದ ವಿಷಯದಲ್ಲಿ ಸೆಣಸೋಣ'' ಎಂದು ಕರೆ ನೀಡಿದರು.

''ಮೂಲ ಸೌಕರ್ಯವು ಯಾವುದೇ ರಾಷ್ಟ್ರದ ಪಾಲಿಗೆ ಶಕ್ತಿಯ ದೊಡ್ಡ ಮೂಲ ಎನಿಸಬಲ್ಲದು. ಭಾರತವು ಆರ್ಥಿಕ ಬಲಾಢ್ಯ ರಾಷ್ಟ್ರವಾಗಿ ಬೆಳೆಯುತ್ತಿದೆ. ಈ ಹಂತದಲ್ಲಿಮೂಲ ಸೌಕರ್ಯ ಸುಧಾರಣೆ ನಮ್ಮ ಸರಕಾರದ ಆದ್ಯತೆ ಎನಿಸಿದೆ. ಕಳೆದ ಐದು ವರ್ಷಗಳಿಂದ ಮೂಲ ಸೌಕರ್ಯಗಳ ಅಭಿವೃದ್ಧಿಯ ವೇಗವನ್ನು ಹೆಚ್ಚಳ ಮಾಡಲಾಗಿದೆ. ಸಾಧ್ಯವಾದ ಕಡೆಗಳಲ್ಲೆಲ್ಲ ಆಧುನಿಕತೆಯ ಸ್ಪರ್ಶ ನೀಡಲಾಗಿದೆ. ಹೆದ್ದಾರಿ, ರೈಲ್ವೆ, ವಿಮಾನ, ಜಲ ಸಾರಿಗೆ ಮತ್ತು ತಂತ್ರಜ್ಞಾನ ಮಾರ್ಗಗಳನ್ನು ವಿಸ್ತರಿಸಿ ಸಮರ್ಥವಾಗಿ ಬಳಸಿಕೊಳ್ಳುವತ್ತ ಗಮನ ಹರಿಸಲಾಗುತ್ತಿದೆ'' ಎಂದು ವಿವರಿಸಿದರು.

ಈ ಹಿಂದಿನ ಸರಕಾರಗಳು ಅನಗತ್ಯ ರಾಜಕೀಯ ಕೆಸರೆರಚಾಟದಲ್ಲಿ ಮುಳುಗಿದ್ದರಿಂದ ಅಭಿವೃದ್ದಿ ಯೋಜನೆಗಳು ಕುಂಠಿತಗೊಂಡಿದ್ದವು. ದೇಶದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಪ್ರತಿಪಕ್ಷಗಳು ಈಗಲೂ ಹಳೆ ಚಾಳಿಯನ್ನೇ ಮುಂದುವರಿಸಿವೆ ಎಂದು ಛೇಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ