ಆ್ಯಪ್ನಗರ

ಬೆಂಕಿಯಿಂದ 30 ಜನರನ್ನು ರಕ್ಷಿಸಿ ಪ್ರಾಣ ತೆತ್ತ ನಾಯಿ

ಉತ್ತರ ಪ್ರದೇಶದ ಬಾಂದಾ ಪಟ್ಟಣದಲ್ಲಿ ಸಾಕು ನಾಯಿಯೊಂದು ಧಗಧಗಿಸುವ ಬೆಂಕಿಯಿಂದ 30 ಮಂದಿಯನ್ನು ರಕ್ಷಿಸಿದೆ. ಆದರೆ, ದುರದೃಷ್ಟವಶಾತ್‌ ತಾನು ಪ್ರಾಣ ಕಳೆದುಕೊಂಡಿದೆ.

Vijaya Karnataka 14 Apr 2019, 11:52 am
ಬಾಂದಾ: ನಾಯಿಗಳು ಮನುಷ್ಯನ ಆಪ್ತ ಸ್ನೇಹಿತ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಆತ್ಮೀಯರ ಪ್ರಾಣ ರಕ್ಷಣೆಗಾಗಿ ತಮ್ಮ ಪ್ರಾಣವನ್ನೂ ಪಣವಾಗಿಡುವ ಅವುಗಳ ನಿಯತ್ತಿಗೆ ಇನ್ನೊಂದು ನಿದರ್ಶನ ಸಿಕ್ಕಿದೆ.
Vijaya Karnataka Web dog


ಉತ್ತರ ಪ್ರದೇಶದ ಬಾಂದಾ ಪಟ್ಟಣದಲ್ಲಿ ಸಾಕು ನಾಯಿಯೊಂದು ಧಗಧಗಿಸುವ ಬೆಂಕಿಯಿಂದ 30 ಮಂದಿಯನ್ನು ರಕ್ಷಿಸಿದೆ. ಆದರೆ, ದುರದೃಷ್ಟವಶಾತ್‌ ತಾನು ಪ್ರಾಣ ಕಳೆದುಕೊಂಡಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.

ಅದು ನಾಲ್ಕು ಮಹಡಿಗಳ ಕಟ್ಟಡ. ಮೊದಲೆರಡು ಮಹಡಿಗಳಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಪೀಠೋಪಕರಣಗಳ ಶೋ ರೂಂಗಳು, ಮೂರು ಹಾಗೂ ನಾಲ್ಕನೇ ಮಹಡಿಗಳಲ್ಲಿ ಮನೆಗಳು ಇದ್ದವು. ಶುಕ್ರವಾರ ರಾತ್ರಿ ಶಾರ್ಟ್‌ ಸರ್ಕಿಟ್‌ನಿಂದ ಕಟ್ಟಡದ ನೆಲ ಮಾಳಿಗೆಯಲ್ಲಿ ಜೋಡಿಸಿಟ್ಟಿದ್ದ ಸಿಲಿಂಡರ್‌ಗಳು ಸ್ಫೋಟಗೊಂಡು ಬೆಂಕಿ ಹೊತ್ತಿತ್ತು. ಅದು ಕೂಡಲೇ ಮೇಲಿನ ಮಹಡಿಗಳಿಗೆ ಹಬ್ಬಲು ಆರಂಭಿಸಿತ್ತು. ಎಲ್ಲರೂ ಮಲಗಿದ್ದರಿಂದ ಯಾರಿಗೂ ಇದು ಗೊತ್ತಾಗಿರಲಿಲ್ಲ.

ಆದರೆ, ಮೂರನೇ ಮಹಡಿಯ ಮನೆಯೊಂದರಲ್ಲಿದ್ದ ಸಾಕು ನಾಯಿಗೆ ಬೆಂಕಿಯ ಸುಳಿವು ಸಿಕ್ಕಿ ಅದು ಜೋರಾಗಿ ಬೊಬ್ಬಿಡಲು ಶುರು ಮಾಡಿತು. ಬೆಂಕಿಯ ಕಡೆಗೆ ನೋಡಿ ಬೊಗಳುತ್ತಿದ್ದ ಅದರ ಗಲಾಟೆಗೆ ಅಷ್ಟೂ ಮನೆಗಳಲ್ಲಿದ್ದವರು ಎಚ್ಚೆತ್ತು ಕೂಡಲೇ ಕಟ್ಟಡದಿಂದ ಹೊರಗೋಡಿ ಬಂದರು.

ಆದರೆ....: ಮೂವತ್ತಕ್ಕೂ ಅಧಿಕ ಮಂದಿ ಹೊರಗೋಡಿ ಜೀವ ರಕ್ಷಿಸಿಕೊಳ್ಳುವವರೆಗೂ ಒಂದೇ ಸಮನೆ ಬೊಗಳುತ್ತಿದ್ದ ಈ ನಾಯಿ ಅಂತಿಮವಾಗಿ ಸಿಲಿಂಡರ್‌ ಸ್ಫೋಟಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿದೆ. ನಿಜವೆಂದರೆ, ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಪ್ರಾಣ ಉಳಿಸಿಕೊಳ್ಳುವ ಭರದಲ್ಲಿ ಎಲ್ಲರೂ ಓಡಿಹೋದರಾದರೂ ಯಾರೂ ಅದರ ಸರಪಳಿ ಬಿಚ್ಚುವಷ್ಟು ತಾಳ್ಮೆ ತೋರಲಿಲ್ಲ. ಹಾಗಾಗಿ, ನಾಯಿ ಪ್ರಾಣ ಕಳೆದುಕೊಂಡಿತು ಎನ್ನಲಾಗಿದೆ.

ಬೆಂಕಿ ಮತ್ತು ಸಿಲಿಂಡರ್‌ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಸಮೀಪದ ನಾಲ್ಕು ಕಟ್ಟಡಗಳು ಕೂಡಾ ಕುಸಿದುಬಿದ್ದಿವೆ.

ಕುಟುಂಬ ರಕ್ಷಿಸಿದ ನಾಯಿ: ಇತ್ತೀಚೆಗೆ ಭುವನೇಶ್ವರದಲ್ಲಿ ನಾಯಿಯೊಂದು ವಿಷದ ಹಾವನ್ನು ಕೊಂದು ಕುಟುಂಬವನ್ನು ರಕ್ಷಿಸಿದ ಘಟನೆ ನಡೆದಿತ್ತು. ಅಲ್ಲೂ ನಾಯಿ ಪ್ರಾಣಕಳೆದುಕೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ