ಆ್ಯಪ್ನಗರ

ಸಂಖ್ಯೆಗಳ ಬಗ್ಗೆ ಚಿಂತೆಬೇಡ, ಮನಬಿಚ್ಚಿ ಮಾತನಾಡಿ

ಸಂಸತ್ತಿನಲ್ಲಿ ಸಕ್ರಿಯ ಪ್ರತಿಪಕ್ಷಗಳ ಅಗತ್ಯವನ್ನು ಒತ್ತಿ ಹೇಳಿರುವ ಮೋದಿ ಅವರು, ಸರಕಾರ ಪ್ರತಿಪಕ್ಷಗಳ ಒಂದೊಂದು ಮಾತನ್ನು ಅತ್ಯಂತ ಮೌಲ್ಯದಿಂದ ನೋಡುತ್ತದೆ. ಅವರ ಭಾವನೆಗಳಿಗೆ ಬೆಲೆ ಕೊಡುತ್ತದೆ ಎಂದು ಭರವಸೆ ನೀಡಿದ್ದಾರೆ.

PTI 18 Jun 2019, 5:00 am
ಹೊಸದಿಲ್ಲಿ: ಪ್ರತಿಪಕ್ಷಗಳು ತಮ್ಮ ಸಂಖ್ಯಾಬಲದ ಬಗ್ಗೆ ತಲೆಕೆಡಿಸಿಕೊಳ್ಳದೆ, ಸದನದ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ.
Vijaya Karnataka Web pm


ಸಂಸತ್ತಿನಲ್ಲಿ ಸಕ್ರಿಯ ಪ್ರತಿಪಕ್ಷಗಳ ಅಗತ್ಯವನ್ನು ಒತ್ತಿ ಹೇಳಿರುವ ಅವರು, ಸರಕಾರ ಪ್ರತಿಪಕ್ಷಗಳ ಒಂದೊಂದು ಮಾತನ್ನು ಅತ್ಯಂತ ಮೌಲ್ಯದಿಂದ ನೋಡುತ್ತದೆ. ಅವರ ಭಾವನೆಗಳಿಗೆ ಬೆಲೆ ಕೊಡುತ್ತದೆ ಎಂದು ಭರವಸೆ ನೀಡಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಸೋಮವಾರ ಸಂಸತ್‌ ಆವರಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಪ್ರತಿಪಕ್ಷಗಳು ತಮ್ಮ ಸಂಖ್ಯೆಯ ಬಗ್ಗೆ ಆತಂಕಗೊಳ್ಳದೆ, ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತವೆ, ಆ ಮೂಲಕ ಕಲಾಪವನ್ನು ಮತ್ತಷ್ಟು ಫಲಪ್ರದವಾಗಿಸುತ್ತವೆ ಎಂದು ನಾನು ಆಶಿಸುತ್ತೇನೆ. ಲೋಕಸಭೆಯ ಒಳಗೆ ಕಾಲಿಟ್ಟ ಬಳಿಕ ನಾವು ಪಕ್ಷ, ಪ್ರತಿಪಕ್ಷ ಎಂಬುದನ್ನು ಮರೆತುಬಿಡಬೇಕು. 'ನಿಷ್ಪಕ್ಷ' ಹುರುಪಿನೊಂದಿಗೆ ದೇಶದ ಹಿತಕ್ಕಾಗಿ ಒಟ್ಟಿಗೆ ಕೆಸಲ ಮಾಡಬೇಕು,'' ಎಂದರು.

ನೂತನ ಲೋಕಸಭಾ ಸದಸ್ಯರ ಬಗ್ಗೆ ಮಾತನಾಡಿದ ಅವರು, ''ಸ್ವಾತಂತ್ರ್ಯಾ ನಂತರ ಗರಿಷ್ಠ ಸಂಖ್ಯೆಯ ಮಹಿಳಾ ಸಂಸದರು ಈ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಇದೊಂದು ಐತಿಹಾಸಿಕ ವಿದ್ಯಮಾನ. ನೂತನ ಸಂಸದರೊಂದಿಗೆ ಮೊದಲ ಅಧಿವೇಶನವು ಭಾರಿ ಹುಮ್ಮಸ್ಸು ಹಾಗೂ ಹುರುಪಿನಿಂದ ತುಂಬಿರುತ್ತದೆ. ದೇಶದ ಜನರ ಆಶೋತ್ತರಗಳನ್ನು ಈಡೇರಿಸಲು ಇದು ಬಳಕೆಯಾಗಲಿದೆ,'' ಎಂದರು.

''ಈ ಹಿಂದಿನ ಸರಕಾರ 'ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌' ತತ್ವದಂತೆ ಕೆಲಸ ಮಾಡಿತು. ಹೀಗಾಗಿ ಜನರು ಎರಡನೇ ಬಾರಿ ನಮ್ಮ ಮೇಲೆ ನಂಬಿಕೆ ಇಟ್ಟರು. ಮತ್ತೊಮ್ಮೆ ನಮ್ಮ ಸರಕಾರಕ್ಕೆ ಅಧಿಕಾರ ಕೊಟ್ಟರು. ಹಲವು ದಶಕಗಳ ಬಳಿಕ ಪಕ್ಷವೊಂದಕ್ಕೆ ಸರಳ ಬಹುಮತ ನೀಡಿದರು,'' ಎಂದು ಮೋದಿ ಹೇಳಿದರು.

ರಬ್ಬರ್‌ ಸ್ಟ್ಯಾಂಪ್‌ ಆಗದಿರಲಿ: ಕಾಂಗ್ರೆಸ್‌
ಪ್ರಧಾನಿ ಮೋದಿ ನೇತೃತ್ವದ ಹಿಂದಿನ ಸರಕಾರ ಸಂಸತ್ತನ್ನು 'ರಬ್ಬರ್‌ ಸ್ಟ್ಯಾಂಪ್‌'ನಂತೆ ಬಳಸಿಕೊಂಡಿತು ಎಂದು ಕಾಂಗ್ರೆಸ್‌ ನಾಯಕ ಆನಂದ್‌ ಶರ್ಮಾ ಆರೋಪಿಸಿದರು. ''ಸುಗ್ರೀವಾಜ್ಞೆಗಳ ಮೂಲಕ ಶಾಸನ ರೂಪಿಸುವುದು ಪ್ರಜಾಪ್ರಭುತ್ವದಲ್ಲಿ ಅತ್ಯಂತ ಅನಾರೋಗ್ಯಕರ ಪದ್ಧತಿ. ತುಂಬಾ ತುರ್ತು ಇದ್ದಾಗ ಮಾತ್ರ ಇಂತಹ ವಿಧಾನ ಬಳಸಬೇಕು. ಕಳೆದ ಬಾರಿ ಲೋಕಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದ ಕಾರಣ, ವಿಧೇಯಕಗಳನ್ನು ಯಾವುದೇ ಚರ್ಚೆ ಇಲ್ಲದೆ ಅನುಮೋದನೆ ಮಾಡಲಾಯಿತು. ಬಹುತೇಕ ವಿಧೇಯಕಗಳನ್ನು ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ವಹಿಸದೆ ಅಂಗೀಕರಿಸಲಾಯಿತು. ಸಂಸತ್ತನ್ನು ಕೇವಲ ರಬ್ಬರ್‌ ಸ್ಟ್ಯಾಂಪ್‌ನಂತೆ ಬಳಸಲಾಯಿತು. ಇದು ಸಂಸತ್ತಿಗೆ ಮಾಡಿದ ಅಪಮಾನ. ಈ ಬಾರಿಯಾದರೂ ಈ ನಿಟ್ಟಿನಲ್ಲಿ ಮೋದಿ ಅವರ ಭರವಸೆ ಈಡೇರುತ್ತದೆಯೇ ಎಂದು ಕಾದು ನೋಡುತ್ತೇವೆ,'' ಎಂದು ಶರ್ಮಾ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ