ಆ್ಯಪ್ನಗರ

ಅಕ್ರಮ ಆಸ್ತಿ ಗಳಿಕೆಯಲ್ಲಿ ಡಿಕೆಶಿ ವಿಶ್ವದಾಖಲೆ- ಜಾಮೀನು ಅರ್ಜಿ ವಿಚಾರಣೆಯಲ್ಲಿ ಇಡಿ ವಾದ

ಡಿಕೆ ಶಿವಕುಮಾರ್ ಅವರು ಅಕ್ರಮ ಆಸ್ತಿ ಗಳಿಕೆಯಲ್ಲಿ ವಿಶ್ವದಾಖಲೆ ಮಾಡಿದ್ದಾರೆ ಎಂದು ಇಡಿ ಪರ ವಕೀಲ ಕೆ.ಎಂ ನಟರಾಜ್ ದೆಹಲಿ ಹೈ ಕೋರ್ಟ್‌ನಲ್ಲಿ ನಡೆಯುತ್ತಿರುವ ಜಾಮೀನು ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ವಾದ ಮಾಡಿದ್ದಾರೆ.

Vijaya Karnataka Web 17 Oct 2019, 6:23 pm
ಹೊಸದೆಹಲಿ: ಡಿಕೆ ಶಿವಕುಮಾರ್ ಅವರು ಮಗಳು ಐಶ್ವರ್ಯ ಈಗಷ್ಟೇ ಪದವಿ ಮುಗಿಸಿದ್ದಾರೆ. ಆದರೆ ಆಕೆಯ ಹೆಸರಿನಲ್ಲಿ 108 ಕೋಟಿ ಆಸ್ತಿ ಇದೆ. ಮಗಳ ಹೆಸರಿನಲ್ಲಿ 80 ಕೋಟಿ ಸಾಲ ಇದ್ದು, ಇದರಲ್ಲಿ 40 ಕೋಟಿ ರೂಪಾಯಿ ಸಾಲ ಯಾರು ನೀಡಿದ್ದಾರೆ ಎಂಬುವುದು ಸ್ವತಃ ಆಕೆಗೂ ತಿಳಿದಿಲ್ಲ ಎಂಬ ವಿಚಾರವನ್ನು ಇಡಿ ಪರ ವಕೀಲ ಕೆ.ಎಂ ನಟರಾಜ್ ಪ್ರಸ್ತಾಪಿಸಿದ್ದಾರೆ. ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲು ಸೇರಿರುವ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ದೆಹಲಿ ಹೈ ಕೋರ್ಟ್‌ನಲ್ಲಿ ನಡೆಯುತ್ತಿದೆ.
Vijaya Karnataka Web dk shivakumar


ವಿಚಾರಣೆಯ ಸಂದರ್ಭದಲ್ಲಿ ಡಿಕೆಶಿ ಪ್ರಕರಣ ಗಂಭೀರವಾಗಿರುವ ಕಾರಣಕ್ಕಾಗಿ ಜಾಮೀನು ನೀಡಬಾರದು ಎಂದು ಒತ್ತಾಯಿಸಿರುವ ಇಡಿ ಪರ ವಕೀಲ ಕೆ.ಎಂ ನಟರಾಜ್ ಡಿಶಿಕೆ ಅಕ್ರಮ ಆಸ್ತಿ ಗಳಿಕೆಯಲ್ಲಿ ವಿಶ್ವದಾಖಲೆ ಮಾಡಿದ್ದಾರೆ ಎಂದು ವಾದ ಮಾಡಿದರು. ಪ್ರಕರಣ ಹಲವು ಆಯಾಮಗಳ ಕುರಿತಾದ ವಿವರಗಳನ್ನು ನ್ಯಾಯಮೂರ್ತಿಗಳ ಮುಂದೆ ತೆರೆದಿಟ್ಟ ಅವರು, ಡಿಕೆಶಿ ಪ್ರಕರಣ ದೇಶದ ಆರ್ಥಿಕತೆಗೆ ಹೊಡೆತ ನೀಡಿದ ಪ್ರಕರಣವಾಗಿದ್ದು ಇದರಲ್ಲಿ ಆಳವಾದ ಷಡ್ಯಂತ್ರ ನಡೆದಿದೆ ಎಂದಿದ್ದಾರೆ.

ಡಿಕೆಶಿ ಪತ್ನಿ, ತಾಯಿಗೆ ನೀಡಿದ್ದ ಇಡಿ ಸಮನ್ಸ್‌ಗೆ ತಾತ್ಕಾಲಿಕ ತಡೆ ನೀಡಿದ ದಿಲ್ಲಿ ಹೈಕೋರ್ಟ್‌

ನ್ಯಾಯಾಲಯದ ಮುಂದೆ ಪಿಎಂಎಲ್‌ಎ ಪ್ರಕರಣದಲ್ಲಿ ಬಂಧನವಾಗಿದ್ದ ಹಸನ್ ಅಲಿ ಖಾನ್ ಪ್ರಕರಣವನ್ನು ಉಲ್ಲೇಖಿಸಿದ ಇಡಿ ಪರ ವಕೀಲ ಕೆ.ಎಂ ನಟರಾಜ್, ಪಿಎಂಎಎಲ್ ಕಾಯಿದೆಯಡಿಯಲ್ಲಿ ಹನಸ್ ಅಲಿಗೆ ಜಾಮೀನು ನಿರಾಕರಣೆ ಮಾಡಲಾಗಿದೆ. ಇದೇ ಪ್ರಕರಣದಡಿಯಲ್ಲಿ ಬಂಧನಕ್ಕೊಳಗಾಗಿರುವ ಪಿ. ಚಿದಂಬರಂ ಅವರಿಗೂ ಜಾಮೀನು ನಿರಾಕರಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರಿಗೂ ಜಾಮೀನು ನೀಡದಂತೆ ಮನವಿ ಮಾಡಿದರು.

ಇಡಿ ತನಿಖೆಯಲ್ಲಿ ಡಿಕೆಶಿ ಬಳಿ 300 ಕಡೆಗಳಲ್ಲಿ ಆಸ್ತಿ ಇರುವುದು ಪತ್ತೆಯಾಗಿದೆ. ಆದರೆ ಇದಕ್ಕೆ ಸೂಕ್ತವಾದ ದಾಖಲೆಗಳು ಇಲ್ಲ. ಕೃಷಿಯಿಂದ ಆಸ್ತಿ ಸಂಪಾದನೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಕೃಷಿಯಿಂದ ಇಷ್ಟು ಪ್ರಮಾಣದಲ್ಲಿ ಹಣ ಸಂಪಾದನೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ವಕೀಲರು, ಕಳೆದ 20 ವರ್ಷಗಳಲ್ಲಿ ಕೃಷಿಯಿಂದ ಗಳಿಕೆಯಾದ ಆದಾಯ 1.37 ಕೋಟಿ ಮಾತ್ರ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಡಿಕೆಶಿ ಬಳಿ ಇರುವ ಕೋಟಿ ಕೋಟಿ ಹಣಕ್ಕೆ ದಾಖಲೆಗಳು ಇಲ್ಲ. ತನಿಖೆ ಸಂದರ್ಭದಲ್ಲಿ ಕೋಟಿ ಕೋಟಿ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ . ದಾಳಿಯ ಸಂದರ್ಭದಲ್ಲಿ ಡಿಕೆಶಿ ಬಳಿ ಬ್ಯಾನ್ ಆಗಿರುವ ಹಾಗೂ ಹೊಸ ನೋಟುಗಳು ಸಿಕ್ಕಿವೆ. ಈ ಕಾರಣಕ್ಕಾಗಿ ಹಣದ ವರ್ಗಾವಣೆ ಬಗ್ಗೆ ಸಂಪೂರ್ಣ ತನಿಖೆ ಆಗಬೇಕಿದೆ. ಯಾವುದೇ ಮೂಲ ಇಲ್ಲದೆ ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದಿರುವ ಇಡಿ ಪರ ವಕೀಲ ನಟರಾಜ್, ಸಾಕ್ಷಗಳನ್ನು ತಿರುಚುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬಾರದು ಎಂದು ವಿನಂತಿಸಿದರು.

ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ದೆಹಲಿ ಹೈ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ಡಿಕೆಶಿ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ