ಆ್ಯಪ್ನಗರ

ಬಂಗಾಳದಲ್ಲಿ ಈಗ ದೀದಿ ವರ್ಸಸ್‌ ಡಾಕ್ಟರ್ಸ್‌ ಫೈಟ್‌

ರೋಗಿಯೊಬ್ಬರ ಸಂಬಂಧಿಕರಿಂದ ಹಲ್ಲೆಗೊಳಗಾಗಿ, ಸಾವು ಬದುಕಿನ ನಡುವೆ ಹೋರಾಡುತ್ತಿರುವ ವೈದ್ಯನನ್ನು ದಾಖಲಿಸಲಾಗಿರುವ 'ಎನ್‌ಆರ್‌ಎಸ್‌' ಮೆಡಿಕಲ್‌ ಕಾಲೆಜಿಗೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ವಿಚಾರಿಸುವುದನ್ನು ಬಿಟ್ಟು ಮಮತಾ ಬೇರೋಂದು ಆಸ್ಪತ್ರೆಗೆ ಭೇಟಿ ನೀಡಿದ್ದರಿಂದ ವೈದ್ಯರು ಸಿಟ್ಟಿಗೆದ್ದರು.

Agencies 13 Jun 2019, 10:14 pm
ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ವೈದ್ಯರ ನಡುವೆ ಸಂಘರ್ಷ ಗುರುವಾರ ತಾರಕಕ್ಕೇರಿದೆ. ಸಿಎಂ ಅವರ ಖಡಕ್‌ ಆದೇಶಕ್ಕೆ ಸಡ್ಡು ಹೊಡೆದು ಕಿರಿಯ ವೈದ್ಯರು ಪ್ರತಿಭಟನೆ ಮುಂದುವರೆಸಿದ್ದಾರೆ. ಮಮತಾ ನೀಡಿದ್ದ 4 ಗಂಟೆಗಳ ಗಡುವನ್ನೂ ಲೆಕ್ಕಿಸದೆ ಸೇವೆಗೆ ಹಾಜರಾಗಲು ನಿರಾಕರಿಸಿದ್ದಾರೆ.
Vijaya Karnataka Web ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ


ಅಲ್ಲದೆ, ವೈದ್ಯರ ಮುಷ್ಕರಕ್ಕೆ ಅಮಿತ್‌ ಶಾ ಹಾಗೂ ಸಿಪಿಎಂ ಕಾರಣ ಎಂದು ಮಮತಾ ಆರೋಪಿಸುವುದರೊಂದಿಗೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಹಾಗೂ ಸಿಪಿಎಂ ನಾಯಕರು ತಮ್ಮ ಬಳಿ ಇರುವ ಆರೋಗ್ಯ ಖಾತೆಯನ್ನು ಮಮತಾ ಬೇರೆಯವರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಗುರುವಾರ ಮಧ್ಯಾಹ್ನ 2 ಗಂಟೆಯೊಳಗೆ ವೈದ್ಯರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಮರಳದಿದ್ದರೆ, ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ದೀದಿ ಎಚ್ಚರಿಸಿದ್ದರು. ಗುರುವಾರ ಕೋಲ್ಕೊತಾದ 'ಎಸ್‌ಎಸ್‌ಕೆಎಂ' ಆಸ್ಪತ್ರೆಗೆ ಭೇಟಿ ನೀಡಿದ ಅವರು, ''ಜನಸೇವೆ ಮಾಡದವರು ವೈದ್ಯರೇ ಅಲ್ಲ. ಪ್ರತಿಭಟನೆ ನಿಲ್ಲಿಸದಿದ್ದರೆ ಹಾಸ್ಟೆಲ್‌ ಖಾಲಿ ಮಾಡಿಸಲಾಗುವುದು,'' ಎಂದು ಗುಡುಗಿದರು. ''ಬಿಜೆಪಿ ಮತ್ತು ಸಿಪಿಎಂ ಮುಷ್ಕರದ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ. ಇದಕ್ಕೂ ಹಿಂದೂ-ಮುಸ್ಲಿಂ ಬಣ್ಣ ಬಳಿಯಲಾಗುತ್ತಿದೆ'' ಎಂದು ಆರೋಪಿಸಿದರು.

ವೈದ್ಯರ ಆಕ್ರೋಶ: ರೋಗಿಯೊಬ್ಬರ ಸಂಬಂಧಿಕರಿಂದ ಹಲ್ಲೆಗೊಳಗಾಗಿ, ಸಾವು ಬದುಕಿನ ನಡುವೆ ಹೋರಾಡುತ್ತಿರುವ ವೈದ್ಯನನ್ನು ದಾಖಲಿಸಲಾಗಿರುವ 'ಎನ್‌ಆರ್‌ಎಸ್‌' ಮೆಡಿಕಲ್‌ ಕಾಲೆಜಿಗೆ ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ವಿಚಾರಿಸುವುದನ್ನು ಬಿಟ್ಟು ಮಮತಾ ಅವರು ಬೇರೋಂದು ಆಸ್ಪತ್ರೆಗೆ ಭೇಟಿ ನೀಡಿದ್ದರಿಂದ ವೈದ್ಯರು ಸಿಟ್ಟಿಗೆದ್ದರು. ''ಮಮತಾ ಅವರ ಮಾತಿನ ಧಾಟಿಯನ್ನು ನೋಡಿದರೆ, ಅವರಿಗೆ ಪರಿಹಾರ ಬೇಡವೆಂದು ಕಾಣುತ್ತದೆ. ನೇರವಾಗಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗುವ ವೈದ್ಯರ ಬಗ್ಗೆ ಕಳಕಳಿ ತೋರಿ, ಅವರ ರಕ್ಷಣೆಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಮಮತಾ ನಮ್ಮನ್ನು ಹಾಸ್ಟೆಲ್‌ ತೊರೆಯುವಂತೆ ಬೆದಿರಿಸಿದ್ದಾರೆ. ನಾವು ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ,'' ಎಂದು ಕಿರಿಯ ವೈದ್ಯರು ಹೇಳಿದ್ದಾರೆ.

ಹಿರಿಯ ವೈದ್ಯರಿಗೆ ಪತ್ರ
- ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎಲ್ಲಾ ಮೆಡಿಕಲ್‌ ಕಾಲೇಜುಗಳ ಹಿರಿಯ ವೈದ್ಯರಿಗೆ ಪತ್ರ ಬರೆದು ರೋಗಿಗಳ ಸಂಪೂರ್ಣ ಆರೈಕೆ ನೋಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
-ದಿಲ್ಲಿಯ ಏಮ್ಸ್‌ ವೈದ್ಯರು ಪ.ಬಂಗಾಳದ ಪ್ರತಿಭಟನಾನಿರತ ವೈದ್ಯರಿಗೆ ಬೆಂಬಲ ಸೂಚಿಸುವ ಸಲುವಾಗಿ ಶುಕ್ರವಾರ ಒಂದು ದಿನದ ಮಟ್ಟಿಗೆ ಕೆಲಸವನ್ನು ಬಹಿಷ್ಕರಿಸಲಿದ್ದಾರೆ.

ಪ್ರತಿಭಟನೆಗೆ ಕಾರಣವೇನು?

ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಮೃತಪಟ್ಟನೆಂದು ಆರೋಪಿಸಿದ ಸಂಬಂಧಿಕರು ಎನ್‌ಆರ್‌ಎಸ್‌ ಮೆಡಿಕಲ್‌ ಕಾಲೇಜಿನ ಕಿರಿಯ ವೈದ್ಯರ ಮೇಲೆ ಕಳೆದ ಶನಿವಾರ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಕಿರಿಯ ವೈದ್ಯ ಪರಿಬೊಹೊ ಮುಖರ್ಜಿ ಅವರನ್ನು ಅದೇ ಆಸ್ಪತ್ರೆಗೆ ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ವೈದ್ಯರಿಗೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ